ಪಚ್ಚನಾಡಿಯಲ್ಲಿ ಅಂಗನವಾಡಿ ಕಟ್ಟಡ ಉದ್ಘಾಟನೆ
ಕೈಕಂಬ : ಮಂಗಳೂರು ಮಹಾನಗರಪಾಲಿಕೆಯ ೧೯ನೇ ವಾರ್ಡ್ನ ಪಚ್ಚನಾಡಿ ಆಶ್ರಯನಗರದಲ್ಲಿ ಎಂಸಿಎಫ್ನ ಸಿಇಆರ್ (ಕಾರ್ಪೊರೆಟ್ ಎನ್ವಿರಾಮೆಂಟ್ ರೆಸ್ಪಾನ್ಸಿಬಿಲಿಟಿ) ನಿಧಿಯ ೨೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ `ಜ್ಞಾನದೀಪ’ ಅಂಗನವಾಡಿ ಕಟ್ಟಡ ಹಾಗೂ ಮಕ್ಕಳ ಆಟದ ಉದ್ಯಾನವನ್ನು ಶಾಸಕ ಡಾ. ಭರತ್ ಶೆಟ್ಟಿ ಮಾ. ೨೩ರಂದು ಉದ್ಘಾಟಿಸಿದರು.

ಶಾಸಕರು ಮಾತನಾಡಿ, ಇದು ಎಂಸಿಎಫ್ ಸಂಸ್ಥೆಯ ಕೊಡುಗೆ. ವಾರ್ಡ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳುವವರೆಗೆ ಅವಿರತ ಶ್ರಮಿಸುವ ಉತ್ತಮ ನಾಯಕರು ಇರುವುದರಿಂದ ಪಚ್ಚನಾಡಿ ಇಂದು ಸರ್ವಾಂಗೀಣ ಅಭಿವೃದ್ಧಿ ಕಂಡಿದೆ.


ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಮುಂದುವರಿದುಕೊಂಡು ಬಂದಿದ್ದ ಕುಡಿಯುವ ನೀರಿನ ಸಮಸ್ಯೆ ಶೇ. ೯೯ರಷ್ಟು ಬಗೆಹರಿದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸವಾಲಿನ ವಾರ್ಡ್ ಆಗಿರುವ ಪಚ್ಚನಾಡಿಯಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದೆ. ಅಭಿವೃದ್ಧಿ ನಿಂತ ನೀರಲ್ಲ. ಜನರ ಆಶೀರ್ವಾದವಿದ್ದರೆ ಉಳಿದ ಕೆಲಸಗಳೂ ಕೈಗೂಡಲಿವೆ ಎಂದರು.

ಅಂಗನವಾಡಿ ಕಟ್ಟಡ ನಿರ್ಮಾಣದ ರೂವಾರಿ, ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್ ಮಾತನಾಡಿ, ಎಲ್ಲೇ ಆಗಲಿ ಸಮಗ್ರ ಅಭಿವೃದ್ಧಿ ನಡೆಯಬೇಕಿದ್ದರೆ ಇಚ್ಛಾಶಕ್ತಿ ಇರಬೇಕು. ವಾರ್ಡ್ನಲ್ಲಿ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯ ನಡೆಸಲು ಸಾಕಷ್ಟು ಅನುದಾನ ತಂದುಕೊಟ್ಟಿದ್ದಾರೆ. ಇದಕ್ಕೆ ಪದವಿನಂಗಡಿ ಜಂಕ್ಷನ್ ಅಭಿವೃದ್ಧಿ ನೈಜ ಸಾಕ್ಷಿಯಾಗಿದೆ ಎಂದರು.


ಅಂಗನವಾಡಿ ಶಿಕ್ಷಕಿ ಹರಿಣಾಕ್ಷಿ ಪ್ರಸ್ತಾವಿಸಿದರು. ಎಂಸಿಎಫ್ ಉತ್ಪಾದನಾ ವಿಭಾಗದ ಹಿರಿಯ ಅಧಿಕಾರಿ ಗಿರೀಶ್ ಎ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಕ್ತಿನಗರ ವಲಯ ಮೇಲ್ವಿಚಾರಕಿ ಭವ್ಯಾ, ಬಿಜೆಪಿ ನಾಯಕರಾದ ಸಂದೀಪ್ ಪಚ್ಚನಾಡಿ, ಪ್ರಶಾಂತ್ ಪೈ, ಪೂಜಾ ಪೈ, ರಾಮ ಮೊಗ್ರೋಡಿ, ಗುತ್ತಿಗೆದಾರ ದಯಾನಂದ ಕುಮಾರ್, ಜಯಲಕ್ಷ್ಮೀ, ಆರ್. ಕೆ. ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ಪಾಲಕರು, ಸ್ಥಳೀಯ ನಾಗರಿಕರು ಇದ್ದರು. ಬಾಲಕೃಷ್ಣ ಪಚ್ಚನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.