ಮಳಲಿ: ಮಸೀದಿಯಲ್ಲಿ ಗುಡಿಯಂತಹ ಕಟ್ಟಡ ರಚನೆ * “ಅವ್ಯಕ್ತ ಶಕ್ತಿ”ಗಾಗಿ ಗ್ರಾಮಸ್ಥರ ಸಭೆ ಹಿಂದೂಗಳಿಂದ “ನ್ಯಾಯಸಮ್ಮತ” ಹೋರಾಟದ ನಿರ್ಧಾರ
ಕೈಕಂಬ : ಹಿಂದೂ ದೇವರ ಗುಡಿ ಹೋಲುವ ಕಟ್ಟಡ ರಚನೆ ಹೊಂದಿರುವ ಮಳಲಿಯ ವಿವಾದಾಸ್ಪದ ಮಸೀದಿ ವಿಷಯದಲ್ಲಿ ಭಾನುವಾರ ಮಳಲಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಹಿಂದೂ ಮುಖಂಡರ ನೇತೃತ್ವದಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ-ಬಡಗುಳಿಪಾಡಿ ಹಾಗೂ ಮಳಲಿ ಗ್ರಾಮದ ಹಿಂದೂಗಳು ಬೃಹತ್ ಸಭೆ ನಡೆಸಿ, ದೇವಸ್ಥಾನದಂತಿರುವ ಪ್ರದೇಶದಲ್ಲಿ ಹಿಂದೂ ದೇವರ ಉಳಿವಿಗಾಗಿ “ನ್ಯಾಯಸಮ್ಮತ’ ಹೋರಾಟ ನಡೆಸಲು ತೀರ್ಮಾನಿಸಿದರು.
ಸಭೆಯನ್ನುದ್ದೇಶಿಸಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಹಿಂದೂತ್ವ ನನ್ನಲ್ಲಿ ರಕ್ತಗತವಾಗಿದ್ದು, ಹಿಂದೂಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ಮಳಲಿಯ ವಿವಾದಾಸ್ಪದ ಮಸೀದಿ ಪ್ರದೇಶದಲ್ಲಿ “ಅವ್ಯಕ್ತ ಶಕ್ತಿ”ಯೊಂದು ಇರುವುದು ಗೋಚರವಾಗಿದ್ದು, ಅದನ್ನು ತಮ್ಮದಾಗಿಸಲು ಕಾನೂನಾತ್ಮಕ ಹಾಗೂ ಧಾರ್ಮಿಕ ನೆಲೆಯಲ್ಲಿ ಹೋರಾಟ ನಡೆಸಬೇಕು. ಇದಕ್ಕೆ ಹಿಂದೂಗಳ ಬೆಂಬಲ ಅಗತ್ಯವಿದ್ದು, ಸಾಕಷ್ಟು ಪೂರಕ ದಾಖಲೆ ಸಂಗ್ರಹಿಸಬೇಕು ಎಂದರು.
ಜೂನ್ ೩ರವರೆಗೆ ಮಸೀದಿ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ನ್ಯಾಯಾಲಯದ ತಡೆಯಾಜ್ಞೆ ಜಾರಿಯಲ್ಲಿದೆ. ಸರ್ವೇ ನಡೆಯಲಿದೆ ಮತ್ತು ಪುರಾತತ್ವ ಇಲಾಖೆ ಇಲ್ಲಿನ ದಾಖಲೆಗಳ ಆಮೂಲಾಗ್ರ ಅಧ್ಯಯನ ನಡೆಸಲಿದೆ. ನ್ಯಾಯಸಮ್ಮತ ಹೋರಾಟ ನಡೆಸಲು ಮುಂದಾಗಿರುವ ತಾವು ಯಾರಿಗೂ ಬಗ್ಗಬೇಕಾಗಿಲ್ಲ ಅಥವಾ ಭೀತಿ ಪಡಬೇಕಾಗಿಲ್ಲ. ಮಳಲಿ ವಿಷಯದಲ್ಲಿ ಯಾರೂ ಹೆದರಿಕೊಂಡು ಜೀವಿಸುವ ಅಗತ್ಯವಿಲ್ಲ ಎಂದರು.
ವಿಹಿಪ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ, ಮಸೀದಿ ಇರುವಲ್ಲಿ ಹಿಂದೂ ದೇವರ ಶಕ್ತಿಯೊಂದಿದೆ ಎಂಬುದು ಕೆಲವೊಂದು ದೃಷ್ಟಾಂತಗಳಿಂದ ಸ್ಪಷ್ಟಗೊಂಡಿದೆ. ಅದನ್ನು ಉಳಿಸುವ ಕೆಲಸ ಹಿಂದೂಗಳಿಂದ ಆಗಬೇಕಿದೆ. ಅದು ದೇವಸ್ಥಾನ ಮತ್ತು ದೇವಸ್ಥಾನದ ಜಾಗ. ಶಕ್ತಿ ಸಾನಿಧ್ಯ ಉಳಿಸುವ ನಿಟ್ಟಿನಲ್ಲಿ ನಡೆಯುವ ಹೋರಾಟಕ್ಕೆ ಸಂಘಟನೆಯ ಪೂರ್ಣ ಬೆಂಬಲವಿದೆ. ಹಿಂದೂಗಳು ಯಾರಿಗೂ ಹೆದರಬೇಕಾಗಿಲ್ಲ ಎಂದರು.
ಬಜರಂಗ ದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಮಾತನಾಡಿ, ವಿವಾದಾಸ್ಪದ ಜಾಗದಲ್ಲಿರುವ ಹಿಂದೂ ಶಕ್ತಿಯ ಮೂಲ ಕಂಡುಕೊಳ್ಳುವ ನಿಟ್ಟಿನಲ್ಲಿ ಇನ್ನೆರಡು ದಿನಗಳಲ್ಲಿ ತಾಂಬೂಲ ಪ್ರಶ್ನೆ ಇಡಲಾಗುವುದು. ಬಳಿಕ ಅಷ್ಟಮಂಗಳ ಪ್ರಶ್ನೆ ಇಟ್ಟು ಎಲ್ಲ ಸಂಶಯಗಳಿಗೆ ಉತ್ತರ ಕಂಡುಕೊಳ್ಳಲಾಗುವುದು. ಮುಂದಿನ ಹಂತದಲ್ಲಿ ಹಿಂದೂಗಳಿಂದ ಸಂಘಟನಾತ್ಮಕ ಹೋರಾಟ ನಡೆಯಲಿದೆ ಎಂದರು.
ಸಭೆಯಲ್ಲಿ ಉದಯ ಆಳ್ವ ಉಳಿಪಾಡಿಗುತ್ತು, ಶಿವಾನಂದ ಮೆಂಡನ್ ಹಾಗೂ ಪುರಂದರ ಕುಲಾಲ್ ಮಾತನಾಡಿದರು. ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಕೆಲವರು ತಮ್ಮ ಸಲಹೆ, ಸೂಚನೆ ನೀಡಿದರು. ಆರೆಸ್ಸೆಸ್ ತಾಲೂಕು ಗ್ರಾಮ ವಿಕಾಸ ಪ್ರಮುಖ್ ಪುರುಷೋತ್ತಮ, ಮಂದಿರದ ಅಧ್ಯಕ್ಷ ಗಿರೀಶ್, ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷದ ಸೋಹನ್ ಅತಿಕಾರಿ, ಉದ್ಯಮಿ ಚಂದ್ರಹಾಸ ನಾರಳ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಹರೀಶ್ ಮಟ್ಟಿ ಹಾಗೂ ಸಂಘಟನಾ ಪ್ರಮುಖರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಗ್ರಾಮದ ಹಿಂದೂ ಬಾಂಧವರು ಉಪಸ್ಥಿತರಿದ್ದರು. ವಿಹಿಂಪ ಪ್ರಖಂಡ ಕಾರ್ಯದರ್ಶಿ ಸುನಿಲ್ ಪೆರಾರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.