ಬಂಟ್ವಾಳ : ತಾಲ್ಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ‘ದೇವರು-ಧರ್ಮ- ದೇವಾಲಯ’ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿದರು.
ಸಾತ್ವಿಕ ಜೀವನ ಪದ್ದತಿ ಮತ್ತು ಶ್ರದ್ಧಾ ಭಕ್ತಿಯಿಂದ ಸರ್ವಶಕ್ತ ದೇವರ ಆರಾಧನೆ ಮಾಡುವುದರ ಜೊತೆಗೆ ಭಕ್ತರ ಸಾಮೂಹಿಕ ಪ್ರಾರ್ಥನೆಗೆ ದೇವರ ಸಾಮಿಪ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತೀ ದೇವಾಲಯಗಳಲ್ಲಿ ಗೋಶಾಲೆ ಮತ್ತು ಬಡವರಿಗಾಗಿ ಉಚಿತ ಕಲ್ಯಾಣ ಮಂಟಪ ಆರಂಭಿಸುವ ಬಗ್ಗೆ ಧಾರ್ಮಿಕ ಪರಿಷತ್ ಚಿಂತನೆ ನಡೆಸಿದೆ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.
ಇಲ್ಲಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಶ್ರೀ ಲಕ್ಷ್ಮಿವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ‘ದೇವರು-ಧರ್ಮ- ದೇವಾಲಯ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್ ಕೆ ಉಪಾಧ್ಯಾಯ, ಬ್ರಹ್ಮ ಕಲಶ ಸಮಿತಿ ಗೌರವ ಸಲಹೆಗಾರ ಮಹಾಬಲ ಶೆಟ್ಟಿ ನುಂಗೂರು, ಸಂಚಾಲಕ ಟಿ. ತಾರಾನಾಥ್ ಕೊಟ್ಟಾರಿ, ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ ಮತ್ತಿತರರು ಇದ್ದರು.
ಇದೇ ವೇಳೆ ಶತಾವರ್ತನ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಪೂರ್ವಕ, ಶ್ರೀವಿಷ್ಣು ಸಹಸ್ರನಾಮ ಹೋಮ, ಅನುಜ್ಞಾ ಕಲಶಾಭಿಷೇಕ, ಶ್ರೀಚಕ್ರ ಪೂಜೆ, ಅಂಕುರ ಪೂಜೆ ನೆರವೇರಿತು.
