ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ಜೋಡುಸ್ಥಾನ ಶ್ರೀ ನಾಲ್ಕೈತ್ತಾಯ- ಪಂಜುರ್ಲಿ ದೈವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ.
ಬಂಟ್ವಾಳ ನರಿಕೊಂಬು ಗ್ರಾಮದ ಕಾರಣಿಕ ಪ್ರಸಿದ್ಧ ಮಾಣಿಮಜಲು ಜೋಡುಸ್ಥಾನ ಶ್ರೀ ನಾಲ್ಕೈತ್ತಾಯ- ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಲಶಾಭಿಷೇಕ ಹಾಗೂ ಅಷ್ಟೋತ್ತರ ಶತನಾರಿಕೇಳ ಯಾಗ ಇದೇ ೨೬ರಂದು ಬೆಳಿಗ್ಗೆ ೧೦.೪೨ಗಂಟೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ಹೇಳಿದ್ದಾರೆ.
ಮಾಣಿಮಜಲು ದೈವಸ್ಥಾನದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಹೊರೆಕಾಣಿಕೆ ಮೆರವಣಿಗೆ ನಡೆದಿದೆ. ೨೬ರಂದು ಬೆಳಿಗ್ಗೆ ೧೧ಗಂಟೆಗೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಚಾಲನೆ ನೀಡುವರು. ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಶಿಕಲಾ ಜೊಲ್ಲೆ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು. ಅಂದು ರಾತ್ರಿ ನಾಲ್ಕೈತ್ತಾಯ ದೈವದ ನೇಮೋತ್ಸವ ನಡೆಯದ್ದು, ಇದೇ ೨೭ರಂದು ರಾತ್ರಿ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದರು.
ಇದೇ ೨೯ರಂದು ಬೆಳಿಗ್ಗೆ ೯.೫೬ ಗಂಟೆಗೆ ಇಲ್ಲಿನ ನಿರ್ಮಾಲ್ ಪರಿವಾರ ದೈವಗಳಾದ ರಕ್ತೇಶ್ವರಿ, ಕಲ್ಲುರ್ಟಿ-ಕಲ್ಲಕುಡ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ಅಂದು ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಬಿ.ರಘು ಸಪಲ್ಯ, ಸಂಚಾಲಕ ಪದ್ಮನಾಭ ಮಯ್ಯ ಏಲಬೆ, ಪ್ರಮುಖರಾದ ಕಮಲಾಕ್ಷಿ ಪೂಜಾರಿ, ಪುರುಷೋತ್ತಮ ಸಾಲ್ಯಾನ್, ಉದಯ ಕುಮಾರ್ ಶೆಟ್ಟಿ, ರಮೇಶ ಬೋರುಗುಡ್ಡೆ, ಕೃಷ್ಣಪ್ಪ ಗಾಣಿಗ, ಕೊರಗಪ್ಪ ಬಂಗೇರ ಮತ್ತಿತರರು ಇದ್ದರು.
