ಪದವಿಯೊಂದಿಗೆ ಕೌಶಲ್ಯಾಧಾರಿತ ಕೋರ್ಸುಗಳ ಅಗತ್ಯ: ಡಾ. ರೋಶ್ನಿ ಯಶವಂತ್
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ವಾಣಿಜ್ಯ ಸಂಘದ ಸಹಯೋಗದಲ್ಲಿ ಹೊಸದಾಗಿ ಆರಂಭಗೊಂಡ ಬಿಕಾಂ ವಿದ್ ಲಾಜಿಸ್ಟಿಕ್ಸ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಕೋರ್ಸ್ ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರೋಶ್ನಿ ಯಶವಂತ್ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿಯ ಜೊತೆಗೆ ಇನ್ನಿತರ ಕೌಶಲ್ಯಾಧಾರಿತ ಕೋರ್ಸುಗಳ ಅಗತ್ಯತೆಯನ್ನು ತಿಳಿಸಿದರಲ್ಲದೆ,ಲಾಜಿಸ್ಟಿಕ್ಸ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡುವ ಉದ್ದೇಶ ಹಾಗೂ ಉದ್ಯೋಗಾವಕಾಶದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಿದ್ದರು.ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಸುಕನ್ಯಾ ಉಪಸ್ಥಿತರಿದ್ದರು.ವಾಣಿಜ್ಯ ಸಂಘದ ಸಹಕಾರ್ಯದರ್ಶಿ ಪ್ರತೀಕ್ಷಾ ಕೆ ಕಾರ್ಯಕ್ರಮ ನಿರೂಪಿಸಿ,ನಿಶ್ವಿತ ಸ್ವಾಗತಿಸಿ,ವಿಕಾಸ್ ವಂದಿಸಿದರು.