ರಾಯಿ: ಸಿಡಿಲಿಗೆ ಗ್ರಾ.ಪಂ.ಮಾಜಿ ಅಧ್ಯಕ್ಷರ ಮನೆಗೆ ಹಾನಿ, ಅಪಾಯದಿಂದ ಕುಟುಂಬ ಪಾರು
ಬಂಟ್ವಾಳ: ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಇವರ ಮನೆ ಸಿಡಿಲು ಬಡಿದು ಕುಸಿತದ ಭೀತಿ ಎದುರಿಸುತ್ತಿದೆ
ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಈ ಘಟನೆಯಿಂದ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಹರೀಶ ಆಚಾರ್ಯ ಅವರ ಪುಟ್ಟ ಮಗು ಸಹಿತ ವಯೋವೃದ್ಧ ತಂದೆ ಕಾಷ್ಠಶಿಲ್ಪಿ ಅಪ್ಪು ಆಚಾರ್ಯ ದಂಪತಿ ಇನ್ನೂ ಆಘಾತದಿಂದ ಹೊರಗೆ ಬಂದಿಲ್ಲ. ಶುಕ್ರವಾರ ರಾತ್ರಿ ದಿಢೀರನೆ ಸುರಿದ ಮಳೆಗೆ ಮೊದಲು ಭಾರೀ ಶಬ್ಧ ಸಹಿತ ಇವರ ಮನೆ ಹಿಂಬದಿ ಮರಕ್ಕೆ ಸಿಡಿಲು ಬಡಿದಿದೆ. ಇದೇ ವೇಳೆ ಇವರ ಮನೆ ಮತ್ತು ಸ್ನಾನಗೃಹದ ಗೋಡೆ ಕೊರೆದು ಮನೆಯೊಳಗೆ ವಿದ್ಯುತ್ ಪರಿಕರವೆಲ್ಲಾ ಸುಟ್ಟು ಕರಕಲಾಗಿದೆ.
ಸ್ವತಃ ಕಣ್ಣೆದುರೇ ಫ್ಯಾನ್ ಮತ್ತಿತರ ವಿದ್ಯುತ್ ಸಾಮಾಗ್ರಿ ಸುಟ್ಟು ಪುಡಿಯಾಗಿರುವ ದೃಶ್ಯ ಕಂಡು ಮನೆಯವರು ಆಘಾತಗೊಂಡಿದ್ದಾರೆ. ಮನೆ ಗೋಡೆ ಮತ್ತು ಹೆಂಚಿನ ಮಾಡು ಸಂಪೂರ್ಣ ಬಿರುಕು ಕಾಣಿಸಿಕೊಂಡಿದ್ದು, ಕುಸಿತದ ಭೀತಿಯಲ್ಲಿದೆ. ಗ್ರಾಮ ಕರಣಿಕ ಪರೀಕ್ಷಿತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದ್ದು, ದಿನವಿಡೀ ಅಪಾರ ಮಂದಿ ಬಂದು ಕುತೂಹಲದಿಂದ ಹಾನಿ ವೀಕ್ಷಿಸಿ ಮನೆ ಮಂದಿಗೆ ಧೈರ್ಯ ತುಂಬುತ್ತಿದ್ದಾರೆ. ಕಳೆದ ೨೦ ವರ್ಷಗಳಲ್ಲಿ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಇವರು ಇತರರ ಸಂಕಷ್ಷಗಳಿಗೆ ಸ್ಪಂದಿಸುವ ಮೂಲಕ ಗಮನ ಸೆಳೆದಿದ್ದರು.