ಮುಂಬಯಿ : ವಿಶ್ವ ಪ್ರಸಿದ್ಧ ಗಾಯತ್ರಿ ಶಕ್ತಿ ಪೀಠ ದೇಗುಲ ಬರೋಡ ಇದರ ಬಂಧು, ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ, ಗುಜರಾತ್ ಬಿಲ್ಲವರ ಸಂಘ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ (ಬೆಳಣ್ಣು-ಕಾರ್ಕಳ) ಮತ್ತು ಶೋಭಾ ದಯಾನಂದ್ ದಂಪತಿ ತಮ್ಮ ಬಾಳಿನ ಅಮೃತಮಹೋತ್ಸವ (೭೫ನೇ ವರ್ಷಕ್ಕೆ) ಕಾಲಿರಿಸಿದ ಹಾಗೂ ವೈವಾಹಿಕ ಜೀವನದ ವಾರ್ಷಿಕೋತ್ಸವದ (೪೬ನೇ ವರ್ಷಕ್ಕೆ) ಪರ್ವಕಾಲದಿ ಕಳೆದ ಭಾನುವಾರ ಸಂಜೆ ದತ್ತಕ ಪುತ್ರ ಜಯದೀಪನ ಜನ್ಮ ದಿವಸ ಕಾರ್ಯಕ್ರಮ ನೆರವೇರಿಸಿದರು.

ಬೋಂಟ್ರಾ ದಂಪತಿ ಪರಿವಾರದ ಸಂಬಂಧಿಕರು ಸೇರಿ ಸುಮಾರು ೩೭೫ ಮಂದಿ ಇಷ್ಟ ಮಿತ್ರರು, ತುಳು ಕನ್ನಡಿಗರು, ಸಮಾಜ ಬಾಂಧವರು ಜೊತೆಗೂಡಿ ಬರೋಡಾ ವಂಸ ರಸ್ತೆಯಲ್ಲಿನ ವಿಶ್ರಾಮ್ನಗರ ನಿವಾಸದಲ್ಲಿ ಮಾತಾ ಗಾಯತ್ರಿಯ ದೀಪ ಯಜ್ಞದೊಂದಿಗೆ ಆಚರಿಸಿದರು.

ಗಾಯತ್ರಿ ಪರಿವಾರದ ಪ್ರಜ್ಞಾಪುತ್ರಿ ಮೀನಾಕುಮಾರಿ ಕಾಭರೀಯ ಹಾಗೂ ತಂಡವು ಬಹಳ ಕ್ರಮಬದ್ಧ ರೀತಿಯಿಂದ ಯಾಗ ಕಾರ್ಯಕ್ರಮ ನಡೆಸಿದರು. ಅನಿಲ್ ರಾವಲ್ ಯಾಗ ನೆರವೇರಿಸಿದರು. ಏಕಕಾಲಕ್ಕೆ ಸುಮಾರು ೭೫೦ ದೀಪಗಳನ್ನು ಬೆಳಗಿಸಿ ಮನಮೋಹಕ ದೃಶ್ಯದೊಂದಿಗೆ ಸುಮಾರು ಮೂರುವರೆ ತಾಸು ನಡೆಸಲ್ಪಟ್ಟ ದೀಪಯಜ್ಞದಲ್ಲಿ ಪ್ರಜ್ಞಾಪುತ್ರಿ ಮೀನಾಕುಮಾರಿ ಪ್ರವಚನಗೈದರು. ರಂಜನ್ ಭಾಯಿ ಜೋಶಿ, ಮಾಜಿ ಶಾಸಕ ಮಂಗಳ್ಸಿಂಗ್ ಗೋಯಲ್, ಡಾ| ಗಿರೀಶ್ ಪಾರೇಖ್, ನ್ಯಾಯವಾದಿ ವಿಜಯ್ ಶಿರ್ಕೆ, ಸಿಎ| ಎಫ್. ಆರ್ ಶರ್ಮ ಸೇರಿದಂತೆ ಹಲವಾರ ಗಣ್ಯರು, ಸುಪುತ್ರ ಚಿರಾಗ್ ದಯಾನಂದ್, ಸೊಸೆ ಮಾಯಾ ಚಿರಾಗ್, ದತ್ತುಪುತ್ರ ಜೈದೀಪ್ ಜುಲೇಕರ್ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಆನಂದೋತ್ಸವ ಅನುಭವಿಸಿದರು. ತರುವಾಯ ಮಹಾಪ್ರಸಾದದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

