ಮುಂಬಯಿ: ಕರುನಾಡ ಮಣ್ಣಲ್ಲಿ ಹುಟ್ಟಿ ಬೆಳೆದು, ಪರ ರಾಜ್ಯದಲ್ಲಿ ಕಷ್ಟಪಟ್ಟು ದುಡಿಯುತ್ತಾ ಕಲಾವಿದರಾಗಿ ಬೆಳೆದು ತಮ್ಮ ಹೆಸರಿನೊಂದಿಗೆ ಊರಿನ ಹೆಸರನ್ನೂ ಸೇರಿಸಿ, ಗ್ರಾಮದ ಬಗ್ಗೆ ಪ್ರೀತಿ, ಗೌರವವನ್ನು ತೋರಿಸುತ್ತಿರುವ ಕಲಾ ಸೌರಭ ನಿಜಾರ್ಥದ ಆರಾಧಕರಾಗಿದ್ದು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿ ಮಹಾ ಮಾರಿ ಕರೋನದ ಲಾಕ್ಡೌನ್ನಿಂದ ಕಷ್ಟನಷ್ಟದಿಂದ ತೊಂದರೆ ಅನುಭವಿಸುವ ಊರಿನ ಸಾಧಕ ಕಲಾಪೋಷಕರಿಗೆ ಸ್ನೇಹಹಸ್ತ ನೀಡುವುದು ಸ್ತುತ್ಯಾರ್ಹ. ಇದೇ ಮಾನವೀಯತೆಯ ಸದ್ಗುಣವಾಗಿದೆ ಎಂದು ಶ್ರೀ ಭಗವತಿ ದೇವಾಸ್ಥಾನ ಸಸಿಹಿತ್ಲು ಇದರ ಅನುವಂಶಿಕ ಮೊಕ್ತೇಸರ ಶ್ರೀನಿವಾಸ ಯಾನೆ ಅಪುö್ಪ ಪೂಜಾರಿ ತಿಳಿಸಿದರು.
ಕಲಾ ಸೌರಭ ಮುಂಬಯಿ ಸಂಸ್ಥೆಯು ತವರೂರ ನಾಮಾಂಕಿತ ಕಲಾ ಸಂಸ್ಥೆ ರಂಗ ಸುದರ್ಶನ ಹಾಗೂ ಬಿಲ್ಲವರ ಹಿತವರ್ಧಕ ಸಂಘ ಮುಂಬಯಿ ಸಮಿತಿಯ ಸಹಯೋಗದೊಂದಿಗೆ ಇತ್ತೀಚೆಗೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಿರುವ ಅಶಕ್ತ ಸಾಂಸ್ಕೃತಿಕ ಕಲಾವಿದರಿಗೆ ಸಹಾಯಸ್ತ ನೆರವು ನೀಡುವ ಸರಣಿಯ ಮೂರನೇ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಆಶೀರ್ವಾದದ ನುಡಿಗಳನ್ನಾಡಿ ಅಪ್ಪು ಪೂಜಾರಿ ಮಾತನಾಡಿದರು.
ಸಾರಂತಾಯ ಗರಡಿ ಶ್ರೀ ಉಳ್ಳಾಯ ದೇವಸ್ಥಾನ ಸಸಿಹಿತ್ಲು ಇದರ ಗುರಿಕಾರ ಕಾಂತು ಲಕಣ ಯಾನೆ ಯಾದವ ಬಂಗೇರ ಶುಭಾಶಂಸನೆಗೈದು ಸಾಧಕ ಕಲಾವಿದರಿಗೆ ಸ್ನೇಹ ಹಸ್ತ ಒಂದು ಉತ್ತಮ ಕಾರ್ಯವಾಗಿದ್ದು ಶ್ರೀ ಕ್ಷೇತ್ರದ ಭಗವತೀ ಅಮ್ಮನ ಸಾನಿಧ್ಯದಲ್ಲಿ ನಡೆಯುತ್ತಿರುವುದು ಅತೀವ ಸಂತಸ ತಂದಿದೆ. ಅಮ್ಮನಿಗೆ ಪ್ರಿಯಾವಾದ ಯಕ್ಷಗಾನ ಸೇವೆ ನಡೆಯುತಿರುವಂತೆ ಭಾಸವಾಗುತ್ತಿದೆ. ಅಮ್ಮನ ಕೃಪೆ ಎಲ್ಲರಿಗೂ ಇರಲಿ ಎಂದರು.
