ಬಂಟ್ವಾಳ : ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿದರು. ಇಲ್ಲಿನ ಪುರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅವರು ಪ್ರಸಕ್ತ ಸಾಲಿನ ರೂ ೨೬.೫೭ ಲಕ್ಷ ಮಿಗತೆ ಬಜೆಟ್ ಮಂಡಿಸಿದ್ದಾರೆ. ವಿವಿಧ ಮೂಲಗಳಿಂದ ಆದಾಯ ಮತ್ತು ಅನುದಾನ ಸೇರಿ ಒಟ್ಟು ರೂ ೨೭.೧೦ ಕೋಟಿ ಮೊತ್ತದ ಆದಾಯ ನಿರೀಕ್ಷಿಸಲಾಗಿದೆ ಎಂದರು.
ಜೈವಿಕ ಶೌಚಾಲಯ:
ಪುರಸಭಾ ವ್ಯಾಪ್ತಿಯಲ್ಲಿ ನೂತನ ಜೈವಿಕ ಶೌಚಾಲಯ ನಿರ್ಮಾಣಕ್ಕೆ ರೂ ೧೫ ಲಕ್ಷ, ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ರೂ ೫೦ ಲಕ್ಷ, ಬಿ.ಮೂಡದಲ್ಲಿ ಮೀನು ಮಾರುಕಟ್ಟೆ ಮತ್ತು ಪಾಣೆಮಂಗಳೂರಿನಲ್ಲಿ ಮಾಂಸ ಮಾರುಕಟ್ಟೆ ನಿರ್ಮಾಣಕ್ಕೆ ರೂ ೨೫ ಲಕ್ಷ, ಪೌರಕಾರ್ಮಿಕರ ವೇತನ, ಇ ಎಸ್ ಐ, ಪಿ ಎಫ್, ಜೀವ ವಿಮೆ ಮತ್ತಿತರ ಸೌಲಭ್ಯಗಳಿಗೆ ರೂ ೧.೮೬ ಕೋಟಿ, ಹೊರಗುತ್ತಿಗೆ ಚಾಲಕರ ನಿಯೋಜನೆ ಮತ್ತು ಸ್ವಚ್ಚತಾ ಸಾಮಾಗ್ರಿ ದಾಸ್ತಾನಿಗೆ ರೂ ೪೦ ಲಕ್ಷ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಆಸ್ತಿತೆರಿಗೆ ಪರಿಷ್ಕರಣೆಗೆ ವಿರೋಧ:
ಆಸ್ತಿ ತೆರಿಗೆ ಶೇ.೩ ರಿಂದ ೫ ರಷ್ಟು ಹೆಚ್ಚಿಸಲು ಪುರಸಭೆಯ ಆಡಳಿತ ಪಕ್ಷ (ಕಾಂಗ್ರೆಸ್) ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದರು. ಈಚೆಗೆ ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಿಸಿದಂತೆ ಸ್ಥಳೀಯಾಡಳಿತ ಸಂಸ್ಥೆಯ ಸದಸ್ಯರ ಗೌರವಧನ ರೂ ೧೦ ಸಾವಿರಕ್ಕೆ ಹೆಚ್ಚಳಗೊಳಿಸಲು ನಿರ್ಣಯ ಕೈಗೊಂಡರು.
ಸದಸ್ಯರಾದ ವಾಸು ಪೂಜಾರಿ, ಗಂಗಾಧರ್ ಪೂಜಾರಿ, ಲುಕ್ಮಾನ್ ಬಂಟ್ವಾಳ, ಮಹಮ್ಮದ್ ನಂದರಬೆಟ್ಟು, ಜೀನತ್ ಫಿರೋಜ್, ಇದ್ರಿಸ್, ಹರಿಪ್ರಸಾದ್, ಹಸೈನಾರ್, ಸಿದ್ದಿಕ್ ಗುಡ್ಡೆಯಂಗಡಿ, ಮೀನಾಕ್ಷಿ ಗೌಡ, ವಿದ್ಯಾವತಿ, ದೇವಕಿ, ಶಶಿಕಲಾ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಸಮುದಾಯ ಅಧಿಕಾರಿ ಉಮಾವತಿ, ಮೆನೇಜರ್ ಲೀಲಾವತಿ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ ಇದ್ದರು.
