ಕೈಕಂಬ : ಗುರುಪುರ ಸರ್ಕಾರಿ ಪಿಯು ಕಾಲೇಜಿನ ಕಂಪ್ಯೂಟರ್ ವಿದ್ಯಾರ್ಥಿಗಳಿಗಾಗಿ ಸಿಎ ಮಧುಸೂದನ್ ಪೈ ಗುರುಪುರ (ಸಿಎಫ್ಒ ಸೆಂಚುರಿ ರಿಯಲ್ ಎಸ್ಟೇಟ್, ಬೆಂಗಳೂರು) ಮತ್ತು ಬಂಧುಮಿತ್ರರು ಕೊಡುಗೆಯಾಗಿ ನೀಡಿದ ೧೨ ಕಂಪ್ಯೂಟರ್ನ್ನು ಸೋಮವಾರ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಡಾ. ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಕಾಲೇಜಿಗೆ ಹಸ್ತಾಂತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಸಾಧನೆ ಪಥದಲ್ಲಿ ಅಸಾಧ್ಯ ಎಂಬುದು ಯಾವುದೂ ಇಲ್ಲ. ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಪ್ರತಿಭೆ ಒಂದು ಮಟ್ಟಕ್ಕೆ ಕೊಂಡೊಯ್ದ ಮೇಲೆ ನಮ್ಮ ಪ್ರವೃತ್ತಿ ಏಳ್ಗೆಗೆ ಸಹಕಾರಿಯಾಗುತ್ತದೆ. ಉತ್ತಮ ಪ್ರವೃತ್ತಿಯೊಂದಿಗೆ ಮುಂದುವರಿದಾಗ ಜೀವನದಲ್ಲಿ ಶ್ರೇಷ್ಠ ವ್ಯಕ್ತಿಗಳಾಗುತ್ತೀರಿ. ಈ ನಿಟ್ಟಿನಲ್ಲಿ ನಿಮ್ಮ ಪ್ರತಿಭೆಗೆ ತಕ್ಕಂತೆ ಸರ್ಕಾರ, ದಾನಿಗಳ ಕೊಡುಗೆ ಲಭ್ಯವಿದ್ದು, ಇದರ ಸದುಪಯೋಗವಾಗಬೇಕು ಎಂದರು.
ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಮಧುಸೂದನ್ ಪೈ ಗುರುಪುರ ಮಾತನಾಡಿ, ಪ್ರತಿಭೆ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ಮಾಡಬೇಕು. ಕಲಿಕೆಯ ಜೊತೆಗೆ ಜನರೊಂದಿಗೆ ಬೆರೆಯುವ ಗುಣ ಬೆಳೆಸಿಕೊಳ್ಳಬೇಕು. ತರಗತಿಯಲ್ಲಿ ಕಲಿಯುವ ವಿಷಯಗಳಿಗಿಂತಲೂ ಹೆಚ್ಚು ಈ ಸಮಾಜದಿಂದ ಕಲಿಯಲಿಕ್ಕಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಪರವಾಗಿ ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಗುರುಪುರ ಪಂಚಾಯತ್ ಸದಸ್ಯರಾದ ಜಿ ಎಂ ಉದಯ ಭಟ್, ರಾಜೇಶ್ ಸುವರ್ಣ, ಸುನಿಲ್ ಜಲ್ಲಿಗುಡ್ಡೆ ಹಾಗೂ ಪ್ರಾಂಶುಪಾಲ ಚಂದ್ರಶೇಖರ್, ಸಮಿತಿಯ ಸದಸ್ಯರಾದ ವಿನಯ್ ಕುಮಾರ್ ಗುರುಪುರ, ಕೂಸಪ್ಪ ಸಪಲಿಗ ಮಾಸ್ಟರ್, ಸುಧೀರ್ ಕಾಮತ್, ರಾಜೇಶ್ ಶೆಟ್ಟಿ ಗುರುಪುರ, ಜಿ ಕೆ ನರಸಿಂಹ ಪೂಜಾರಿ, ಜಲಜಾ, ಶೈಲಜಾ, ಕಾಲೇಜು ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಉಪನ್ಯಾಸಕಿ ವಯೋಲಾ ಸಿಕ್ವೇರ ಸ್ವಾಗತಿಸಿದರು.
