ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದ ಗುರುಪುರ ಬಂಟರ ಮಾತೃ ಸಂಘ
ಕೈಕಂಬ: ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದೆ. ಉನ್ನತ ವ್ಯಾಸಂಗದ ಬಳಿಕ ಈ ಮಕ್ಕಳು ಕುಟುಂಬ, ಬಂಟ ಸಮಾಜ ಮತ್ತು ಸಂಘದ ಆಶೋತ್ತರಗಳೊಂದಿಗೆ ಕೈಮಿಲಾಯಿಸಬೇಕು. ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ಇಂತಹ ಸಂಘಗಳ ವ್ಯವಸ್ಥೆ ಹಾಳು ಮಾಡುವ ಮಂದಿಯ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಹೇಳಿದರು.





ವಾಮಂಜೂರಿನ ಚರ್ಚ್ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾದ ಗುರುಪುರ ಬಂಟರ ಮಾತೃ ಸಂಘ(ರಿ) ಇದರ ವಾರ್ಷಿಕ ಮಹಾಸಭೆ, ವಾರ್ಷಿಕ ಸಮಾವೇಶ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿದರು.
ದೀಪ ಪ್ರಜ್ವಲನೆ ಮಾಡಿದ ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ಎಲ್ಲ ಸ್ಥಳೀಯ ಬಂಟ ಸಂಘಗಳಿಗೆ ಮೂಲ ಮಂಗಳೂರಿನ ಮಾತೃ ಸಂಘ. ಮಾತೃ ಸಂಘಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ. ಬಂಟ ಸಮಾಜದ ಮಹಿಳೆಯರಿಗಾಗಿ ಮಹಿಳಾ ವಿವಿದ್ದೋದ್ದೇಶ ಸೊಸ್ಯೊಟಿ ಸ್ಥಾಪಿಸಲಾಗುವುದು. ಅಲ್ಲದೆ ಪ್ರತಿ ಬಂಟ ಸಮಾಜದ ಮನೆಗಳಿಗೆ ಭೇಟಿ ನೀಡಿ ಬಂಟರ ಸ್ಥಿತಿಗತಿ ಮತ್ತು ಜನಸಂಖ್ಯೆ ಸಮೀಕ್ಷೆ ನಡೆಸಲಾಗುವುದು. ಬಂಟರ ಮಾಹಿತಿ ಸಂಗ್ರಹ ಹಿನ್ನೆಲೆಯಲ್ಲಿ ಕಂಪ್ಯೂಟರ್ ದಾಖಲಾತಿ ಕಾರ್ಯಕ್ರಮ ನಡೆಯುತ್ತಿದೆ ಎಂದರು.
ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್(ರಿ) ಮಂಗಳೂರು ಇದರ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಸಮಾಜಸೇವೆಗೈಯುತ್ತಿರುವ ಗುರುಪುರ ಬಂಟರ ಮಾತೃ ಸಂಘವು ಬಂಟ ಸಮಾಜದ ಬಡ ಕುಟುಂಬಗಳು ಮತ್ತು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತ ಬಂದಿದೆ. ಸಂಘದ ಭವಿಷ್ಯದ ಯೋಜನೆಗಳು ಯಶಸ್ವಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಸಂಘವು ಬಂಟ ಸಮಾಜದಲ್ಲಿ ಗಮನೀಯ ಸಾಧನೆಗೈದಿರುವ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ(ಶಿಕ್ಷಣ ಕ್ಷೇತ್ರ), ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ(ಸಾಮಾಜಿಕ ಕ್ಷೇತ್ರ), ಆಳ್ವಾಸ್ ನರ್ಸಿಂಗ್ ಆಸ್ಪತ್ರೆ ಮೂಡಬಿದ್ರೆಯ ಡಾ. ವಿನಯ ಮೋಹನ್ ಆಳ್ವ(ವೈದ್ಯಕೀಯ ಕ್ಷೇತ್ರ), ಹೋಟೆಲ್ ಉದ್ಯಮಿ ಮುಂಬೈ ಭಾಸ್ಕರ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ(ಉದ್ಯಮ ಕ್ಷೇತ್ರ) ಮತ್ತು ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ(ಕೃಷಿ, ಹೈನುಗಾರಿಕೆ, ರಾಜಕೀಯ ಕ್ಷೇತ್ರ) ಇವರನ್ನು ಸನ್ಮಾನಿಸಲಾಯಿತು.
