ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳಲ್ಲಿ ಕಾರ್ಯಕರ್ತರ ಸರಣಿ ಸಭೆ
ರಣ ಬಿಸಿಲನ್ನೂ ಲೆಕ್ಕಿಸದೆ ಡಾ. ಭರತ್ ಶೆಟ್ಟಿ ಮತ ಯಾಚನೆ
ಕೈಕಂಬ : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಡಾ. ಭರತ್ ಶೆಟ್ಟಿ ಅವರು ವ್ಯಾಪ್ತಿ ಪ್ರದೇಶದ ಎಲ್ಲ ೭ ಮಹಾಶಕ್ತಿ ಕೇಂದ್ರ ಹಾಗೂ ೫೮ ಶಕ್ತಿ ಕೇಂದ್ರಗಳ ಕಾರ್ಯಕರ್ತರ ಬಲದೊಂದಿಗೆ ರಣ ಬಿಸಿಲನ್ನೂ ಲೆಕ್ಕಿಸದೆ, ಮನೆಮನೆಗೂ ಭೇಟಿ ನೀಡಿ ಮತ ಯಾಚನೆಯಲ್ಲಿ ನಿರತರಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಗಿಂತ ಈ ಬಾರಿ ದಾಖಲೆ ಪ್ರಮಾಣದ ಮತಗಳಿಂದ ಗೆಲುವಿನ ಅಂತರ ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯ ಪ್ರಚಾರ ಭರಾಟೆ ತೀವ್ರಗೊಂಡಿದೆ.

ಕಳೆದ ೨ ದಿನಗಳ ಅಂತದಲ್ಲಿ ನೀರುಮಾರ್ಗ, ಗುರುಪುರ, ಎಡಪದವು, ಕಾವೂರು, ಸುರತ್ಕಲ್ ಮಹಾಶಕ್ತಿ ಕೇಂದ್ರಗಳ ಪ್ರಮುಖರು ಹಾಗೂ ಹಿರಿಯ ಕಾರ್ಯಕರ್ತರ ಮನೆಗಳಲ್ಲಿ ಸರಣಿ ಸಭೆ ನಡೆಸುತ್ತಿರುವ ಡಾ. ಶೆಟ್ಟಿಯವರು, ಇದೇ ವೇಳೆ ದೇವಸ್ಥಾನಗಳು ಮತ್ತು ಹಿರಿಯ ವ್ಯಕ್ತಿಗಳ ಮನೆಗೆ ಭೇಟಿ ನೀಡಿ, ೨ನೇ ಬಾರಿಗೆ ತನ್ನ ಗೆಲುವಿನಲ್ಲಿ ಸಹಕರಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಡಾ. ಶೆಟ್ಟಿಯವರು ಭೇಟಿ ನೀಡಿ, ಸಭೆ ನಡೆಸಿದ ಬಹುತೇಕ ಎಲ್ಲ ಕಡೆಗಳಲ್ಲೂ ಕಾರ್ಯಕರ್ತರು ಹಾಗೂ ಗ್ರಾಮಗಳ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. “೨ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದಾದರೆ, ಅದು ಕಾರ್ಯಕರ್ತರ ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ. ಕಾರ್ಯಕರ್ತರ ಶ್ರಮವಿಲ್ಲದೆ ಗೆಲುವಿಲ್ಲ.

ನನ್ನ ಗೆಲವಿಗಾಗಿ ನಿರಂತರ ಶ್ರಮಿಸುತ್ತಿರುವ ಎಲ್ಲ ಕಾರ್ಯಕರ್ತ ಬಂಧುಗಳಿಗೆ ನಾನು ಆಭಾರಿಯಾಗಿದ್ದೇನೆ. ಕಾರ್ಯಕರ್ತರೇ ನನ್ನ ಶಕ್ತಿ, ಅವರೇ ನಿರ್ಣಾಯಕರು” ಎಂದು ಗುರುಪುರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಸಭೆಯ ಬಳಿಕ ಡಾ. ಭರತ್ ಶೆಟ್ಟಿ ಅವರು ಮಾಧ್ಯಮದೆದುರು ಅಭಿಪ್ರಾಯಪಟ್ಟರು.

