ಮುಂಬಯಿ: ಕಥಾಬಿಂದು ಪ್ರಕಾಶನ ಮಂಗಳೂರು ಇದರ ಹದಿನಾಲ್ಕನೇ ವಾರ್ಷಿಕೋತ್ಸವವು ಇತ್ತೀಚೆಗೆ ಮಂಗಳೂರು ಉರ್ವಾ ಸ್ಟೊರ್ಸ್ ಇಲ್ಲಿನ ತುಳು ಭವನದಲ್ಲಿ ನೆರವೇರಿತು. ವಾರ್ಷಿಕೋತ್ಸವ ನಿಮಿತ್ತ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವುಗಳ ಸಹಯೋಗದಲ್ಲಿ ಜರುಗಿಸಲ್ಪಟ್ಟ ತುಳು-ಕನ್ನಡ ಸಾಹಿತ್ಯೋತ್ಸವದಲ್ಲಿ ಮುಂಬಯಿಯ ಕ್ರಿಯಾಶೀಲ ಸಮಾಜಸೇವಕಿ ಡಾ| ರಜನಿ ವಿ.ಪೈ ಇವರಿಗೆ `ಚೈತನ್ಯ ಶ್ರೀ ಸೇವಾರತ್ನ’ ವಿಶೇಷ ಗೌರವ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು.
ರಜನಿ ಪೈ ಅವರು ಜನಪರ ಕಾಳಜಿ ಮತ್ತು ಕೊರೋನಾ ಸಂದರ್ಭದಲ್ಲಿ ತೋರಿದ ಅನುಪಮ ಸೇವಾ ಮನೋಭಾವವನ್ನು ಗುರುತಿಸಿ ಈ ಪುರಸ್ಕಾರ ಪ್ರದಾನಿಸಿ ಅತಿಥಿಗಳು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ಸಾರ್, ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ಅಖಿಲ ಭಾರತ ತುಳು ಒಕ್ಕೂಟದ ಗೌರವ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ್ ಶೆಟ್ಟಿ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಡಾ| ಸುರೇಶ್ ನೆಗಳಗುಳಿ, ಭುವನಾಭಿರಾಮ ಉಡುಪ, ಸಿಎ| ಎಸ್.ಎಸ್ ನಾಯಕ್, ಪಿ.ವಿ ಪ್ರದೀಪ್ ಕುಮಾರ್, ಜಯ ಶಂಕರ ಬಾಸ್ರೀತ್ತಾಯ, ನರೇಂದ್ರ ಕೆರೆಕಾಡು ಹಾಗೂ ಇನ್ನಿತರ ಮಹನೀಯರು ಉಪಸ್ಥಿತರಿದ್ದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಮೂಲತಃ ಡಾ| ಪೈ ಅವರು ವಿವಾಹದ ನಂತರ ಮುಂಬಯಿಗೆ ಬಂದು ನೆಲೆಸಿದವರು. ಕೊರೋನ ಮಹಾಮಾರಿಯ ಸಮಯದಲ್ಲಿ ಮುಂಬಯಿ ಮಹಾನಗರದ ದಲಿತ ಮತ್ತು ಬಡ ಜನರಿಗಾಗಿ ಜಾತಿ-ಧರ್ಮ, ಮತ-ಪಂಥ ಮರೆತು ಸತತ ಜನಸೇವೆಯಲ್ಲಿ ನಿರತರಾಗಿ, ಮುಂಬಯಿ ಸುತ್ತುಮುತ್ತು ಚದುರಿಕೊಂಡಿರುವ ಆದಿವಾಸಿ ಮತ್ತು ಬಡವರಿಗೆ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳ ಸಂಚಿಯನ್ನು ನೀಡಿದ್ದಾರೆ. ಅನೇಕ ದೀನ ಮತ್ತು ಬಡಜನರಿಗೆ ಮಧ್ಯಾಹ್ನದ ಊಟ, ಮನೆಯ ಬಾಗಿಲಿಗೆ ಹಣ್ಣು ತರಕಾರಿಗಳ ವ್ಯವಸ್ಥೆ, ತಾಯೂರಿಗೆ ತೆರಳುತ್ತಿದ್ದವರಿಗೆ ಅಗತ್ಯವಿರುವವರಿಗೆ ಟಿಕೇಟಿನ ವ್ಯವಸ್ಥೆ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ವಯಸ್ಕರಿಗೆ ಅಗತ್ಯವಾಗಿರುವ ಸಲಕರಣೆಗಳನ್ನು ಒದಗಿಸಿ ಅನೇಕ ರೀತಿಯಲ್ಲಿ ಸಹಾಯ ಮಾಡಿರುತ್ತಾರೆ.