ಸಂಘದ ವ್ಯಾಪ್ತಿಯ ೧೬ ಗ್ರಾಮಗಳಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಬಂಟ ಸಮಾಜದ ಎಲ್ಲ ಶಾಲಾ ಮಕ್ಕಳಿಗೆ ಸುಮಾರು ೭ ಲಕ್ಷ ರೂ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಆಯೋಜಿಸಲಾದ ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಒಟ್ಟು ೯ ತಂಡಗಳಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ ವಾಮಂಜೂರು, ಮೂಡುಶೆಡ್ಡೆ ಮತ್ತು ಕುಳವೂರು ವಲಯ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಗುರು ನಿತ್ಯಾನಂದರ ಭಾವಚಿತ್ರ ಅನಾವರಣ :
ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳ ಬಂಟರ ಮನೆಗಳಲ್ಲಿ ಶ್ರೀ ನಿತ್ಯಾನಂದ ಗುರುಗಳ ಭಾವಚಿತ್ರವಿಟ್ಟು ಆರಾಧನೆ ನಡೆಯಬೇಕೆಂಬ ಸಂಘದ ಆಶೋತ್ತರದಂತೆ ಶ್ರೀ ನಿತ್ಯಾನಂದ ಗುರುಗಳ ಭಾವಚಿತ್ರ ಅನಾವರಣಗೊಳಿಸಲಾಯಿತು. ಸಂಘವು ತನ್ನ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ಆಯೋಜಿಸಲಾದ ಅದೃಷ್ಟಚೀಟಿ ಫಲಿತಾಂಶ ಪ್ರಕಟಿಸಲಾಯಿತು.
ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅಧ್ಯಕ್ಷತೆ ಮಾನಾಡಿ, ಸಂಘದ ಬೆಳವಣಿಗೆಗೆ ಸಹಕರಿಸಿದವರನ್ನು ಸ್ಮರಿಸಿದರು. ಜಯಕರ ಶೆಟ್ಟಿ ಇಂದ್ರಾಳಿ(ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಕಾರ್ಯದರ್ಶಿ), ಮಂಜುನಾಥ ಭಂಡಾರಿ ಶೆಡ್ಡೆ(ಆದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ), ರಾಜೇಂದ್ರ ಶೆಟ್ಟಿ(ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ ಹುಬ್ಬಳ್ಳಿ), ವೇಣುಗೋಪಾಲ ಎಲ್ ಶೆಟ್ಟಿ(ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ), ರವಿರಾಜ ಶೆಟ್ಟಿ ನಿಟ್ಟೆಗುತ್ತು(ಮಂಗಳೂರು ತಾಲೂಕು ಬಂಟರ ಸಂಘ ಅಧ್ಯಕ್ಷ), ಚಂದ್ರಹಾಸ ಶೆಟ್ಟಿ ರಂಗೋಲಿ(ಬAಟ್ವಾಳ ತಾಲೂಕು ಬಂಟರ ಸಂಘ ಅಧ್ಯಕ್ಷ), ಮಧುಕರ ಶೆಟ್ಟಿ(ಬೆಂಗಳೂರು ಬಂಟರ ಸಂಘ ಕಾರ್ಯದರ್ಶಿ), ಪ್ರವೀಣ್ ಶೆಟ್ಟಿ, ಕುಶಾಲ್ ಸಿ ಭಂಡಾರಿ, ರವೀಂದ್ರ ವೈ. ಶೆಟ್ಟಿ, ಉಲ್ಲಾಸ್ ಶೆಟ್ಟಿ, ಗೋಕುಲದಾಸ್ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಉಪ್ಪುಗೂಡು, ಜಯರಾಮ ಶೆಟ್ಟಿ ವಿಜೇತ ಕೈಕಂಬ, ಹರಿಕೇಶ್ ಶೆಟ್ಟಿ ನಡಿಗುತ್ತು, ಚಂದ್ರಹಾಸ ಶೆಟ್ಟಿ ನಾರಳ, ಸತ್ಯವಾನ್ ಆಳ್ವ ಮೂಡುಶೆಡ್ಡೆ, ಸದಾನಂದ ಚೌಟ, ನಾಗರಾಜ ರೈ ತಿಮಿರಿಗುತ್ತು, ಇಂದಿರಾಕ್ಷಿ ಪಿ. ಶೆಟ್ಟಿ, ಗೀತಾ ಎಸ್. ಆಳ್ವ ಮೊಗರುಗುತ್ತು, ದೀಪಕ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ ಮೂಡುಶೆಡ್ಡೆ ಸಹಿತ ಸಂಘದ ಇತರ ಪದಾಧಿಕಾರಿಗಳು ಮತ್ತು ಸದಸ್ಯರು, ಬಂಟ ಸಮಾಜದ ನೂರಾರು ಮಂದಿ ಉಪಸ್ಥಿತರಿದ್ದರು.
ಸುದರ್ಶನ ಶೆಟ್ಟಿ ಪೆರ್ಮಂಕಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಕಿರಣ್ ಪಕ್ಕಳ, ಕವಿತಾ ಪಕ್ಕಳ, ರಾಜ್ಕುಮಾರ್ ಶೆಟ್ಟಿ ಲಿಂಗಮಾರುಗುತ್ತು ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ ವಂದಿಸಿದರು.