2025 ಕ್ಕೆ ಪರಮ ವೈಭವದತ್ತ ಭಾರತ :ಪ್ರಭು
ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜನಸಾಮಾನ್ಯರಿಗೆ ಅತ್ಯವಶ್ಯಕವಾದ ಮತ್ತು ದೇಶದ ಪ್ರಗತಿಗೆ ಪೂರಕವಾದ ಯೋಜನೆ ಮತ್ತು ಯೋಚನೆಗಳು ಅನುಷ್ಠಾನಗೊಳ್ಳುತ್ತಿರುವುದರಿಂದ ರಾಷ್ಟ್ರವು ನಾಗಲೋಟದಲ್ಲಿ ವಿಕಸನಗೊಳ್ಳುತ್ತಿದ್ದು, 2025 ರ ವರ್ಷದ ಅಂಚಿನಲ್ಲಿ ಪರಮ ವೈಭವದತ್ತ ಭಾರತ ಪ್ರಜ್ವಲಿಸಲಿದೆ ಎಂದು ಬಿಜೆಪಿ ಮುಖಂಡ, ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭಾಕರ ಪ್ರಭು ಹೇಳಿದರು.
ಬಂಟ್ವಾಳ ತಾ.ನ ಸಂಗಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ಜರಗಿದ “ವಿಕಸಿತ ಭಾರತ ಸಂಕಲ್ಪಯಾತ್ರೆ” ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರ ಸರಕಾರವು ಜಾರಿಗೆ ತಂದಿರುವ ನೂರಾರು ಮಹತ್ವಾಕಾಂಕ್ಷಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಮೂಲಕ “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಹಾಗೂ “ಎಲ್ಲಕ್ಕಿಂತ ದೇಶ ಮೊದಲು“ಎಂಬ ಪ್ರಧಾನ ಮಂತ್ರಿಗಳ ಕಲ್ಪನೆಯು ಸಾಕಾರಗೊಳ್ಳಲು ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡುವುದರೊಂದಿಗೆ ದೇಶದ ಪ್ರಗತಿಗೆ ಕೈ ಜೋಡಿಸಬೇಕು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುಮನಾ ಶಿವರಾಮ್ ಮಾತಾನಾಡಿ, ಕೇಂದ್ರ ಸರಕಾರವು ಜಾರಿಗೆ ತಂದಿರುವ ವಿವಿಧ ವಿಮಾ ಸೌಲಭ್ಯಗಳನ್ನು ನಾಗರಿಕರು ಪಡೆಯಬೇಕು ಈ ನಿಟ್ಟಿನಲ್ಲಿ ಮುಂದೆ ನಡೆಯುವ ಸರ್ವೆ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನಿಖರ ಮಾಹಿತಿ ನೀಡಬೇಕೆಂದರು.
ಕಾರ್ಯಕ್ರಮದ ಸಂಯೋಜಕ ಬ್ಯಾಂಕ್ ಆಫ್ ಬರೋಡಾ ಸಿದ್ದಕಟ್ಟೆಯ ಶಾಖೆಯ ಸೀನಿಯರ್ ಮೆನೇಜರ್ ಸುರೇಶ ಸಿಂಗ್ ಮಾತಾನಾಡಿ ಸ್ತ್ರೀಶಕ್ತಿ ಮತ್ತು ಸಂಜೀವಿನಿ ಒಕ್ಕೂಟ ಸದಸ್ಯರು ಮತ್ತು ಅರ್ಹರಿಗೆ ಮುದ್ರಾ ಸಾಲ ಸೌಲಭ್ಯಗಳ ಯೋಜನೆ ಸೇರಿದಂತೆ ಇತರ ಎಲ್ಲಾ ಸಾಲಗಳನ್ನು ಮುಕ್ತವಾಗಿ ನೀಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ನೀತಾರವರು ಸುಕನ್ಯ ಸಮೃದ್ದಿ ಮತ್ತು ಪೋಷನ್ ಅಭಿಯಾನ್ ಸಹಿತ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸೋಮಯ ಮೂಲ್ಯ, ರಮ್ಯಶ್ರೀ ಜೈನ್, ಲಿಖಿತಾ ಹಾಗೂ ಅಶ್ವಥ್ ಅವರನ್ನು ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಗಬೆಟ್ಟು ಗ್ರಾ.ಪಂ ಅಧ್ಯಕ್ಷೆ ರಾಜೀವಿ ಪೂಜಾರಿ ವಹಿಸಿದ್ದರು. ಗ್ರಾ.ಪಂ ಉಪಾಧ್ಯಕ್ಷ ಸುರೇಶ್ ಕುಲಾಲ್, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನ ಕುಮಾರ್ ಚೌಟ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪದ್ಮ ನಾಯ್ಕ್, ಕಾರ್ಯದರ್ಶಿ ರೋಹಿಣಿ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಉದಯ ಪೂಜಾರಿ, ದಾಮೋದರ ಪೂಜಾರಿ, ಸುನೀಲ್ ಶೆಟ್ಟಿಗಾರ್, ವಿದ್ಯಾ ಪ್ರಭು, ಶಕುಂತಲಾ, ಶಾಂತ, ಪ್ರೇಮ, ಹೇಮಲತಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಉಪಸ್ಥಿತರಿದ್ದರು. ಪ್ರಜ್ವಲ್ ಸಿದ್ದಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.