ತೀರ್ಥಹಳ್ಳಿ: ನಂದಿತಾ ಡೆತ್ನೋಟ್ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ನಂದಿತಾ ಅಶ್ವಸ್ಥ ಸ್ಥಿತಿಯಲ್ಲಿ ಸಿಕ್ಕ ಸ್ಥಳದಲ್ಲಿ ಈ ಮೊದಲು ಯಾವುದೇ ಡೆತ್ ನೋಟ್ ಸಿಗದಿದ್ದರೂ, ಆಮೇಲೆ ಪೊಲೀಸರ ಕೈಗೆ ಡೆತ್ನೋಟ್ ಸಿಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಅಲ್ಲದೆ ಆಕೆ ಸಿಕ್ಕ ಸ್ಥಳಕ್ಕೆ ದೃಶ್ಯಮಾಧ್ಯಮದವರು, ಸ್ಥಳೀಯರು ಹೆತ್ತವರು ತೀವ್ರ ಶೋಧನೆ ನಡೆಸಿದ್ದರು. ಆಕೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಬಳಿಕ ಎರಡು ದಿನಗಳ ನಂತರ ಡೆತ್ ನೋಟ್ ಸಿಕ್ಕಿದೆ ಎಂದು ಪೊಲೀಸರು ತಿಳಿಸಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.
ಆಕೆ ಸಿಕ್ಕ ಸ್ಥಳದಲ್ಲಿ ಎರಡು ದಿನಗಳ ನಂತರ ಆಕೆಯ ಮೂರು ನೋಟ್ ಬುಕ್ ಗಳು ಸ್ಥಳಿಯರಿಗೆ ಸಿಕ್ಕಿದ್ದು, ಅದರಲ್ಲಿ ಒಂದರಲ್ಲಿ ಪುಟಗಳು ಹರಿದಿದ್ದರೆ ಇನ್ನೊಂದನ್ನು ಹಸು ತಿಂದಿತ್ತು. ಮತ್ತೊಂದು ಪುಸ್ತಕವನ್ನು ಸ್ಥಳೀಯ ವ್ಯಕ್ತಿಯೋರ್ವರು ಅಂಗಡಿಯಲ್ಲಿ ಕೊಟ್ಟಿದ್ದು ಅದರಲ್ಲಿ ಆಕೆ ಶಾಲೆಯಲ್ಲಿ ಕಲಿಯುತ್ತಿದ್ದ ಟೀಚರ್ ನ ನಂಬರ್ ಇತ್ತು. ಅದರ ಆಧಾರದಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ಆ ಪುಸ್ತಕವನ್ನು ಶಾಲೆಗೆ ಮರಳಿಸಿದ್ದರಾದರೂ ಆಮೇಲೆ ಬಾಲಕಿ ಅಸ್ವಸ್ಥ ಸ್ಥಿತಿಯಲ್ಲಿ ಸಿಕ್ಕ ಸುದ್ದಿ ಬಂದಿತ್ತು. ಇದೆಲ್ಲಾ ಹೇಗೆ ಸಾಧ್ಯವಾಯಿತು? ಪುಸ್ತಕಗಳು ಚೆಲ್ಲಾಪಿಲ್ಲಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹೇಗೆ? ಎಂದು ಪ್ರಶ್ನಿಸುತ್ತಿರುವ ಸ್ಥಳೀಯರು ಬಾಲಕಿಯನ್ನು ಅಪಹರಿಸಿ ವಿಷಪ್ರಾಶನಗೊಳಿಸಲಾಗಿದೆ ಎಂದು ಅಭಿಪ್ರಾಯಿಸುತ್ತಾರೆ.
ಇನ್ನು ಆಕೆಯ ಡೆತ್ನೋಟ್ ಬಗ್ಗೆಯೂ ಇನೂ ಗೊಂದಲ ಹೋಗಿಲ್ಲ. ಅದನ್ನು ಇದೀಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು ಅದರ ವರದಿ ಇನ್ನು ಬರಬೇಕಷ್ಟೆ. ಪೊಲೀಸ್ ಮೂಲಗಳು ಮಾತ್ರ ಅದು ನಂದಿತಾಳ ಕೈಬರಹವನ್ನೇ ಹೋಲುತ್ತಿದೆ ಎಂದು ಹೇಳುತ್ತಿದ್ದಾರೆ ಆದರೆ ಹೆತ್ತವರು ಮಾತ್ರ ಅದನ್ನು ನಂಬಲು ತಯಾರಿಲ್ಲ.



ಬಾಲಕಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುವುದರಿಂದ ಕನ್ನಡ ಕಾಗುಣಿತ ತಪ್ಪು ಮಾಡಲಾರಳು. ಆಕೆ ಕೆಂಪು ಶಾಯಿ ಉಪಯೋಗಿಸುತ್ತಿಲ್ಲ ಎಂದು ಆಕೆಯ ಹೆತ್ತವರು ಹೇಳುತ್ತಾರೆ. ಪೊಲೀಸರಿಗೆ ಸಿಕ್ಕ ಡೆತ್ ನೋಟ್ ಗರಿಗರಿಯಾಗಿದ್ದು ಯಾವುದೇ ರೀತಿಯಲ್ಲಿ ಮಸುಕಾಗಿಲ್ಲ. ಆಕೆ ಡೆತ್ ನೋಟ್ ನ ಕೆಳಗೆ ಬರೆದ ಹೆಸರಲ್ಲಿ ನಂದಿತಾ ಕೆ.ಜಿ ಎಂದಿದ್ದು, ಆಕೆಯ ನಿಜವಾದ ಹೆಸರು ನಂದಿತಾ ಕೆ.ಬಿ. ಎಂದಿದೆ. ನಂದಿತಾ ಇನ್ನೂ 13 ವರ್ಷದ ಮಗುವಾಗಿರುವುದರಿಂದ ಆಕೆಯ ತಲೆಯಲ್ಲಿ ವಿಷಕುಡಿದು ಸಾಯವಂಥಾ ಆಲೋಚನೆ ಯಾಕೆ ಬಂತು? ಹೇಗೆ ಬಂತು ಎಂಬುದೇ ಪ್ರಶ್ನೆಯಾಗಿ ಕಾಡುತ್ತದೆ.
ಗ್ರಾಫಾಲಜಿ ಪ್ರಕಾರ ನೋಡುವುದಾದರೆ ಯಾರೇ ಆಗಲಿ ಅಕ್ಷರವನ್ನು ಆರಂಭಿಸುವ ಮುನ್ನ ಪೆನ್ನಿನಲ್ಲಿ ಸ್ವಲ್ಪ ಒತ್ತಿ ಬರೆಯುತ್ತಾರೆ. ಆದ್ದರಿಂದ ಈ ಡೆತ್ ನೋಟನ್ನು ಸೂಕ್ಷ್ಮವಾಗಿ ಗ್ರಾಫಾಲಜಿ ತಜ್ಞರ ಪರಿವೀಕ್ಷಣೆಗೊಳಪಡಿಸಿ ನಂದಿತಾ ಅಕ್ಷರಕ್ಕೂ ಅದಕ್ಕೂ ತಾಳೆ ಹಾಕಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ನಂದಿತಾಳ ತಂದೆ ಟಿ.ಜಿ. ಕೃಷ್ಣ ಮೂರ್ತಿ ಹಾಗೂ ಆಕೆಯ ತಾಯಿ ವಿಮಾಲ ಆಕೆಯ ನಿಗೂಢ ಸಾವಿನ ಬಗ್ಗೆ ವಿವರಿಸಿದ್ದು ಹೀಗೆ:
`ನಂದಿತಾ ತನ್ನ ತಮ್ಮ ಕುಶಾಲ್ ಜೊತೆ ಶಾಲೆಗೆ ಹೋಗಿದ್ದಳು. ಕುಶಾಲ್ ಬಾಳೆ ಬೈಲು ರಸ್ತೆ ದಾಟಿ ಮುಂದೆ ಹೋಗಿದ್ದಾನೆ. ನಂತರ ಆಕೆಯ ಅಪಹರಣ ನಡೆಯಿತು. ಇದು ನಮಗೆ ಸೊಪ್ಪು ತರಲು ಹೋಗಿದ್ದ ಮಹಿಳೆಯರಿಂದ ತಿಳಿಯಿತು. ಆಕೆಯನ್ನು ಮನೆಗೆ ಕರೆದುಕೊಂಡು ಬಂದ ನಂತರ ಆಕೆ ನನ್ನನ್ನುಮೂರು ಮಂದಿ ಬಲವಂತವಾಗಿ ಕಾನಂದಗಿರಿ ಗುಡ್ಡಕ್ಕೆ ಕರೆದುಕೊಂಡು ಹೋಗಿದ್ದರು, ಅಲ್ಲಿ ನನಗೆ ನೀರು ಕುಡಿಸಿದ ನಂತರ ತಲೆತಿರುಗಿತು. ಅಷ್ಟರಲ್ಲಿ ಮಹಿಳೆಯರು