ಕಂಡು ಕೇಳರಿಯದ ಅಭಿವೃದ್ಧಿ :
“ಮಂಗಳೂರು ನಗರ ಉತ್ತರ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದೇನೆ. ಆರೋಗ್ಯ ಕೇಂದ್ರಗಳ ಉನ್ನತೀಕರಣ, ರಸ್ತೆ ಸಂಪರ್ಕ ವಲಯದಲ್ಲಿ ಕಂಡು ಕೇಳರಿಯದ ಅಭಿವೃದ್ಧಿಯಾಗಿದೆ. ಕರೊನಾ ಮಹಾಮಾರಿ ಮತ್ತು ಪ್ರಕೃತಿ ವಿಕೋಪ ನುಂಗಿದ ಎರಡೂ ವರ್ಷಗಳ ಅವಧಿ ಹೊರತಾಗಿ, ಐದು ವರ್ಷಗಳ ಒಟ್ಟು ಅವಧಿಯಲ್ಲಿ ನನಗೆ ಸಿಕ್ಕಿರುವ ಎರಡೂವರೆ ವರ್ಷದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಸಹಿತ ಇನ್ನಿತರ ಆವಶ್ಯಕತೆ ಪೂರೈಕೆಗಾಗಿ ಹಗಲಿರುಳು ಶ್ರಮಿಸಿದ್ದೇನೆ ಎಂಬ ಸಂತೃಪ್ತಿ ನನಗಿದೆ. ಈ ಹಂತದಲ್ಲಿ ಗ್ರಾಮ ಪಂಚಾಯತ್ಗಳು ಮತ್ತು ಮನಪಾ ವ್ಯಾಪ್ತಿ ಪ್ರದೇಶಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಈ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕಣ್ಣಾರೆ ಕಂಡಿರುವ ಮತದಾರ ಬಂಧುಗಳು ಮತ್ತೊಂದು ಅವಧಿಗೆ ಬಿಜೆಪಿ ಕೈಹಿಡಿಯವರು ಎಂಬ ಆತ್ಮವಿಶ್ವಾಸ ನನಗಿದೆ” ಎಂದರು.

ಹಿಂದೂತ್ವ ನನ್ನ ಉಸಿರು :
``ಈ ದೇಶದ ಪ್ರಜೆಯಾಗಿ ರಾಷ್ಟ್ರಾಭಿಮಾನ ಮತ್ತು ಹಿಂದೂತ್ವದ ವಿಚಾರಗಳು ಎದುರಾದಾಗ, ಯಾರೊಂದಿಗೂ ಯಾವತ್ತೂ ರಾಜಿ ಮಾಡಿಕೊಂಡಿಲ್ಲ. ಧರ್ಮ, ಜಾತಿ ಯಾವುದೇ ಇರಲಿ, ತಪ್ಪು, ಅನ್ಯಾಯ ನಡೆದಾಗ, ಹಿಂದೂತ್ವದ ಮೇಲೆ ದಾಳಿ ನಡೆದಾಗ ತಕ್ಷಣ ಕಟುವಾದ ಮಾತುಗಳಿಂದ ಖಂಡಿಸಿದ್ದೇನೆ. ಯಾವುದೇ ಸಂದರ್ಭದಲ್ಲೂ ಇತರ ಧರ್ಮ ಅವಹೇಳನ ಮಾಡಿಲ್ಲ. ಕೋಮುವಾದಿಗಳು ಮತ್ತು ರಾಷ್ಟç ವಿರೋಧಿಗಳಿಗೆ ಅವರದ್ದೇ ಆದ ಭಾಷೆಯಲ್ಲಿ ಉತ್ತರ ನೀಡಿದ್ದೇನೆ” ಎಂದು ನೀರುಮಾರ್ಗ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಡಾ. ಭರತ್ ಶೆಟ್ಟಿ ಹೇಳಿದರು.
ಏನೇ ಇದ್ದಾಗಲೂ, ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಿದಂತೆ, ಮಂಗಳೂರು ನಗರ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾರ್ಯಕರ್ತರೊಂದಿಗೆ ಕೂಡಿಕೊಂಡು ಹಗಲಿರುಳು ಪಾದರಸದಂತೆ ಓಡಾಡಿ ಮತ ಯಾಚನೆ ನಡೆಸುತ್ತಿರುವ ಡಾ. ಭರತ್ ಶೆಟ್ಟಿ ಅವರು ಮತ್ತೊಂದು ಅವಧಿಗೆ ಶಾಸಕನಾಗಿ ನಗು ಬೀರುವ ತವಕದಲ್ಲಿದ್ದಾರೆ.