ಕರ್ನಾಟಕ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ವಿ.ಹಿ.ಪ., ಬಜರಂಗದಳ ಕಾರ್ಯಕರ್ತರ ಪ್ರತಿಭಟನೆ
ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ರಾಜ್ಯ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ವಿಶ್ವ ಹಿಂದೂ ಪರಿಷತ್ನ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಅವರು ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿ, ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ನಿರಂತರವಾಗಿ ಹಿಂದೂ ದಮನ ನೀತಿಯನ್ನು ಅನುಸರಿಸುತ್ತಿದ್ದು, ಇತ್ತೀಚೆಗೆ ಪುತ್ತೂರು, ಸುಳ್ಯಗಳಲ್ಲಿ ಭಜರಂಗದಳದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿರುವುದಲ್ಲದೇ ಅಪ್ರಾಪ್ತ ಹಿಂದೂ ಹುಡುಗಿಯರನ್ನು ಅನ್ಯಮತೀಯರು ವಂಚನೆ ಮಾಡಿ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಹುಡುಗಿಯನ್ನು ರಕ್ಷಣೆ ಮಾಡಿದ್ದಲ್ಲದೇ, ರಕ್ಷಿಸಲ್ಪಟ್ಟ ಹುಡುಗಿ ನೀಡಿದ ದೂರಿನಂತೆ ಅನ್ಯಮತೀಯ ವಂಚಕನ ವಿರುದ್ಧ ಕೇಸು ದಾಖಲಿಸಿ ಜೈಲು ಪಾಲಾಗಿರುತ್ತಾನೆ.
ಈ ಘಟನೆಯನ್ನು ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆನ್ನುವ ಹುಡುಗರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದ್ದು, ಆ ಒಂದು ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದೂ ಕಾರ್ಯಕರ್ತರಲ್ಲಿ ಗಡಿಪಾರು ಮಾಡುವ ನೋಟೀಸನ್ನು ನೀಡಿದೆ, ಈ ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದೂ ಕಾರ್ಯಕರ್ತರ ಗಡಿಪಾರಿಗೆ ನೋಟೀಸನ್ನು ಜಾರಿಗೊಳಿಸಿರುವ ಸರಕಾರದ ಹಿಂದೂ ದಮನ ನೀತಿಯನ್ನು ಖಂಡಿಸಿದರು.
ವಿ.ಹಿ.ಪ.ನ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಮಾತನಾಡಿ, ಪೊಲೀಸರ ಮೂಲಕ ಸರಕಾರ ಮಾಡುತ್ತಿರುವ ಹಿಂದೂ ವಿರೋಧಿ ಕೃತ್ಯವನ್ನು ಖಂಡಿಸಿದರಲ್ಲದೆ, ಜಾರಿಗೊಳಿಸಲಾದ ಗಡಿಪಾರು ನೋಟೀಸನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಂಗಳೂರು ವಿಭಾಗ ಸಂಯೋಜಕ್ ಭುಜಂಗ ಕುಲಾಲ್, ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಜಿಲ್ಲಾ ಸಂಯೋಜಕ್ ಭರತ್ ಕುಡ್ಮೇಲು, ಜಿಲ್ಲಾ ಉಪಾಧ್ಯಕ್ಷ ಗುರುರಾಜ ಬಂಟ್ವಾಳ, ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ, ಜಿಲ್ಲಾ ಸಾಮರಸ್ಯ ಪ್ರಮುಖ್ ಸುರೇಶ್ ಬೆಂಜನಪದವು, ಬಂಟ್ವಾಳ ಪ್ರಖಂಡದ ಪ್ರಮುಖರಾದ ದೀಪಕ್ ಅಜೆಕಳ, ಚಂದ್ರ ಕಲಾಯಿ, ಸಂದೇಶ್ ಕಾಡಬೆಟ್ಟು, ಪ್ರಶಾಂತ್ ಕೊಟ್ಟಾರಿ, ಪ್ರವೀಣ ಕುಂಟಾಲಪಲ್ಕೆ, ಅಭಿನ್ ರೈ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಬಳಿಕ ತಹಶೀಲ್ದಾರ್ರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂತೋಷ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು.