ಮುಂಬಯಿ: ಕಾಸರಗೋಡು ಜಿಲ್ಲೆಯಲ್ಲಿ ಅಕ್ಷಯ ಯೋಜನೆಯಡಿ ಅಕ್ಷಯ ಕೇಂದ್ರಗಳಲ್ಲಿ ಹೊಸದಾಗಿ ರೇಷನ್ ಕಾರ್ಡುಗಳನ್ನು ಮುದ್ರಿಸುತ್ತಿದ್ದು, ಈ ರೇಷನ್ ಕಾರ್ಡುಗಳಲ್ಲಿ ಮಲಯಾಳಿ ಭಾಷೆ ಮತ್ತು ಆಂಗ್ಲ (ಇಂಗ್ಲೀಷ್) ಭಾಷೆಗಳಲ್ಲಿ ಮಾತ್ರ ಕಾರ್ಡುಗಳ ಮುದ್ರಿತವಾಗುತ್ತಿರುವುದನ್ನು ಅಲ್ಲಿನ ಕನ್ನಡ ಭಾಷಾ ಅಲ್ಪ ಸಂಖ್ಯಾತರಿರುವ ಜನ ವಿರೋಧಿಸುತ್ತಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾತೃ ಭಾಷೆಯಾಗಿ ಕನ್ನಡವನ್ನು ಶೇ.೯೫ರಷ್ಟು ಜನ ಉಪಯೋಗಿ ಸುತ್ತಿದ್ದು, ಮಲಯಾಳಿ ಭಾಷೆ ಗೊತ್ತಿಲ್ಲದೇ ಇರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚೆಗೆ ಕೇಂದ್ರ ಅಲ್ಪಸಂಖ್ಯಾತ ಮಂತ್ರಾಲಯವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ, ಅಕ್ಕಲಕೋಟಗಳಲ್ಲಿನ ಕನ್ನಡ ಭಾಷಾ ಅಲ್ಪ ಸಂಖ್ಯಾತರ ವಿಚಾರದಲ್ಲಿ ವಿಶೇಷ ಸೌಲಭ್ಯ ನೀಡಿ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಲು ಹಾಗೂ ಸಂವಿಧಾನದ ಆಶಯಗಳ ಪ್ರಕಾರ ಎಲ್ಲಾ ಸರ್ಕಾರಿ ಅಧಿಸೂಚನೆ, ಗುರುತಿನ ಚೀಟಿ ಮುಂತಾದ ಅಧಿಕೃತ ಸರ್ಕಾರಿ ದಾಖಲೆಗಳನ್ನು ಕಡ್ಡಾಯವಾಗಿ ಭಾಷಾ ಅಲ್ಪಸಂಖ್ಯಾತರಿರುವ ಕನ್ನಡದಲ್ಲಿಯೇ ನೀಡಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿರುತ್ತದೆ. ಇಂತಹ ಉಲ್ಲೇಖಗಳಿರುವಾಗಲೂ ಕೇರಳದ ಸರ್ಕಾರ ಕಾಸರಗೋಡು ಜಿಲ್ಲೆಯ ರೇಷನ್ ಕಾರ್ಡುಗಳಲ್ಲಿ ಕನ್ನಡ ಭಾಷೆಯನ್ನು ಮುದ್ರಿಸದೇ ಇರುವುದು ದುರದೃಷ್ಟ.
ಮಂಜೇಶ್ವರ ಹೆಸರನ್ನು ರೇಶನ್ ಕಾರ್ಡ್ಗಳಲ್ಲಿ ಮಂಜೇಶ್ವರA ಎಂದು ಅಂಗ್ಲಭಾಷೆಯಲ್ಲಿ ಮಲಯಾಳಿಕರಣ ಗೊಳಿಸಲಾಗಿದೆ. ಇದನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಪ್ರಬಲವಾಗಿ ಖಂಡಿಸುತ್ತದೆ. ಹಾಗೂ ಈ ಲೋಪದೋಷವನ್ನು ತಕ್ಷಣ ಸರಿಪಡಿಸಿ ಅಕ್ಷಯ ಯೋಜನೆಯಡಿ ಬರುವ ಎಲ್ಲಾ ರೇಷನ್ ಕಾರ್ಡುಗಳಲ್ಲಿ ಕಡ್ಡಾಯವಾಗಿ ಮಲೆಯಾಳಂ ಭಾಷೆ ಜೊತೆಗೆ ಕನ್ನಡ ಭಾಷೆಯಲ್ಲೂ ಮುದ್ರಿಸುವಂತೆ ಕಾಸರಗೋಡು ಇಲ್ಲಿನ ಕನ್ನಡಿಗರ ಪರವಾಗಿ ಕೇರಳ ಸರ್ಕಾರದ ಆಹಾರ ಸಚಿವರು ಮತ್ತು ಕಾಸರಗೋಡುನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಸಿ.ಸೋಮಶೇಖರ, ಭಾ.ಆ.ಸೇ(ನಿ), ಇವರು ಕೇರಳ ರಾಜ್ಯದ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಕೊರಿರುತ್ತಾರೆ. ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
