ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಭಾನುವಾರ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ `ಕಾಲಾವಧಿ ಗುರುಪುರ ಬಂಡಿ ಜಾತ್ರೆ’ ನೆರವೇರಿತು.
ಪ್ರಾತಃಕಾಲದಲ್ಲಿ ದೈವಸ್ಥಾನಕ್ಕೆ ಭಂಡಾರ ಆಗಮನವಾದ ಬಳಿಕ ಶ್ರೀ ವೈದ್ಯನಾಥ ಮತ್ತು ಶ್ರೀ ಧೂಮಾವತಿ ದೈವ ಪಾತ್ರಿಗಳ ದರ್ಶನದೊಂದಿಗೆ `ಗರಡೆ’ ಧ್ವಜಾರೋಹಣ ನಡೆಯಿತು. ನಂತರ ಭಕ್ತಾದಿಗಳ ಕಂಚಿಲು ಸೇವೆ ಮತ್ತು ಉರುಳು ಸೇವೆ ನಡೆಯಿತು. ಮಧ್ಯಾಹ್ನ ಒಂದು ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಶ್ರೀ ವೈದ್ಯನಾಥ ದೈವದ ನೇಮ ಹಾಗೂ ಮುಂಜಾನೆ ಬಂಡಿ ರಥೋತ್ಸವ, ಅಭಯ ಪ್ರದಾನ ಮತ್ತು ಪ್ರಸಾದ ವಿತರಣೆ ನಡೆಯಿತು.
ಧಾರ್ಮಿಕ ಆಚರಣೆ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಗಡಿಕಾರ ಪ್ರಮೋದ್ ಕುಮಾರ್ ರೈ ಸಹಿತ ೧೬ ಗುತ್ತುಗಳ ಯಜಮಾನರು, ಊರ-ಪರವೂರ ಸಾವಿರಾರು ಭಕ್ತರು ಇದ್ದರು.


