ಫ್ಲೋರಿಡಾ: ಮಧ್ಯಪ್ರದೇಶದ ಭೋಪಾಲ್ ಅನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮಾಜಿ ಸಿಇಒ ವಾರೆನ್ ಆಂಡರ್ಸನ್ ನಿಧನರಾಗಿ ತಿಂಗಳು ಕಳೆದಿದೆ. ಆದರೆ, ಸಾವಿರಾರು ಜನರ ಸಾವು ನೋವಿಗೆ ಕಾರಣರಾದ ವಾರೆನ್(93) ತನ್ನ ನಿವಾಸದಲ್ಲಿ ಸೆ.29ರಂದೇ ಮೃತರಾಗಿದ್ದಾರೆ ಎಂಬ ಸುದ್ದಿ ಬಂದಿದೆ.
1984ರ ಡಿಸೆಂಬರ್ 2,3ರಂದು ಸಂಭವಿಸಿದ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಿಸಿದಂತೆ ಆಂಡರ್ಸನ್ ಭಾರತದಲ್ಲಿ ಕೇಸ್ ಎದುರಿಸುತ್ತಿದ್ದರು. ಆದರೆ ಒಮ್ಮೆಯೂ ಆಂಡರ್ಸನ್ ವಿಚಾರಣೆಗೆ ಹಾಜರಾಗಿರಲಿಲ್ಲ. ಸೆ.29ರಂದು ಫ್ಲೋರಿಡಾದ ವೆರೋ ಬೀಚ್ ಬಳಿ ನರ್ಸಿಂಗ್ ಹೋಮ್ ನಲ್ಲಿ ವಾರೆನ್ ಕೊನೆಯುಸಿರೆಳಿದ್ದಾರೆ. ಸ್ವೀಡಿಷ್ ಮೂಲದ ವಲಸಿಗರ ಕುಟುಂಬಕ್ಕೆ ಸೇರಿದ್ದ ಆಂಡರ್ಸನ್ ನವೆಂಬರ್ 21 ರಂದು ಬ್ರೂಕ್ಲೀನ್ ನಲ್ಲಿ ಜನಸಿದ ವಾರೆನ್ ಸಾವಿನ ಬಗ್ಗೆ ಅವರ ಪತ್ನಿ ಲಿಲಿಯಾನ್ ಯಾರಿಗೂ ತಿಳಿಸಿಲ್ಲ. ಪ್ರಮುಖ ಸುದ್ದಿ ಮಾಧ್ಯಮಗಳಿಗೆ ಸುದ್ದಿ ಮುಟ್ಟಿದ್ದೇ ಗುರುವಾರ(ಅ.30) ಎಂಬುದು ಗಮನಾರ್ಹ. ಫ್ಲೋರಿಡಾದ ವೆರೋ ಬೀಚ್ ಬಾರಿಯರ್ ದ್ವೀಪದ ಸ್ಥಳೀಯ ವಾರ ಪತ್ರಿಕೆಯೊಂದರಲ್ಲಿ ಸಣ್ಣ ಸುದ್ದಿಯಾಗಿದ್ದು ಬಿಟ್ಟರೆ ಜಗತ್ತಿಗೆ ವಾರೆನ್ ಸಾವಿನ ಸುದ್ದಿ ತಿಳಿದು ಇನ್ನೂ ಗಂಟೆಗಳಾಗಿಲ್ಲ.
