ಮುಂಬಯಿ : ಪಟ್ಲ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದ ಶಶಿಧರ ಬಿ. ಶೆಟ್ಟಿ ಬರೋಡ ಅವರು, “ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನೊಂದ, ಅಶಕ್ತ ಯಕ್ಷಗಾನ ಕಲಾವಿದರಿಗೆ ನೆರವಾಗುತ್ತಿರುವುದು ಶ್ಲಾಘನೀಯ. ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರ ಯೋಗಕ್ಷೇಮ ವಿಚಾರಿಸಲು ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕಲಾವಿದರು ಅದರ ಪ್ರಯೋಜನ ಪಡೆಯುವಂತಾಗಬೇಕು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಭಾನುವಾರ ಬೆಳಿಗ್ಗೆ ಮಂಗಳೂರು ಅಡ್ಯಾರ್ ಗಾರ್ಡನ್ನ ಪುನೀತ್ ರಾಜಕುಮಾರ್ ವೇದಿಕೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಶಶಿಧರ ಬಿ.ಶೆಟ್ಟಿ ಇವರ ಸಂಭ್ರಮಾಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಯಕ್ಷಧ್ರುವ ಪಟ್ಲ ಸಂಭ್ರಮ ೨೦೨೨ ಕಾರ್ಯಕ್ರಮವನ್ನುದ್ದೇಶಿಸಿ ಶಶಿಧರ ಶೆಟ್ಟಿ ಮಾತನಾಡಿದರು. ಯಕ್ಷಗಾನದ ಪೆಟ್ಟಿಗೆ ತೆರೆದು ಬೊಂಬೆಯಾಟದ ಬೊಂಬೆಗಳನ್ನು ಎತ್ತಿ ಆಡಿಸುವ ಮೂಲಕ ಪಟ್ಲ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.

ಉಪ್ಪಳ ಕೊಂಡೆವೂರು ಇದರ ಯೋಗಾಶ್ರಮದ ಮಠಾಧಿಪತಿ ಶ್ರೀಯೋಗನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು, “ಯಕ್ಷಗಾನದಂತಹ ಮಹಾನ್ ಕಲೆ ನಮ್ಮ ಸಂಸ್ಕೃತಿ, ಪರಂಪರೆ ಉಳಿಸುವಲ್ಲಿ ಭಾರೀ ದೊಡ್ಡ ಕೊಡುಗೆಯನ್ನು ನೀಡಿದೆ. ದೊಡ್ಡ ದೊಡ್ಡ ಕಾರ್ಯವನ್ನು ಕೈಗೆತ್ತಿಕೊಂಡಾಗ ಸಣ್ಣವರು ಕೂಡಾ ದೊಡ್ಡವರು ಆಗುತ್ತಾರೆ ಅನ್ನೋದಕ್ಕೆ ಪಟ್ಲ ಸತೀಶ್ ಶೆಟ್ಟಿಯವರು ಉದಾಹರಣೆಯಾಗಿದ್ದಾರೆ. ಓರ್ವ ಕಲಾವಿದನಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಯಕ್ಷಗಾನ ಕಲೆ ಕಾರಣ. ಆ ಕಲೆಯನ್ನು ಇನ್ನಷ್ಟು ಬೆಳೆಸುತ್ತಿರುವ ಪಟ್ಲರು ಸಮಾಜಮುಖಿಯಾಗಿ ಹತ್ತಾರು ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದರು.

ಪಟ್ಲಯಾನದ ಆರು ವರ್ಷಗಳ ಯಶೋಗಾಥೆ “ಧ್ರುವ ಪ್ರಭ” ಹಾಗೂ “ಯಕ್ಷರಂಗದ ಧ್ರುವತಾರೆ” ಪುಸ್ತಕವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿದ ಸಿಎ| ದಿವಾಕರ್ ರಾವ್ ಮಾತನಾಡಿ ಯಕ್ಷಗಾನ ಕಂಪನ್ನು ಮುಗಿಲಗಲ ಬೆಳಗಿಸಿದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಯಕ್ಷ ಲೋಕದ ವಿಸ್ಮಯ. ಯಕ್ಷಗಾನ ಕಲಾವಿದರ ಯೋಗಕ್ಷೇಮ ವಿಚಾರಿಸುತ್ತಿರುವ ಪಟ್ಲರಿಗೆ ಎಲ್ಲ ಕಲಾವಿದರು ಕೃತಜ್ಞರಾಗಿರಬೇಕು. ಅವರಿಗೆ ಕಟೀಲು ದುರ್ಗೆಯು ಇನ್ನಷ್ಟು ಆಯುಷ್ಯ ಅರೋಗ್ಯ ಕೊಟ್ಟು ನೊಂದವರಿಗೆ ನೆರವಾಗುವ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

