ಮೋದಿ ಜನ್ಮದಿನ – ರಾಷ್ಟ್ರಧ್ವಜ ಹಿಡಿದು ಮತದಾನದ ಜಾಗೃತಿ ಮೂಡಿಸಿದ ಕನ್ನಡಿಗ ಮೋಹನ್ ಕುಮಾರ್
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) 72ನೇ ಜನ್ಮದಿನದ (Birthday) ಅಂಗವಾಗಿ ಬಳ್ಳಾರಿ ಜಿಲ್ಲೆ ಕಂಪ್ಲಿ ನಿವಾಸಿ ಹಾಗೂ ಕರ್ನಾಟಕ (Karnataka) ಹೈಕೋರ್ಟ್ನ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಮತದಾನ ಜಾಗೃತಿಗಾಗಿ 3 ಗಂಟೆಗಳ ಕಾಲ ತಡೆರಹಿತ ಮ್ಯಾರಥಾನ್ (Marathon) ಓಡುವ ಮೂಲಕ ಜಾಗೃತಿ ಮೂಡಿಸಿದರು.
ಈ ಜಾಗೃತಿ ಓಟಕ್ಕೆ ಭಾರತ ಸರ್ಕಾರದ ಸುಪ್ರೀಂಕೋರ್ಟ್ನ (Supreme Court) ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ರಾಷ್ಟ್ರಧ್ವಜ (National Flag) ನೀಡುವ ಮೂಲಕ ಚಾಲನೆ ನೀಡಿದರು. ಬಲಗೈನಲ್ಲಿ ರಾಷ್ಟ್ರಧ್ವಜ, ಎಡಗೈನಲ್ಲಿ ಕರ್ನಾಟಕ ಧ್ವಜವನ್ನು ಹಿಡಿದು ಕರ್ನಾಟಕ ಭವನದಿಂದ ಓಟ ಪ್ರಾರಂಭಿಸಿದ ಮೋಹನ್ ಕುಮಾರ್ ದಾನಪ್ಪನವರು, ಇಂದಿರಾ ಗಾಂಧಿ ಸ್ಮಾರಕ, ರಾಯಭಾರಿ ಕಚೇರಿ ಅಕ್ಬರ್ ರಸ್ತೆ, ಇಂಡಿಯಾ ಗೇಟ್, ಜನಪಥ್ ರಸ್ತೆ, ಸುಪ್ರೀಂಕೋರ್ಟ್, ರಾಜ್ ಘಾಟ್, ರಾಷ್ಟ್ರಪತಿ ಭವನ ಮೂಲಕ ಕೆಂಪುಕೋಟೆಗೆ ತಲುಪಿದರು.
ಬಳಿಕ ಮಾತನಾಡಿದ ಅವರು, ಮತದಾನ ನಮ್ಮ ಸಾಂವಿಧಾನಿಕ ಹಕ್ಕು, ಮತದಾನ ಮಾಡುವುದು ಸಹ ನಮ್ಮ ಆದ್ಯ ಕರ್ತವ್ಯ, ಮತದಾನ ಮಾಡಬೇಕಾದ ನಾಗರಿಕ ಪ್ರಭುಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿರುವುದು ಮತ್ತು ಜವಾಬ್ದಾರಿಗಳ ಬಗ್ಗೆ ಉದಾಸೀನ ತೋರುತ್ತಿರುವುದರಿಂದ ಚುನಾವಣೆಗಳ ಮತದಾನದ ಶೇಕಡಾ ನೂರರಷ್ಟು ತಲುಪಲು ಅಸಾಧ್ಯವಾಗಿದೆ. ಮುಂಬರುವ ವಿಧಾನಸಭಾ, ಲೋಕಸಭಾ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.