ಮುಂಬಯಿ : ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯ ಹಾಗೂ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ (ರಿ.) ಕೊಂಡೆವೂರು ಇದರ ಸಹಯೋಗದಲ್ಲಿ ಕಾಸರಗೋಡು ಉಪ್ಪಳ ಇಲ್ಲಿನ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಸಭಾಗೃಹದಲ್ಲಿ ಗಡಿನಾಡ ಸಾಂಸ್ಕೃತಿಕ ಉತ್ಸವವು ನಡೆಸಲ್ಪಟ್ಟಿತು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಮಠಾಧಿಪತಿ ಶ್ರೀ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಇವರ ದಿವ್ಯೋಪಸ್ಥಿತಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮ್ಮೇಳನವನ್ನು ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ. ಬಿ., ಅತಿಥಿ ಅಭ್ಯಾಗತರುಗಳಾಗಿ ಕರ್ನಾಟಕ ವಿಧಾನ ಪರಿಷತ್ತ್ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಕಾಸರಗೋಡು ಜಿಲ್ಲಾಧ್ಯಕ್ಷ ಎ.ಆರ್ ಸುಬ್ಬಯ್ಯಕಟ್ಟೆ ಮತ್ತು ಕಲಾವಿದ ಗೋ.ನಾ. ಸ್ವಾಮಿ ಬೆಂಗಳೂರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಮೀನಾರು ವಿಶ್ವನಾಥ ಆಳ್ವ ಮತ್ತು ಹಿರಿಯ ಕವಿ ಹಾಗೂ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅನುಪಮ ಸೇವೆ ಗುರುತಿಸಿ ಸನ್ಮಾನಿಸಲಾಯಿತು.
ಕೊಂಡೆವೂರು ಶ್ರೀಗಳು ಮಾತನಾಡಿ ಈ ರೀತಿಯ ಕನ್ನಡ ಸಂಸ್ಕೃತಿಯ ಗಂಗಾ ಪ್ರವಾಹದ ಹರಿವಿಗೆ ನಮ್ಮ ಮಠ ನಿರಂತರ ಬೆಂಬಲ ನೀಡುತ್ತದೆ ಎಂದರಲ್ಲದೇ, ಮುಂದಿನ ಪೀಳಿಗೆಗೆ ಕನ್ನಡ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಡಾ| ಸೋಮಶೇಖರ್ ಅಧ್ಯಕ್ಷೀಯ ನುಡಿಗಳನ್ನಾಡಿ ಕೊಂಡೆವೂರು ಶ್ರೀಗಳವರ ಊರಿನ ಸಮಸ್ತರ ಒಗ್ಗೂಡಿಕೆಯಲ್ಲಿ ನಡೆದಿರುವುದು ಸಂತೋಷದ ಸಂಗತಿ ಎಂದು ಕಾಸರಗೋಡು ಕೇರಳದಲ್ಲಿ ಇದ್ದರೂ ಭಾವನಾತ್ಮಕವಾಗಿ ಕನ್ನಡ ನಾಡಲ್ಲೇ ಇದೆ. ಸಿರಿಗನ್ನಡ ಉಳಿಕೆಗೆ ಇನ್ನಷ್ಟು ಕಡೆ ಇಂತಹ ಉತ್ಸವಗಳು ನಡೆಯಬೇಕು ಎಂದು ಅಪೇಕ್ಷಿಸಿದರು.
ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರ ಸಮೂಹ ಗೀತೆಯೊಂದಿಗೆ ಆರಂಭಗೊಂಡಿತು. ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಮೀರಾ ಆಳ್ವ ಹಾಗೂ ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ದಿನಕರ್ ಹೊಸಂಗಡಿ ವಂದನಾರ್ಪಣೆಗೈದರು.
ಭವ್ಯ ಮೆರವಣಿಗೆಯೊಂದಿಗೆ ಅತಿಥಿüಗಳನ್ನು ಬರಮಾಡಿ ಕೊಳ್ಳಲಾಯಿತು. ಮೆರವಣಿಗೆಯಲ್ಲಿ ಯಕ್ಷಗಾನ ವೇಷಗಳು, ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಮಾದಾಪುರದ ಶ್ರೀ ಬಸವೇಶ್ವರ ರೈತ ಯುವಕ ಸಂಘದ ಲೋಹಿತ್ ಕುಮಾರ್ ಮತ್ತು ತಂಡದವರಿAದ ಆಕರ್ಷಕ ಡೊಳ್ಳುಕುಣಿತ ಮತ್ತು ಮುಳ್ಳೇರಿಯದ ಶ್ರೀಮತಿ ಬಿಂದು ಶ್ರೀಧರ್ ಹಾಗೂ ಬಳಗದವರಿಂದ ತಿರುವಾದಿರಗಳ ಪ್ರದರ್ಶನ ನೀಡಿದರು. ಕೊಂಡೆವೂರು ಶಾಲಾ ವಿದ್ಯಾರ್ಥಿಗಳು ಆಕರ್ಷಕ ಯೋಗಛಾಪ್ ಪ್ರದರ್ಶನಗೈದರು.

