ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವನರ್ತಕ ಮಾಧವ ಪರವರಿಗೆ ಸಿದ್ದಕಟ್ಟೆ ಸ.ವ್ಯ.ಸಂಘದಿಂದ ಅಭಿನಂದನೆ
ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ 2023-24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧವ ಪರವರವರಿಗೆ ಅಭಿನಂದನಾ ಕಾರ್ಯಕ್ರಮವು ಸಂಘದ ಪ್ರಧಾನ ಕಚೇರಿಯ ಬಿ.ಕೃಷ್ಣ.ರೈ, ರೈತ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಮಾಧವ ಪರವರವರನ್ನು ಅಭಿನಂದಿಸಿ ಮಾತನಾಡಿ, ದೈವಾರಾಧನೆ, ನಾಗರಾಧನೆ ಸೇರಿದಂತೆ ಜಾನಪದವಾಗಿ, ಸಂಪ್ರದಾಯಿಕ ವಿವಿಧ ವೈಶಿಷ್ಟತೆಯನ್ನು ಹೊಂದಿರುವ ಪರಶುರಾಮ ಸೃಷ್ಟಿಯ ತುಳುನಾಡ ಜಿಲ್ಲೆ ದ. ಕ. ಪ್ರಸಿದ್ದಿ ಪಡೆದಿದ್ದು ,ಜಾಗತಿಕ ಮಟ್ಟದ್ದಲ್ಲಿ ಗುರುತಿಸಿಕೊಂಡಿದೆ ಎಂದರು.
ದೈವನರ್ತನದಲ್ಲಿ ಹೆಸರು ವಾಸಿಯಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಸಿದ್ಧ ಕಾರಣಿಕ ದೈವಸ್ಥಾನಗಳಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸಿ ಕೊಂಡು ಬಂದಿರುವ ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮ ಮಂಚಕಲ್ಲು ನಿವಾಸಿ ಮಾಧವ ಪರವ ಎಂಬವರಿಗೆ 2023-24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮಗೆಲ್ಲಾ ಹೆಮ್ಮೆ ತಂದಿದೆ ಎಂದರು.
ಈ ಸಂದರ್ಭ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಧವ ಪರವ ನನ್ನ ಹಿರಿಯರ ಕಾಲದಿಂದಲೂ ನಡೆಸಿಕೊಂಡು ಬಂದಿರುವ ದೈವನರ್ತನ ಸೇವೆಯನ್ನು ತಾನು ಪ್ರಾಮಾಣಿಕ, ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿದ್ದು, ಗುರುಹಿರಿಯರ ಆರ್ಶೀವಾದದ ಫಲವಾಗಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ, ನನಗೆ ದೊರೆತ ಈ ಪ್ರಶಸ್ತಿ ನಾನು ದೈವನರ್ತನೆ ಮಾಡುವ ಗ್ರಾಮಗಳಿಗೆ ದೊರೆತಂತಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ನಿರ್ದೇಶಕ ಪದ್ಮರಾಜ್ ಬಲ್ಲಾಳ್ ಮಾವಂತೂರು, ಸಂದೇಶ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ, ದೇವರಾಜ್ ಸಾಲಿಯನ್, ಅರುಣ. ಎಸ್. ಶೆಟ್ಟಿ, ಜಾರಪ್ಪ ನಾಯ್ಕ, ಮಾಧವ ಶೆಟ್ಟಿಗಾರ್ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಸ್ವಾಗತಿಸಿ, ವಂದಿಸಿದರು.