ಕೈಕಂಬ: ಉಳಾಯಿಬೆಟ್ಟು ಪಂಚಾಯತ್ನ ೨೦೨೨-೨೩ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಪಂಚಾಯತ್ ಅಧ್ಯಕ್ಷ ಹರಿಕೇಶ್ ನಡಿಗುತ್ತು ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಹೆಚ್ಚು ನೀರಿಗೆ ಆಗ್ರಹ: ಪಂಚಾಯತ್ ಆಡಳಿತವು ಈ ಬಾರಿ ಕುಡಿಯುವ ನೀರಿನ ದರ ತಿಂಗಳಿಗೆ ೧೫ ಸಾವಿರ ಲೀಟರ್ಗೆ ೧೦೦ ರೂ ಹಾಗೂ ಹೆಚ್ಚುವರಿ ನೀರಿಗೆ ಅಂದಾಜು ೫೫೦ ರೂವರೆಗೆ ಏರಿಕೆ ಮಾಡಿರುವರ ನಿರ್ಧಾರಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ತಿಂಗಳಿಗೆ ೩೦,೦೦೦ ಲೀಟರ್ ಪೂರೈಸಬೇಕು ಮತ್ತು ದರ ೧೦೦ ರೂ ನಿಗದಿಪಡಿಸಿ, ಹೆಚ್ಚುವರಿ ನೀರಿಗೆ ಹೆಚ್ಚು ದರ ವಸೂಲಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ವೇಳೆ ವೇದಿಕೆಯಿಂದ ಕೆಳಗಿಳಿದು ಬಂದ ಮೂವರು ಸದಸ್ಯರು ನೀರಿನ ಬೆಲೆ ಇಳಿಸಿ, ಹೆಚ್ಚು ನೀರು ಪೂರೈಸುವಂತೆ ಬೇಡಿಕೆ ಮುಂದಿಟ್ಟು ಆಗ್ರಹಿಸುತ್ತಿದ್ದ ಗ್ರಾಮಸ್ಥರಿಗೆ ಮುಕ್ತ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ, ಪ್ರತಿಯೊಂದು ವಾರ್ಡ್ನಲ್ಲಿ ರಚಿಸಲಾಗಿರುವ ಸಮಿತಿ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡು ಪಂಚಾಯತ್ ಆಡಳಿತಕ್ಕೆ ವರದಿ ನೀಡುತ್ತದೆ. ನೀರಿಗೆ ಸಂಬಂಧಿಸಿದ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ನೀರು ಕಡಿತ ಮಾಡಿ, ಹೆಚ್ಚುವರಿ ನೀರಿಗೆ ಹೆಚ್ಚು ದರ ನಿಗದಿಪಡಿಸಲಾಗಿದೆ. ಪ್ರತಿಯೊಂದು ಮನೆಗೆ ದಿನಂಪತ್ರಿ ೩೦,೦೦೦ ಲೀಟರ್ ನೀರು ಬೇಕಿದ್ದಲ್ಲಿ ಆ ವಿಷಯವನ್ನು ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಕ್ಷೇಪವಿಲ್ಲ ಎಂದರು.
ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕೈದು ಕೋಟಿ ರೂ ವೆಚ್ಚದ ಕಾಮಗಾರಿ ನಡೆದಿದ್ದು, ಇನ್ನೂ ಕೆಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ವಾರದ ಸಂತೆ, ಪ್ರತಿ ಮನೆಗೂ ಬಚ್ಚಲು ಗುಂಡಿ, ಕಚೇರಿಗೆ ಸೋಲಾರ್ ವಿದ್ಯುತ್ ವ್ಯವಸ್ಥೆ, ರಸ್ತೆಗಳ ಅಭಿವೃದ್ಧಿಯಂತಹ ಹಲವಾರು ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂದು ಅಧ್ಯಕ್ಷ ಹರಿಕೇಶ್ ಶೆಟ್ಟಿ ಹೇಳಿದರು.
ಪಿಡಿಒ ಅನಿತಾ ವಿ. ಕ್ಯಾಥರಿನ್ ಆಡಳಿತ ವರದಿ ವಾಚಿಸಿದರು. ತಾ.ಪಂನ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಲೋಕನಾಥ್ ನೋಡೆಲ್ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ರತ್ನಾ, ಪಂಚಾಯತ್ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಕಚೇರಿ ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು. ಪಂಚಾಯತ್ ಕಾರ್ಯದರ್ಶಿ ರಾಮಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬಾಕ್ಸ್ :- ಗ್ರಾಮಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಭಾಗಿ
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ತನ್ನ ಕ್ಷೇತ್ರ ವ್ಯಾಪ್ತಿಯ ಉಳಾಯಿಬೆಟ್ಟು ಪಂಚಾಯತ್ ಗ್ರಾಮಸಭೆಯಲ್ಲಿ ಭಾಗವಹಿಸಿದ ಶಾಸಕ ಭರತ್ ಶೆಟ್ಟಿ, ಒಟ್ಟು ೩೦ ಮಂದಿಯ ಪೈಕಿ ೨೩ ಮಂದಿ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ನಿವೇಶನ ಆದೇಶ ಪತ್ರವನ್ನು ವಿತರಿಸಿದರು.
ಶಾಸಕರು ಮಾತನಾಡಿ, ಪಂಚಾಯತ್ರಾಜ್ ನಿಯಮದಡಿ ಗ್ರಾಮಸಭೆ ನಡೆಯುತ್ತದೆ. ಇದರಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮಕ ಚರ್ಚೆ ನಡೆಸಬೇಕು. ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ. ಗ್ರಾಮಸ್ಥರ ಸಹಕಾರವಿದ್ದಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಲ್ಲಿಗೆ ಹೆಚ್ಚುವರಿ ಬಸ್ ವ್ಯವಸ್ಥೆಗೆ ಸಂಬAಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದರು.
