೩ ಕೋಟಿ ರೂ ಅನುದಾನದ೨ ಕಿಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ
ಕೈಕಂಬ : ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಶೆಡ್ಡೆ ದ.ಕ.ಜಿ.ಪ. ಶಾಲೆಯಿಂದ ಶೆಡ್ಡೆ ಅಣೆಕಟ್ಟಿನವರೆಗೆ ೩ ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ಸುಮಾರು ೨ ಕಿಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮಾ. ೧೨ರಂದು ಡ್ಯಾಮ್ನ ಬಳಿ ಗುದ್ದಲಿಪೂಜೆ ನೆರವೇರಿಸಿದರು.

ಶಾಸಕ ಕೋಟ್ಯಾನ್ ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯ ಮೂಡುಶೆಡ್ಡೆ ಪಂಚಾಯತ್ ವ್ಯವಸ್ಥಿತ ಕೆಲಸ ನಿರ್ವಹಣೆಯಲ್ಲಿ ಮುಂದಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಯೋಗ್ಯತೆಯುಳ್ಳ ನೂರಾರು ಜನ ಇದ್ದಗಾಲೂ ನನಗೆ ಜನರ ಸೇವೆ ಮಾಡುವ ಯೋಗ ಸಿಕ್ಕಿದೆ. ಈ ಭಾಗದಲ್ಲಿ ಇನ್ನೂ ಕೆಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಂಕಲ್ಪಿಸಿದ್ದೇನೆ. ಪಕ್ಷ ಅವಕಾಶ ನೀಡಿದರೆ ಮತ್ತು ಮತದಾರರು ಅಪೇಕ್ಷಿಸಿದಲ್ಲಿ ಮತ್ತೊಮ್ಮೆ ನಿಮ್ಮೆದುರು ಬರುವೆ ಎಂದರು.

ಬಿಜೆಪಿ ಮುಖಂಡ ರಮಾನಾಥ ಅತ್ತಾರ್(ಚಿತ್ತಣ್ಣ) ಪ್ರಸ್ತಾವಿಕ ಮಾತನಾಡಿ, ಶಾಸಕರು ಮೂಡುಶೆಡ್ಡೆಗೆ ೨೦ ಕೋಟಿ ರೂ ಅನುದಾನದ ಸಹಿತ ಮೂಲ್ಕಿ-ಮೂಡಬಿದ್ರೆ ಕ್ಷೇತ್ರಕ್ಕೆ ೨,೦೦೦ ಕೋಟಿ ರೂಪಾಯಿಗೂ ಮಿಕ್ಕ ಅನುದಾನದ ತಂದಿದ್ದಾರೆ. ಈ ಭಾಗದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದರು.
ಸಭೆಯಲ್ಲಿ ಮೂಡುಶೆಡ್ಡೆ ಪಂಚಾಯತ್ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಕಿರಣ್ ಶೆಟ್ಟಿ ಹೊಸಲಕ್ಕೆ, ಸುಕೇಶ್ ಕೊಟ್ಟಾರಿ, ಮೂಲ್ಕಿ-ಮೂಡಬಿದ್ರೆ ಬಿಜೆಪಿ ಮಂಡಲದ ಅಧ್ಯಕ್ಷ ಸುನಿಲ್ ಆಳ್ವ, ಶಿವಪ್ಪ, ಜೀವನ್ ಮಲ್ಲಿ, ಪಕ್ಷ ಮುಖಂಡರು, ಪ್ರಮುಖರು, ಗಣ್ಯರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು. ಉಮೇಶ್ ಜೆ ಸ್ವಾಗತಿಸಿ, ವಂದಿಸಿದರು.