Published On: Mon, Aug 1st, 2022

ಕೊಣಾಜೆ: ಪರಂಡೆ ಗದ್ದೆಯಲ್ಲಿ ಕ್ರೀಡೋತ್ಸವ-ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡಕ್ಕೆ ಅವಳಿ ಪ್ರಶಸ್ತಿ, ವಾಲಿಬಾಲ್ ನಲ್ಲಿ ಪ್ರಥಮ, ಹಗ್ಗಜಗ್ಗಾಟದಲ್ಲಿ ರನ್ನರ್ಸ್ ಗೆ ತೃಪ್ತಿ

ಕೊಣಾಜೆ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಉಳ್ಳಾಲ‌ ತಾಲೂಕು ವಾಲಿಬಾಲ್ ಎಸೋಸಿಯೇಷನ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ‌ ಹಾಗೂ ಸ್ಥಳೀಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕೊಣಾಜೆ ಗ್ರಾಮದ ಪರಂಡೆ ಕೆಸರಿನ ಗದ್ದೆಯಲ್ಲಿ ನಡೆದ ಕ್ರೀಡೋತ್ಸವದಲ್ಲಿ ವಾಲಿಬಾಲ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡ ಪ್ರಥಮ, ಮಂಗಳೂರು ವಿಶ್ವವಿದ್ಯಾಲಯ ತಂಡ ದ್ವಿತೀಯ ಹಾಗೂ ಹಗ್ಗಜಗ್ಗಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಪ್ರಥಮ ಹಾಗೂ ಪತ್ರಕರ್ತರ ತಂಡ ದ್ವಿತೀಯ ಬಹುಮಾನ ಪಡೆಯಿತು.

ವಾಲಿಬಾಲ್ ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ತಂಡದ ಸತೀಶ್ ಕುಮಾರ್ ಪುಂಡಿಕಾಯಿ ಬೆಸ್ಟ್ ಆಲ್ ರೌಂಡರ್, ಡಾ. ಸತೀಶ್ ಕೊಣಾಜೆ ಉತ್ತಮ ಎತ್ತುಗೆಗಾರ ಹಾಗೂ ವಿವಿ ತಂಡದ ಗೌತಮ್ ಉತ್ತಮ ಹೊಡೆತಗಾರ ಪ್ರಶಸ್ತಿ ಪಡೆದರು.

ಹ್ಯಾಂಡ್ ಬಾಲ್ ಬಾಲಕರ ವಿಭಾಗದಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆ ಪ್ರಥಮ, ಕೊಣಾಜೆಪದವು ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆ ಪ್ರಥಮ, ಬಬ್ಬುಕಟ್ಟೆಯ ನಿತ್ಯಾಧರ್ ಶಾಲೆ ದ್ವಿತೀಯ ಬಹುಮಾನ ಪಡೆಯಿತು‌. ರಿಲೇ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ನಿತ್ಯಾಧರ್ ಪ್ರಥಮ, ಗಾಡಿಗದ್ದೆ ಶಾಲೆ ದ್ವಿತೀಯ. ಬಾಲಕಿಯರ ವಿಭಾಗದಲ್ಲಿ ಗಾಡಿಗದ್ದೆ ಪ್ರಥಮ ಹಾಗೂ ನಿತ್ಯಾಧರ್ ದ್ವಿತೀಯ ಬಹುಮಾನ ಪಡೆಯಿತು.

ಪ್ರೌಢಶಾಲಾ ಬಾಲಕಿಯರ ವಿಭಾಗ ರಾಮಕೃಷ್ಣ ಪ್ರಥಮ, ನಿತ್ಯಾಧರ್ ದ್ವಿತೀಯ. ಬಾಲಕರ ವಿಭಾಗ ಕೊಣಾಜೆಪದವು ಪ್ರಥಮ ಹಾಗೂ ರಾಮಕೃಷ್ಣ ದ್ವಿತೀಯ ಸ್ಥಾನ ಪಡೆಯಿತು.

ಸಮಾರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನ್ಸಾರ್ ಇನೋಳಿ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಲಾರ್, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಲಮಾಣಿ, ಸಹಶಿಕ್ಷಕ ಶಿವಕುಮಾರ್, ಸ್ಕೌಟ್ ಶಿಕ್ಷಕಿ ಗೀತಾ ಜುಡಿತ್ ಸಲ್ದಾನ ಉಪಸ್ಥಿತರಿದ್ದರು.

ಯುವಜನ ಮತ್ತು ಯುವ ಸಬಲೀಕರಣ ಇಲಾಖೆ ನಿರ್ದೇಶಕ ಪ್ರದೀಪ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ಮುಖಂಡ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಕೃಷಿಕ ಸುದರ್ಶನ್ ರಾವ್, ಮಂಗಳಗಂಗೋತ್ರಿ ಜೆಸಿಐ ನಿಕಟಪೂರ್ವ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಸ್ಥಳೀಯ ಮುಖಂಡ ಯಾದವ ಶೆಟ್ಟಿ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕೈರಂಗಳ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ನಿವೃತ್ತ ಮುಖ್ಯಶಿಕ್ಷಕ ಆನಂದ ಕೆ.ಅಸೈಗೋಳಿ ಉಪಸ್ಥಿತರಿದ್ದರು. ಸ್ಮಿತಾ ಟೀಚರ್ ಬಹುಮಾನಿತರ ಹೆಸರು ವಾಚಿಸಿದರು. ಕಾರ್ಯಕ್ರಮ ಸಂಯೋಜಕ ‌ತ್ಯಾಗಂ ಹರೇಕಳ ಕಾರ್ಯಕ್ರಮ ನಿರೂಪಿಸಿದರು‌.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter