ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ “ಜನಸ್ಪಂದನಾ” ಕಾರ್ಯಕ್ರಮ
ಕೈಕಂಬ : ಒಂದೇ ಸೂರಿನಡಿಯಲ್ಲಿ ಸಾರ್ವಜನಿಕರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದು “ಜನಸ್ಪಂದನಾ” ಕಾರ್ಯಕ್ರಮದ ಮೂಲ ಉದ್ದೇಶ. ಜನಪ್ರತಿನಿಧಿಗಳಾಗಿದ್ದು ಈ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರ ನೋವಿಗೆ ಸ್ಪಂದಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಹೇಳಿದರು.

ಮಂಗಳೂರು ನಗರ ಉತ್ತರ ವಿಧಾನಸಭಾ ವ್ಯಾಪ್ತಿಯ ಪದವಿನಂಗಡಿಯ ಬೆನಕ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ಭಾನುವಾರ(ಅ. ೧೬) ಆಯೋಜಿಸಲಾದ ಜನಸ್ಪಂದನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ೭ ಕಡೆಗಳಲ್ಲಿ(ನಗರದಲ್ಲಿ ೪ ಮತ್ತು ಗ್ರಾಮೀಣ ಪ್ರದೇಶದಲ್ಲಿ ೩ ಕಡೆ) ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ಇದು ಪಚ್ಚನಾಡಿ, ಕಾವೂರು, ಕದ್ರಿಪದವು, ದೇರೆಬೈಲು, ತಿರುವೈಲು ಮತ್ತು ಕುಡುಪು ವಾರ್ಡ್ಗಳ ಜನರಿಗೆ ಆಯೋಜಿಸಲಾದ ಜನಸ್ಪಂದನಾ ಕಾರ್ಯಕ್ರಮ. ಶೀಘ್ರವೇ ಉಳಿದ ಕಡೆ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ. ಜೊತೆಗೆ “ಮೂಡಾ” ಅದಾಲತ್ ಮತ್ತು ಆರ್ಟಿಸಿ ಹೆಸರು ಬದಲಾವಣೆ ಕಾರ್ಯಕ್ರಮ ನಡೆಸಲು ಯೋಚಿಸಲಾಗಿದೆ ಎಂದರು.

ಮAಗಳೂರು ತಾಲೂಕು ತಹಶೀಲ್ದಾರ್ ಡಿ. ಕೆ. ಪುಟ್ಟರಾಜು ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರ ಪರಿಚಯಿಸಿರುವ ಹಲವು ಯೋಜನೆಗಳ ಮಾಹಿತಿ ಎಷ್ಟರ ಮಟ್ಟಿಗೆ ತಲುಪಿದೆ ಎಂಬುದು ಇಂತಹ ಕಾರ್ಯಕ್ರಮಗಳಿಂದ ತಿಳಿದುಕೊಳ್ಳಬಹುದಾಗಿದೆ. ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದಿರುವ ಗ್ರಾಮೀಣರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಒಂದೇ ಸೂರಿನಡಿ ಸರ್ಕಾರದ ಹಲವು ಯೋಜನೆಗಳು ಸಿಕ್ಕಾಗ ಜನರು ತಮ್ಮ ಹಕ್ಕುಗಳಿಗಾಗಿ ಹಲವು ಕಚೇರಿಗಳಿಗೆ ಅಲೆದಾಡುವ ಪ್ರಮೇಯ ತಪ್ಪುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ವೃದ್ಧಾಪ್ಯ ವೇತನ, ಆದಾಯ ಪ್ರಮಾಣ ಪತ್ರ, ಅಂಗವಿಕರ ಪೋಷಣ ವೇತನ, ಮನಸ್ವಿನಿ, ರಾಷ್ಟ್ರೀಯ ಕುಟುಂಬ ಸಹಾಯಧನ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಾಸ್ತವ್ಯದ ದೃಢಪತ್ರ, ವ್ಯವಸಾಯಗಳ ದೃಢಪತ್ರ, ವಿಧವಾ ಪ್ರಮಾಣಪತ್ರ, ಆಯುಷ್ಮಾನ್ ಮತ್ತು ಅಭ ಕಾರ್ಡ್ ಸೌಲಭ್ಯ, ಕಾರ್ಮಿಕ ಕಾರ್ಡ್, ಇ-ಶ್ರಮ್ ಕಾರ್ಡ್, ಪಡಿತರ ತಿದ್ದುಪಡಿ, ಆಧಾರ್ ತಿದ್ದುಪಡಿಯಂತಹ ಹಲವು ಯೋಜನೆಗಳ ನೋಂದಣಿಗಾಗಿ ಮನಪಾ ವ್ಯಾಪ್ತಿಯ ಆರು ವಾರ್ಡ್ಗಳ ನೂರಾರು ನಾಗರಿಕರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಸಿದ್ಧಪಡಿಸಿದ ಒಟ್ಟು ೬೫ ಹಕ್ಕುಪತ್ರ, ೮೭ ಪಿಂಚಣಿ ಪ್ರಮಾಣಪತ್ರ ಹಾಗೂ ಕೆಎಸ್ಸಾರ್ಟಿಸಿಯಿಂದ ಅರ್ಹ ಫಲಾನುಭವಿಗಳಿಗೆ ಉಚಿತ ಬಸ್ ಪಾಸ್ನ್ನು ಶಾಸಕರು ವಿತರಿಸಿದರು.

ಎಂಎಲ್ಸಿ ಪ್ರತಾಪ್ ಸಿಂಹ, ಮೇಯರ್ ಜಯಾನಂದ ಅಂಚನ್, ಮನಪಾ ಕಾರ್ಪೊರೇಟರ್ಗಳಾದ ಸಂಗೀತಾ ನಾಯಕ್, ಹೇಮಲತಾ ಆರ್ ಸಾಲ್ಯಾನ್, ಗಾಯತ್ರಿ ರಾವ್, ರಂಜಿನಿ ಕೋಟ್ಯಾನ್, ಭಾಸ್ಕರ ಮೊಯಿಲಿ, ಬಿಜೆಪಿ ಮುಖಂಡರಾದ ಸಂದೀಪ್ ಪಚ್ಚನಾಡಿ, ರಾಜೇಶ್ ಕೊಟ್ಟಾರಿ, ಲಕ್ಷö್ಮಣ್ ಶೆಟ್ಟಿಗಾರ್, ಮನಪಾ ವಲಯ ಆಯುಕ್ತೆ ರೇಖಾ ಶೆಟ್ಟಿ, ಗುರುಪುರ ನಾಡ ಕಚೇರಿ ಉಪತಹಶಿಲ್ದಾರ್ ಶಿವಪ್ರಸಾದ್, ಸುರತ್ಕಲ್ ವಲಯ ಉಪತಹಶೀಲ್ದಾರ್ ನವೀನ್ ಕುಮಾರ್, ಮಂಗಳೂರು ತಾಲೂಕು ಉಪತಹಶೀಲ್ದಾರಗಳಾದ ಜಯಂತ್ ಮತ್ತು ಭೀಮಯ್ಯ, ಕೆಎಸ್ಸಾರ್ಟಿಸಿ ಅಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಮೆಸ್ಕಾಂ, ಆರೋಗ್ಯ, ಕೃಷಿ, ಆಹಾರ, ಬ್ಯಾಂಕಿಂಗ್ ಮತ್ತಿತರ ೩೬ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ರವಿ ನಾಯಕ್ ಕುಡುಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

