ಮುಂಬಯಿ :ಮಹಾನಗರಿ ಮುಂಬಯಿಯಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸುಮಾರು ಐದುವರೆ ದಶಕಗಳಿಂದ ಅವಿರತವಾಗಿ ತೊಡಗಿರುವ ನಾರಾಯಣ ಪಿ.ಸುವರ್ಣ ಮತ್ತು ಪ್ರಭಾ ಎನ್.ಸುವರ್ಣ ದಂಪತಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದೆ.
ಭಾರತ ಸರಕಾರದ ಎನ್ಐಟಿಐ ಆಯೋಗ್ ಆಧಿಪತ್ಯದಲ್ಲಿ ನೋಂದಯಿತ ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಕಳೆದ ಶುಕ್ರವಾರ ಚೆನ್ನೈ ಹೊಸೂರು ಅಲ್ಲಿನ ಕ್ಲರೆಸ್ಟಾ ಹೊಟೇಲ್ ಸಭಾಗೃಹದಲ್ಲಿ ಜರುಗಿಸಲ್ಪಟ್ಟ ಘಟಿಕೋತ್ಸವದಲ್ಲಿ ಅಭ್ಯಾಗತರಾಗಿದ್ದ ಯುಡಿಸಿ ಅಧ್ಯಕ್ಷ ಡಾ| ಸಿ.ಪಾವ್ಲ್ ಇಬನೆಝರ್, ಉಪಾಧ್ಯಕ್ಷ ಡಾ| ಕೆ.ಪ್ರಭಾಕರ್, ಡಾ| ಕೆ.ಎ ಮನೋಹರನ್, ಡಾ| ಅರುಲ್ಡೊಸ್ಸ್, ಡಾ| ಇಲನ್ಗೊವನ್ ಈ ಗೌರವ ಡಾಕ್ಟರೇಟ್ ಪ್ರದಾನಿಸಿ ಗೌರವಿಸಿದರು.
ಮಹಾನಗರಿ ಮುಂಬಯಿಯಲ್ಲಿ ವಿದ್ಯಾ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿರುವ ಎನ್.ಪಿ ಸುವರ್ಣ ಅವರು ಯಂಗ್ ಮೆನ್ಸ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷರಾಗಿ ಸಂಸ್ಥೆಯ ಸುವರ್ಣ ಹಾಗೂ ವಜ್ರ ಮಹೋತ್ಸವ ಸಂಭ್ರಮಿಸಿದ ರೂವಾರಿಯಾಗಿದ್ದು ಯಂಗ್ಮೆನ್ಸ್ನಲ್ಲಿ ಸುದೀರ್ಘಾವಧಿ ದುಡಿಯುತ್ತಿದ್ದಾರೆ. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೌ| ಪ್ರ| ಕಾರ್ಯದರ್ಶಿಯಾಗಿ, ಅಕ್ಷಯ ಮಾಸಿಕದ ಪ್ರಗತಿಗಾಗಿ ಮಹತ್ತರದ ಪಾತ್ರ ವಹಿಸಿ ಅದರ ಕಾರ್ಯನಿರತ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಬಿಲ್ಲವ ಜಾಗ್ರತಿ ಬಳಗದ ಸ್ಥಾಪನೆಯಿಂದಲೂ ಕಾರ್ಯಕಾರಿ ಸಮಿತಿಯಲ್ಲಿ ಸಕ್ರಿಯ ಸದಸ್ಯರಾಗಿದ್ದರು. ಕನ್ನಡ ಭವನ ಸೊಸೈಟಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ್ದು, ಅಖಿಲ ಭಾರತ ಬಿಲ್ಲವರ ಯೂನಿಯನ್ನ ಮುಂಬಯಿ ಸಂಘಟನಾ ಕಾರ್ಯದರ್ಶಿ ಆಗಿದ್ದು, ಯೂನಿಯನ್ ಬ್ಯಾಂಕ್ನ ಉನ್ನತಾಧಿಕಾರಿ ಆಗಿ ನಿವೃತ್ತರಾಗಿರುವರು. ಅವರ ಸೇವೆಗೆ ನಾಡಿನ ಹಲವಾರು ಸಂಸ್ಥೆಗಳು ಪ್ರಶಸ್ತಿಗಳೊಂದಿಗೆ ಗೌರವಿಸಿದ್ದಾರೆ.
ಪ್ರಭಾ ಸುವರ್ಣ ಕಳೆದ ಸುಮಾರು ನಾಲ್ಕುವರೆ ದಶಕಗಳಿಂದ, ಶೈಕ್ಷಣಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಮುಖ್ಯಾತ ಮಹಿಳಾ ಪ್ರಧಾನ ಸಂಸ್ಥೆಗಳ ಮುಖೇನ ಸೇವಾ ನಿರತರಾಗಿದ್ದು ಬಹುಮುಖ ಪ್ರತಿಭಾ ಸಂಪನ್ನರೆಣಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉನ್ನತಾಧಿಕಾರಿ ಆಗಿದ್ದು ನಿವೃತ್ತರಾಗಿದ್ದಾರೆ.
ಮುಂಬಯಿಯಲ್ಲಿನ ಯಂಗ್ಮೆನ್ಸ್ ಎಜ್ಯುಕೇಶನ್ ಸೊಸೈಟಿ ಹಾಗೂ ಬಿಲ್ಲವ ಜಾಗೃತಿ ಬಳಗ ಇತ್ಯಾದಿ ಸಂಸ್ಥೆಗಳಲ್ಲಿ ದುಡಿದಿದ್ದಾರೆ. ಬಳಗದ ಮಹಿಳಾ ಕಾರ್ಯಾಧ್ಯಕ್ಷೆ ಆಗಿಯೂ ಸೇವೆ ಸಲ್ಲಿಸಿದವರು. ಅಸೋಸಿಯೇಶನ್ ಫಾರ್ ಮಸೋಮಿ ಲೇಡಿಸ್ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದು, ಕಾರ್ಯಾಧ್ಯಕ್ಷೆ ಆಗಿಯೂ ದುಡಿದಿದ್ದಾರೆ. ಶಾಲೆ ಕಾಲೇಜು ದಿನಗಳಿಂದಲೇ ಸಂಗೀತ ಹಾಗೂ ಕವಿತೆ ಬರೆಯುವ ಅಭಿರುಚಿವುಳ್ಳ ಪ್ರಭಾ ತುಳು ಕನ್ನಡ ಹಿಂದಿ ನೂರಾರು ಪದ್ಯಗಳನ್ನು ರಚಿಸಿ ನಿಸರ್ಗಳವಾಗಿ ಹಾಡಬಲ್ಲರು. ಅವರ ಕೆಲವು ಕವನಗಳು ಪತ್ರಿಕೆಗಳಲ್ಲೂ ಪ್ರಕಟವಾಗಿವೆ.
