ಶಿಕ್ಷಕನೇ ಜಗತ್ತಿನ ಶ್ರೇಷ್ಠ ಶಕ್ತಿ, ವಿದ್ಯೆಯೇ ಶ್ರೇಷ್ಠ ಸಂಪತ್ತು ; ಶಿಕ್ಷಣಾಧಿಕಾರಿ ಮಂಜುನಾಥನ್, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ “ಚೈತನ್ಯ ಚಿಲುಮೆ” ಕಾರ್ಯಾಗಾರ
ಬಂಟ್ವಾಳ: ವಿದ್ಯಾರ್ಥಿಗಳ ಜೀವನದಲ್ಲಿ ಹತ್ತನೇ ತರಗತಿ ಮುಂದಿನ ಬದುಕಿಗೆ ದಾರಿ ದೀಪವಾಗಿದೆ, ಮುಂದಿನ ಶಿಕ್ಷಣ ಹೇಗಿರಬೇಕು ಎಂದು ಎಸ್ಸೆಸ್ಸೆಲ್ಸಿಯಲ್ಲಿ ಪಡೆದ ಅಂಕಗಳು ನಿರ್ಣಯಿಸಲಿದೆ ಎಂದು ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಹೇಳಿದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ತಾಲೂಕಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಮಂಗಳವಾರ ನಡೆದ “ಚೈತನ್ಯ ಚಿಲುಮೆ” ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಕನಸು, ಛಲ, ಆತ್ಮವಿಶ್ವಾಸ ಕಟ್ಟಿಕೊಂಡು ಜಗತ್ತಿನ ಶ್ರೇಷ್ಠ ಶಕ್ತಿಯಾದ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಪಡೆದು, ಜಗತ್ತಿನ ಶ್ರೇಷ್ಠ ಸಂಪತ್ತಾಗಿರುವ ವಿದ್ಯೆಯನ್ನು ನಮ್ಮದಾಗಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಮೀಯ್ಯತುಲ್ ಫಲಾಹ್ ಸೌದಿ ಅರೇಬಿಯಾ ಎನ್ನಾರ್ಸಿಸಿ ಅಮೀರ್ ಮೊಹಮ್ಮದ್ ಮನ್ಸೂರ್ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಘಟಕಾದ್ಯಕ್ಷ ರಶೀದ್ ವಿಟ್ಲ ಅದ್ಯಕ್ಷತೆ ವಹಿಸಿದ್ದರು.
ಜಮೀಯ್ಯತುಲ್ ಫಲಾಹ್ ಜಿಲ್ಲಾ ಹಾಗೂ ತಾಲೂಕು ಪೂರ್ವಾದ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಅಜೀವ ಸದಸ್ಯ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್ ಅತಿಥಿಗಳಾಗಿ ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ತರಬೇತುದಾರ, ಶ್ರೀರಂಗಪಟ್ಟಣ ಪರಿವರ್ತನಾ ವಿದ್ಯಾ ಸಂಸ್ಥೆಯ ಚೇತನ್ ರಾಮ್ ಎಂ.ಆರ್. “ಪರೀಕ್ಷೆ ಒಂದು ಹಬ್ಬ : ಸಂಭ್ರಮಿಸಿ” ಎಂಬ ವಿಚಾರದಲ್ಲಿ ಹಾಗೂ ಅಂತಾರಾಷ್ಟ್ರೀಯ ಜಾದೂಗಾರ, ಖ್ಯಾತ ತರಬೇತುದಾರ ಕುದ್ರೋಳಿ ಗಣೇಶ್ “ಕಲಿಕೆಗಾಗಿ ಮೈಂಡ್ ಮ್ಯಾಜಿಕ್” ಎಂಬ ವಿಚಾರದಲ್ಲಿ ತರಭೇತಿ ನೀಡಿದರು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ, ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಆಡಳಿತಾಧಿಕಾರಿ ಜಮಾಲುದ್ದೀನ್, ಪೂರ್ವಾದ್ಯಕ್ಷರುಗಳು, ಸದಸ್ಯರುಗಳು ಭಾಗವಹಿಸಿದ್ದರು.
ಇದೇ ವೇಳೆ ಎನ್ನಾರ್ಸಿಸಿ ಅಮೀರ್ ಮೊಹಮ್ಮದ್ ಮನ್ಸೂರ್ ಅವರನ್ನು ಅಭಿನಂದಿಸಲಾಯಿತು. ಶಿಕ್ಷಣ ಸಂಯೋಜಕಿ ಸುಜಾತಾ ಕುಮಾರಿ ಅವರನ್ನು ಗೌರವಿಸಲಾಯಿತು.
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ರಶೀದ್ ವಿಟ್ಲ ಸ್ವಾಗತಿಸಿ, ಜಿಲ್ಲಾಧ್ಯಕ್ಷ ಕೆ.ಕೆ.ಸಾಹುಲ್ ಹಮೀದ್ ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.