1
984ರಲ್ಲಿ ಸಂಭವಿಸಿದ್ದ ಭೋಪಾಲ್ ಅನಿಲ ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಂಪನಿ ಕಾರಣವಾಗಿತ್ತು. 42 ಟನ್ ವಿಷಾನಿಲ (ಮಿಥೈಲ್ಐಸೋ ಸೈನೇಟ್) ವಾತಾವರಣದಲ್ಲಿ ಸೇರಿಕೊಂಡ ಪರಿಣಾಮವಾಗಿ, ಈ ಕಾರ್ಖಾನೆಯ ಸುತ್ತಲಿನ ಕೊಳಚೆ ಪ್ರದೇಶಗಳಲ್ಲಿದ್ದ ಸುಮಾರು 3,800 ಜನ ತಕ್ಷಣ ಅಸುನೀಗಿದರೆ, ನಂತರದ ಎರಡು ದಶಕಗಳಲ್ಲಿ ಈ ಸೋರುವಿಕೆಯ ಪರಿಣಾಮವಾಗಿ 20,000 ಜನ ಸತ್ತ ವರದಿಯಾಗಿದೆ. ಇದಲ್ಲದೆ, ಸುಮಾರು 5 ಲಕ್ಷ ಜನ, ಶಾಶ್ವತ ಅಂಗವಿಕಲರಾಗಿದ್ದಾರೆ.
ದುರಂತದ ವೇಳೆ ಅಮೆರಿಕಕ್ಕೆ ಆಂಡರ್ಸನ್ ಪರಾರಿಯಾಗಿದ್ದ. ಆಂಡರ್ಸನ್ ನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ನಿರಾಕರಿಸಿತ್ತು. ಅದರೆ, ಒಮ್ಮೆ ಭಾರತಕ್ಕೆ ಬಂದಿದ್ದ ವಾರೆನ್ ಬಂಧನವಾದರೂ ಸುಲಭದಲ್ಲಿ ಜಾಮೀನು ಪಡೆದು ಅಮೆರಿಕಕ್ಕೆ ಹಾರಿದ್ದ. ಹೀಗಾಗಿ ಭಾರತದ ವಾಂಟೆಂಡ್ ಲಿಸ್ಟ್ ನಲ್ಲಿ ಈಗಲೂ ಆಂಡರ್ಸನ್ ಹೆಸರಿದೆ.2009ರಿಂದ ವಾರೆಂಟ್ ಜಾರಿಯಾಗುತ್ತಲೇ ಇದೆ. 1989ರಲ್ಲಿ ಯೂನಿಯನ್ ಕಾರ್ಬೈಡ್ ಸಂಸ್ಥೆ ಸಂತ್ರಸ್ತರಿಗೆ 470 ಯುಎಸ್ ಡಾಲರ್ ಪರಿಹಾರ ಮೊತ್ತವನ್ನು ಭಾರತ ಸರ್ಕಾರಕ್ಕೆ ನೀಡಿ ಕೇಸಿನಿಂದ ಖುಲಾಸೆಗೊಳಿಸುವಂತೆ ಕೋರಿತ್ತು. ಅದರೆ, ಜನ ಸಾಮಾನ್ಯರ ಮನಸ್ಸಿನಿಂದ ಭೋಪಾಲ್ ಮಹಾದುರಂತ ಎಂದಿಗೂ ಅಳಿಸುವುದಿಲ್ಲ. ಸುಮಾರು ಇಪ್ಪತ್ತು ಸಾವಿರ ಮಂದಿ ಮಾರಣಹೋಮಕ್ಕೆ ಕಾರಣನಾದ ಪಾಪಿ ವಾರೆನ್ ಆಂಡರ್ಸನ್ ಶಿಕ್ಷೆಯಾಗದೆ ಇಹಲೋಕ ತ್ಯಜಿಸಿದ ಎಂಬ ಕೊರಗು ಇದ್ದೇ ಇರುತ್ತದೆ. ಭೋಪಾಲದಲ್ಲಿ ಈಗಲೂ ಅನೇಕ ಕುಟುಂಬಗಳಲ್ಲಿ ಅಂಗವಿಕಲತೆ ಹಾಗೂ ಅನಾರೋಗ್ಯಪೀಡಿತರಾಗಿ, ಉಸಿರಾಡುವ ಶವಗಳಂತಿರುವ ಮಂದಿಗಳನ್ನು ನೋಡಬಹುದು.






