ಮುಂಬಯಿ : ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಕಳೆದ (ಆ.೩೦ ಮತ್ತು ಆ.೩೧) ಎರಡು ದಿನಗಳಲ್ಲಿ ಸಾಂತಾಕ್ರೂಜ್ ಪೂರ್ವದಲ್ಲಿನ ಮಧ್ವ ಭವನದ (ಪೇಜಾವರ ಮಠ) ಶ್ರೀಕೃಷ್ಣಾಷ್ಟಮಿ ಮಹೋತ್ಸವವನ್ನು ಸಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳ ಆಶೀರ್ವಾದ, ದಿವ್ಯ ಪ್ರೇರಣೆ ಹಾಗೂ ಮಾರ್ಗದರ್ಶನದಲ್ಲಿ ಪೇಜಾವರ ಮಠದ ಮುಂಬಯಿ ಶಾಖೆಯ ಶಿಲಾಮಯ ಶ್ರೀಕೃಷ್ಣ ಮಂದಿರದಲ್ಲಿ ಕೋವಿಡ್ ನಿಯಮಾವಳಿಗಳಂತೆ ಸರಳವಾಗಿದ್ದರೂ ಸಂಭ್ರಮೋಲ್ಲಾಸದಿಂದ ಶ್ರೀಕೃಷ್ಣಾಷ್ಟಮಿ ಆಚರಿಸಲಾಯಿತು. ಶ್ರೀಕೃಷ್ಣ ದೇವರ ಪವಿತ್ರ ಸಾನಿಧ್ಯದಲ್ಲಿ ಪೇಜಾವರ ಶಾಖೆಯ ಆಡಳಿತಾಧಿಕಾರಿ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಆರತಿಗೈದು ಶ್ರೀಕೃಷ್ಣಷ್ಟಮಿಯ ಉತ್ಸವಕ್ಕೆ ಚಾಲನೆಯಿತ್ತು ಕೊನೆಯಲ್ಲಿ ಮಹಾ ಮಂಗಳಾರತಿ ನೆರವೇರಿಸಿ ನೆರೆದ ಶ್ರೀಕೃಷ್ಣ ಭಕ್ತರಿಗೆ ಅನುಗ್ರಹಿಸಿದರು.
ಸೋಮವಾರ ಬೆಳಗ್ಗೆ ಕೃಷ್ಣಾರ್ಚವನ್ನು, ರಾತ್ರಿ ೧೨.೦೦ ಗಂಟೆ ವೇಳೆಗೆ ಮಹಾಪೂಜೆ, ಶ್ರೀಕೃಷ್ಣನಿಗೆ ಅರ್ಘ್ಯ ಹಾಗೂ ಚಂದ್ರೋದಯ ಕಾಲದಲ್ಲಿ ಚಂದ್ರಾರ್ಘ್ಯವನ್ನು ಸಂಪ್ರದಾಯ ಬದ್ಧವಾಗಿ ನಡೆಸಲಾಯಿತು. ಮಂಗಳವಾರ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ತುಳುನಾಡ ಸಂಪ್ರದಾಯದತೆ ಫಲ-ಪುಷ್ಫ, ಅಡಿಕೆ-ಪಿಂಗಾರ ಸರಳ ಅಲಂಕಾರದಿAದ ಶೃಂಗಾರಿಸಲ್ಪಟ್ಟ ಮಂಟಪದಲ್ಲಿ ಶ್ರೀಕೃಷ್ಣನನ್ನು ಅಲಂಕರಿಸಿ ದಿನವಿಡೀ ಹರೇ ಕೃಷ್ಣ ಪಠಣ, ಭಜನೆ, ವಿವಿಧ ಪೂಜಾಧಿಗಳನ್ನು ಸಂಪ್ರೋಕ್ತವಾಗಿ ನೆರವೇರಿಸಲಾಗಿದ್ದು, ಅಲಂಕಾರ ಬ್ರಾಹ್ಮಣ ಭೋಜನ, ಹಸ್ತೋದಕ ನಡೆಸಲ್ಪಟ್ಟಿತು. ಸಾಯಂಕಾಲ ವಿಷ್ಣುಸಹಸ್ರ ನಾಮಾರ್ಚನೆ, ವಿಟ್ಲ ಪಿಂಡಿ ಉತ್ಸವದೊಂದಿಗೆ ವಿಜೃಂಭನೆಯಿಂದ ಶ್ರೀಕೃಷ್ಣಾಷ್ಟಮಿ ಆಚರಿಸಲಾಯಿತು. ಪುಟಾಣಿಗಳು ಮತ್ತು ಪುಟ್ಟ ಬಾಲಕ-ಬಾಲಕಿಯರು ರಾಧಾ-ಕೃಷ್ಣರಂತೆ ವೇಷ ಧರಿಸಿ ಸಡಗರದಲ್ಲಿ ಪಾಲ್ಗೊಂಡಿದ್ದರು.
ಈ ಶುಭಾವಸರದಲ್ಲಿ ಶ್ರೀ ಪೇಜಾವರ ಮಠ ಮುಂಬಯಿ ಆಡಳಿತಾಧಿಕಾರಿಗಳಾದ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಪುತ್ತಿಗೆ ಮತ್ತು ನಿರಂಜನ್ ಗೋಗಟೆ, ಹಿರಿಯ ಧಾರ್ಮಿಕ ಮುಂದಾಳು ಶ್ರೀನಿವಾಸ ಭಟ್ ಪರೇಲ್ ಸೇರಿದಂತೆ ಸಹ ಪುರೋಹಿತರು ಮತ್ತು ಭಕ್ತರು ಉಪಸ್ಥಿತರಿದ್ದು ಮಠದ ಪುರೋಹಿತ ವರ್ಗವು ಮಹಾರಾಷ್ಟ್ರದ ವಿಶ್ವಪ್ರಿಯ ದಹಿ ಹಂಡಿ ಆಚರಣೆಯನ್ನು ಗೋವಿಂದ ಹಾಲಾರೆ ಹಾಲಾ… ಗೀತೆಯೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸರಳವಾಗಿ ಸಂಭ್ರಮಿಸಿದರು.