ಬಂದಿದ್ದನ್ನು ನೋಡಿ ನನ್ನನ್ನು ಬಿಟ್ಟಡು ಹೋದರು ಎಂದು ಬಾಲಕಿ ಮಾಹಿತಿ ನೀಡಿದಳು. ಸದ್ಯ ಏನೂ ಆಗದೆ ಮನೆಗೆ ಬಂದಳಲ್ಲ ಎಂದು ಬಗೆದು ಬಾಲಕಿಯ ಮರ್ಯಾದೆ ಪ್ರಶ್ನೆಯ ನೆಪದಿಂದ ಪೊಲೀಸರಿಗೆ ದೂರು ಕೊಡಲಿಲ್ಲ. ಆದರೆ ಮಧ್ಯರಾತ್ರಿ ಆಕೆಗೆ ವಾಂತಿ ಬಂದಂತಾಯ್ತು. ಅ.31ರಂದು ನಾವು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಆಕೆಯ ಬಿಪಿ ಹೆಚ್ಚಿದ ಕಾರಣ ಆಕೆಯನ್ನು ಉಡುಪಿಯ ಮಣಿಪಾಲಕ್ಕೆ ಕರೆದುಕೊಂಡು ಹೋದೆವು. ಅಲ್ಲಿನ ವೈದ್ಯರು ವಿಷ ಪದಾರ್ಥ ಸೇರಿದ ಕಾರಣ ಆಕೆ ಮೃತಪಟ್ಟಿದ್ದಾಳೆಂದು ತಿಳಿಸಿದ್ದರು. ಆಮೇಲೆ ನಾವು ದೂರು ದಾಖಲಿಸಿದೆವು.
ಡೆತ್ ನೋಟ್ ಸಿಕ್ಕಿದೆ ಎಂದು ಹೇಳುವ ಪೊಲೀಸರು ಇದೆಲ್ಲಾ ಆರೋಪಿಗಳನ್ನು ರಕ್ಷಿಸಲು ಮಾಡಿರುವ ತಂತ್ರವಾಗಿದೆ. ಆಕೆಯ ನಿಜ ಹೆಸರು ನಂದಿತಾ ಕೆಬಿ. ಆದರೆ ಆಕೆ ಸಹಿಯಲ್ಲಿ ನಂದಿತಾ ಕೆ.ಜಿ ಎಂದು ಬರೆದಿದ್ದಾಳೆ. ಸರಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಆದರೆ ಇದರಲ್ಲಿ ನಮಗೆ ನಂಬಿಕೆ ಇಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸಲೇಬೇಕು’ ಎಂದು ಹೆತ್ತವರು ತಿಳಿಸಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯ ವೈದ್ಯರು ಬಾಲಕಿ ವಿಷ ಸೇವಿಸಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಯಾಕೆ ಎಡವಟ್ಟು ಮಾಡಿದ್ದಾರೆ ಎಂದು ಮತ್ತೊಂದು ಪ್ರಶನೆಯೂ ಬೃಹದಾಕಾರವಾಗಿ ಮೂಡಿದೆ. ಆಕೆಯನ್ನು ಅಪಹರಿಸಿದ ಮೂರು ಮಂದಿಯಾರು? ಪೊಲೀಸ್ ವರಿಷ್ಠ ಕೌಶಲೇಂದ್ರ ಕುಮಾರ್ ಒಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದು, ಆತನ ಕಥೆ ಏನಯ್ತು ಎಂಬ ಪ್ರಶ್ನೆ ಕರ್ನಾಕಟದ ಜನತೆ ತಲೆ ಕೊರೆಯುವಂತೆ ಮಾಡುತ್ತಿದೆ

