ಬಜ್ಪೆ: ವರ್ಷದ ಕಾಲ ನಿಂತಿದ್ದ ಮಂಗಳೂರು-ಕುವೈಟ್ ನಡುವಿನ ವಿಮಾನಯಾನ ಸೋಮವಾರ ಮುಂಜಾನೆ ಮತ್ತೆ ಪ್ರಾರಂಭವಾಯಿತು. ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಜಾನೆ 7:30ಕ್ಕೆ ಯಾನಿಗಳನ್ನು ಹೊತ್ತ ಮೊದಲ ವಿಮಾನ ಕುವೈಟ್ಗೆ ಹಾರಿತು. ಮಂಗಳೂರು ಶಾಸಕ ಜೆ.ಆರ್.ಲೋಬೊ, ಸಚಿವ ರೋಶನ್ ಬೇಗ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಸಂಸದ ನಳಿನ್ ಕುಮಾರ್ ಕಟೀಲ್ ಎಲ್ಲರೂ ವಿಮಾನಯಾನ ಮತ್ತೆ ಪ್ರಾರಂಭಕ್ಕೆ ಪ್ರಯತ್ನಿಸಿದ್ದರು. ಕಳೆದೊಂದು ವರ್ಷಗಳಿಂದ ಈ ಬಗ್ಗೆ ಹೋರಾಟ ನಡೆಯುತ್ತಿದ್ದು, ಇದೀಗ ಫಲ ದೊರೆತಂತಾಗಿದೆ.
ವಿಮಾನಯಾನ ಮತ್ತೆ ಆರಂಭವಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿ ಸಿಹಿತಿಂಡಿ ಹಂಚಿ ಸಂಭ್ರಮಿಸಲಾಯಿತು. ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಮಂಗಳೂರು ಏರ್ ಇಂಡಿಯಾ ಮೆನೇಜರ್ ನಾಗೇಶ್ ಶೆಟ್ಟಿ, ಕವಿತಾ ವಾಸು, ಡೆನಿಸ್ ಡಿಸಿಲ್ವ, ಟಿ.ಕೆ.ಸುಧೀರ್ ಹಾಗೂ ಇತರರು ಉಪಸ್ಥಿತರಿದ್ದರು. ಸೋಮವಾರ, ಬುಧವಾರ ಹಾಗೂ ಶುಕ್ರವಾರ ಮಂಗಳೂರಿನಿಂದ ಕುವೈಟ್ಗೆ ನೇರ ವಿಮಾನ ಸಂಪರ್ಕ ಲಭಿಸಲಿದೆ. ಮುಂಜಾನೆ 7:30ಕ್ಕೆ ಹೊರಡುವ ವಿಮಾನ ಬೆಹರಿನ್ ಮಾರ್ಗವಾಗಿ 11:15ಕ್ಕೆ ಕುವೈಟ್ ತಲುಪಲಿದೆ. ಮಂಗಳೂರು-ಕುವೈಟ್ ಮಧ್ಯೆ ವಿಮಾನಯಾನ ಮತ್ತೆ ಆರಂಭವಾಗಿರುವುದು ನಾಗರಿಕರಲ್ಲಿ ಸಂತಸಕ್ಕೆ ಕಾರಣವಾಗಿದೆ.