ಗುಜರಾತ್ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಅಹ್ಮದಾಬಾದ್ನ ಉದ್ಯಮಿ ಮೋಹನ್ ಸಿ.ಪೂಜಾರಿ ಮುಖ್ಯ ಅತಿಥಿಯಾಗಿದ್ದು ಮಾತನಾಡಿ ಕೊರೊನದಿಂದ ಊರಲ್ಲೂ ಕಷ್ಟವಿದೆ, ಪರ ಊರಲ್ಲೂ ಕಷ್ಟವಿದೆ ಆದರೆ ದೃತಿ ಗೆಡದೆ ಕಾರ್ಯೋನ್ಮಕರಾಗಬೇಕು.ಕೋವಿಡ್ ೧೯ರ ಅತ್ಯಂತ ಕಷ್ಟ ಸಮಯದಲ್ಲಿ ಇತರರನ್ನು ಅವಲಂಬಿಸದೆ ಸ್ವಉದ್ಯೋಗಿಗಳಾಗುವ ಪ್ರಯತ್ನ ಮಾಡಬೇಕು. ಕೃಷಿ, ಬೇಸಾಯದತ್ತ ಗಮನ ಕೊಡಿ ಸ್ವತಂತ್ರ ಜೀವನ ನಿಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಲಾ ಸೌರಭ ತಂಡದವರು ಪರವೂರಲ್ಲೂ ಹಾಗೂ ತವರೂರಲ್ಲೂ ಕಲಾಸೇವೆಯೊಂದಿಗೆ ಸಮಾಜ ಸೇವೆಯಲ್ಲೂ ಸಿದ್ಧಿ ಪಡೆದ ಸಂಸ್ಥೆ ಇಂದು ಊರಿನಲ್ಲಿ ಕಷ್ಟದಲ್ಲಿರವ ಸಾಧಕ ಕಲಾವಿದರಿಗೆ ನೆರವು ನೀಡಿ ತಮ್ಮ ಕಲಾ ಸೇವೆಗೆ ಘನತೆ ತಂದಿದ್ದಾರೆ ಎಂದರು.
ಕಲಾ ಸೌರಭದ ರೂವಾರಿ ಪದ್ಮನಾಭ ಸಸಿಹಿತ್ಲು ಅವರ ಪರಿಕಲ್ಪನೆಯಲ್ಲಿ ಕಲಾವಿದರಿಗೆ ಸಹಾಯ ಹಸ್ತ ನೀಡುವ ಈ ಕಾರ್ಯಕ್ರಮ ಅವರು ಹುಟ್ಟಿ ಬೆಳೆದ ಊರಿನಲ್ಲಿ ನಡೆಯುತ್ತಿರವ ಉತ್ತಮ ಕಾರ್ಯಕ್ರಮ ಇದಾಗಿದೆ. ಮನಸ್ಸೂ ತುಂಬಿ ಬಂದಿದೆ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಲುಂಡು ಸ್ಥಳೀಯ ಸಮಿತಿ ಕಾರ್ಯಧ್ಯಕ್ಷ ಕದ್ರಿ ಸುರೇಶ್ ಕುಮಾರ್ ನುಡಿದರು.