ಫೆಡರೇಶನ್ ಆಫ್ ವರ್ಲ್್ಡ ಬಂಟ್’ಸ್ ಅಸೋಸಿಯೇಶನ್’ಸ್ನ ಅಧ್ಯಕ್ಷ, ಪಟ್ಲ ಫೌಂಡೇಶನ್ನ ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಾಹಿತಿ ಗ್ರಂಥ “ಧ್ರುವ ಪ್ರಭ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ “ಅಶಕ್ತ ಕಲಾವಿದರಿಗೆ ನೆರವಾಗುವ ಮೂಲಕ ಪಟ್ಲ ಫೌಂಡೇಶನ್ ಶ್ಲಾಘನೀಯ ಕೆಲಸ ಮಾಡುತ್ತಿದೆ. ಸತೀಶ್ ಶೆಟ್ಟಿ ಪಟ್ಲ ಅವರು ಸಮಾಜದ ಎಲ್ಲ ವರ್ಗದ ನೊಂದವರ ಕಣ್ಣೀರು ಒರೆಸುತ್ತಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸಬೇಕು. ಇಂತಹ ಸಮಾಜಮುಖಿ ಕಾರ್ಯಗಳು ಇನ್ನಷ್ಟು ನಡೆಯಲಿ” ಎಂದು ಹಾರೈಸಿದರು.

ಹೇರಂಬ ಕೆಮಿಕಲ್ ಇಂಡಸ್ಟ್ರೀಸ್ ಇದರ ನಿರ್ದೇಶಕ, ಪಟ್ಲ ಫೌಂಡೇಶನ್ ಟ್ರಸ್ಟ್ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಅವರು ಮಾತಾಡುತ್ತಾ, “ಇಂತಹ ಸಮಾಜಮುಖಿ ಚಿಂತನೆಯ ಕಾರ್ಯವೇ ನಿಜವಾದ ದೇವಿ ಮಹಾತ್ಮೆ. ಇಲ್ಲಿ ಎಲ್ಲ ದೇವಿ ದೇವತೆಯರು ಅನುಗ್ರಹಿಸಿದ್ದಾರೆ. ಹಿಂದೆ ಯಕ್ಷಗಾನ ಕಲಾವಿದರನ್ನು ತಾತ್ಸಾರದಿಂದ ಕಾಣುತ್ತಿದ್ದರು. ಆದರೆ ಇಂದು ಅದೇ ಯಕ್ಷ ಕಲೆಗೆ ನಿಜವಾದ ಗೌರವ, ಸಮ್ಮಾನ ಸಿಗುವಂತಾಗಲು ಪಟ್ಲ ಸತೀಶ್ ಕಾರಣಕರ್ತರಾಗಿದ್ದಾರೆ. ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸಿ ಸಹಾಯ ಸಲ್ಲಿಸುತ್ತಿರುವ ಟ್ರಸ್ಟ್ ಇನ್ನಷ್ಟು ಬೆಳಗಲಿ” ಎಂದು ಶುಭ ಶಂಸನೆಗೈದರು.
ಡಾ| ಕೃಷ್ಣ ಪ್ರಸಾದ್ ಕೂಡ್ಲು, ಜ್ಞಾನ ಸರೋವರ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಸುಧಾಕರ್ ಶೆಟ್ಟಿ, ಮಾಜಿ ಸಚಿವ ಜೆ.ಕೃಷ್ಣ ಪಾಲೇಮಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್., ಯೋಗೀಂದ್ರ ಭಟ್ ಉಳಿ, ರವಿಶಂಕರ್ ಶೆಟ್ಟಿ ಬಡಾಜೆ, ಡಾ| ರವಿ ಶೆಟ್ಟಿ ಮೂಡಂಬೈಲ್ (ಕತಾರ್), ಮಾರಣಕಟ್ಟೆ ಕೃಷ್ಣ ಮೂರ್ತಿ, ಶಶೀಂದ್ರ ಕುಮಾರ್, ಥಾಣೆ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ಜಯರಾಮ್ ಶೇಖ, ಬಂಟರ ಸಂಘ ಸುರತ್ಕಲ್ ಅಧ್ಯಕ್ಷ ಸುಧಾಕರ ಎಸ್ ಪೂಂಜಾ, ಅಡ್ಯಾರ್ ಮಾಧವ್ ನಾಯಕ್, ಕಳತ್ತೂರು ವಿಶ್ವನಾಥ್ ಶೆಟ್ಟಿ, ವಿಜಯಕುಮಾರ್ ಅಮೀನ್, ಪಟ್ಲ ಮಹಾಬಲ ಶೆಟ್ಟಿ, ಪುರುಷೋತ್ತಮ ಭಂಡಾರಿ, ಜಗನ್ನಾಥ ಶೆಟ್ಟಿ ಬಾಳ, ಜಗದೀಶ್ ಶೆಟ್ಟಿ, ಅಶೋಕ್ ಶೆಟ್ಟಿ, ದಾಂಡೇಲಿ ಪ್ರಕಾಶ್ ಶೆಟ್ಟಿ, ದುರ್ಗಾಪ್ರಸಾದ್ , ಡಾ. ಸತೀಶ್ ಭಂಡಾರಿ, ರವಿಶಂಕರ್ ಶೆಟ್ಟಿ, ಸಿಎ ಸುದೇಶ್ ಕುಮಾರ್ ರೈ, ರವಿ ಶೆಟ್ಟಿ ಅಶೋಕನಗರ, ಡಾ| ಮನುರಾವ್ ರಾಜೀವ ಪೂಜಾರಿ ಕೈಕಂಬ, ಉದಯಕುಮಾರ್ ಶೆಟ್ಟಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ಮಾತಾನ್ನಾಡಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ವಂದಿಸಿದರು.