ಗೌರವ ಅತಿಥಿüಯಾಗಿದ್ದ ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ನ ನಿರ್ದೇಶಕ ವಾಸು ಪೂಜಾರಿ ಅನಿಸಿಕೆ ವ್ಯಕ್ತಪಡಿಸಿ ಕಲಾವಿದರಿಂದ ಕಲಾವಿದರಿಗೆ ನೆರವು ನೀಡುವುದು ಸಮಾಜದಲ್ಲಿ ಒಂದು ಉತ್ತಮ ಬದಲಾವಣೆ, ಮುಂಬಯಿ ಯ ಕಲಾ ಸೌರಭ ಹಾಗೂ ರಂಗ ಸುದರ್ಶನ ತಂಡದವರ ಈ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಶ್ರೀ ಭಗವತಿ ದೇವಸ್ಥಾನದ ಅಧ್ಯಕ್ಷ, ವಾಗ್ಮಿ, ಸಾಹಿತಿ ವಾಮನ ಇಡ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಸಿಹಿತ್ಲುವಿನ ಹುಡುಗರು ಮುಂಬಯಿಗೆ ತೆರಳಿ ಕಷ್ಟದ ಜೀವನದಿಂದ ಪ್ರಗತಿ ಸಾಧಿಸಿದ್ದಾರೆ. ಕೆಲವರು ಉದ್ದಿಮೆಯಲ್ಲಿ ಯಶಸ್ಸು ಕಂಡಿರುವರಾದರೆ, ಕೆಲವರು ಕಲಾವಂತಿಕಯಲಿ ಪ್ರಸಿದ್ಧಿ ಪಡೆದಿರುವರು. ಪದ್ಮನಾಭ ಸಸಿಹಿತ್ಲು ಕಲಾವಿದರಾಗಿ ತಮ್ಮ ಸಂಸ್ಥೆಯನ್ನು ಸ್ಥಾಪಿಸಿ, ಇಂದು ತವರೂರಲ್ಲಿ ತೊಂದರೆಯಲ್ಲಿ ಇರುವ ಸಾಧಕ ಕಲಾವಿದರಿಗೆ ನೆರವಿನ ಹಸ್ತ ನೀಡಿರುವರು. ಅವರ ಎಲ್ಲಾ ಯೋಜನೆಗಳಿಗೆ ಶ್ರೀ ಕ್ಷೇತ್ರದ ಅಮ್ಮನ ಕೃಪೆಯಿರಲಿ ಎಂದು ಆಶಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಮಾಜ ಸೇವಕ ಸುರೇಶ್ ಕುಲಶೇಖರ, ಮಂಗಳೂರು ಉದ್ಯಮಿ ಉಮೇಶ್ ಸಾಲ್ಯಾನ್, ಹಳೆಯಂಗಡಿ ಪಂಚಾಯತ್ ಉಪಾಧ್ಯಕ್ಷ ಅಶೋಕ್ ಸಾಲ್ಯಾನ್ ಸಸಿಹಿತ್ಲು, ಬಿಲ್ಲವರ ಹಿತವರ್ಧಕ ಸಂಘ ಸಸಿಹಿತ್ಲು ಇದರ ಅದ್ಯಕ್ಷ ಜಗನಾಥ್ ಕೋಟ್ಯಾನ್, ಹಿತವರ್ಧಕ ಸಂಘ ಮುಂಬಯಿ ಸಮಿತಿ ಉಪಾಧ್ಯಕ್ಷ ಶೇಖರ್ ಸಸಿಹಿತ್ಲು ಗೌರವಾನ್ವಿತ ಕಲಾವಿದರುಗಳಾದ ಪುಷ್ಕಲ್ಕುಮಾರ್ ತೋನ್ಸೆ, ಸತೀಶ್ ಸುರತ್ಕಲ್, ಅನಿಲ್ ಕುಮಾರ್ ಸಸಿಹಿತ್ಲು, ಭಾಸ್ಕರ್ ಸಾಲ್ಯಾನ್, ದಿನೇಶ್ ಸುವರ್ಣ, ಪ್ರದೀಪ ಕುಮಾರ್ ಉಪಸ್ಥಿತರಿದ್ದು ಗಣ್ಯರನ್ನೊಳಗೊಂಡು ಶ್ರೀ ಭಗವತಿ ಮೇಳದ ಕಲಾವಿದರಿಗೆ ಇತರ ವೃತ್ತಿ ಕಲಾವಿದರಿಗೆ ಹಾಗೂ ಅಶಕ್ತರಿಗೆ ಪಡಿತರ ವಸ್ತು, ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.
ಮಾಲತಿ ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಪದ್ಮನಾಭ ಸಸಿಹಿತ್ಲು ಸ್ವಾಗತಿಸಿ ಅತಿಥಿ ಪರಿಚಯಗೈದರು. ರಂಗ ಸುದರ್ಶನ ಇದರ ನಿರ್ದೇಶಕ ಪತ್ರಕರ್ತ ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆರಂಭದಲ್ಲಿ ಪುಷ್ಕಲ್ ಕುಮಾರ್ ತೋನ್ಸೆ, ಶೇಖರ್ ಸಸಿಹಿತ್ಲು ಮತ್ತು ಸಂಗಡಿಗರು ಭಜನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ರಾಷ್ಟç ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
