ಮುಂಬಯಿ : ಕೊರೊನ ಮಹಾಮಾರಿ ಯಿಂದ ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ತಬ್ಧ ಗೊಂಡಿರುವ ಈ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಹಮ್ಮಿಕೊಂಡು ಜು.೦೪ ರಂದು ಭಾನುವಾರ ಒಡಿಯೂರು ಶ್ರೀಯವರ ಜನ್ಮ ಷಷ್ಠ್ಯಬ್ದಿ ಆಚರಣಾ ಸಮಿತಿ ಮುಂಬಯಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನ ಡೆಪ್ಯೂಟಿ ರಿಜಿಸ್ಟಾರ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಜೊತೆ ಕೋಶಾಧಿಕಾರಿ ಡಾ| ಜಿ.ಪಿ ಕುಸುಮಾ ಅಭಿಪ್ರಾಯಪಟ್ಟರು.
ನೆರೂಳ್ ನವಿ ಮುಂಬಯಿ ಇಲ್ಲಿನ ಶ್ರೀಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ಭವಾನಿ ದೇರಣ್ಣ ಶೆಟ್ಟಿ ಜ್ಞಾನ ಮಂದಿರದ ಸಭಾಗೃಹದಲ್ಲಿ ಜಯ ಕ್ಯಾಟರ್ಸ್ನ ಜಯ ಶೆಟ್ಟಿ ದಂಪತಿಯ ಪ್ರಾಯೋಜಕತ್ವದಲ್ಲಿ ಒಡಿಯೂರು ಶ್ರೀ ಅವರ ಜನ್ಮ ಶಷ್ಠಬ್ದಿ ಮುಂಬಯಿ ಸಮಿತಿ ಹಾಗೂ ಗುರುದೇವ ಸೇವಾ ಬಳಗ ಮುಂಬಯಿ ಹಮ್ಮಿಕೊಂಡಿರುವ ಒಡಿಯೂರು ಶ್ರೀಗಳವರ ೬೦ ಕಾರ್ಯಕ್ರಮಗಳ ಪೈಕಿ ೨೬ನೇ ಕಾರ್ಯಕ್ರಮದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ಕುಸುಮಾ ಮಾತನಾಡುತ್ತಾ ಕಾರ್ಯಕ್ರಮಗಳ ನಡುವೆ ಕವಿಗೋಷ್ಠಿ ತುರುಕಿಸಿ ಕೊಳ್ಳದೆ ಪ್ರತ್ಯೇಕ ಕವಿಗೋಷ್ಠಿ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಕೇವಲ ಮರಾಠಿ ಹಿಂದಿಗಳಲ್ಲಿ ಆಗುತ್ತದೆ. ಹೀಗಾದಾಗ ಕವಿಗೋಷ್ಠಿಗೆ ಬೇಕಾದ ಪ್ರೇಕ್ಷಕ ವರ್ಗವನ್ನು ನಿರ್ಮಾಣವಾಗಬಹುದು ಎಂದರು.
ರಂಗನಿರ್ದೇಶಕ ನಾಟಕಕಾರ ನಾರಾಯಣ ಶೆಟ್ಟಿ ನಂದಳಿಕೆ ದೀಪಬೆಳಗಿಸಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ ಕವಿಗಳಾದವರು ಮುಖದಲ್ಲಿರುವ ಕಣ್ಣಿನಿಂದ ನೋಡುತ್ತಿಲ್ಲ. ಅವರು ಹೃದಯದ ಕಣ್ಣುಗಳಿಂದ ಸುತ್ತಮುತ್ತಲನ್ನು ವೀಕ್ಷಿಸುತ್ತಾರೆ. ಕವಿ ಆದವನಿಗೆ ಭಾಷೆಯ ಪ್ರಭುತ್ವ ಬೇಕು ಆಗ ಕವಿತೆಯಲ್ಲಿ ಸೊಗಸು ಬರುವುದು ಎಂದು ತಾವು ಬರೆದ ಎರಡು ತುಳು ಕವಿತೆಗಳನ್ನು ವಾಚಿಸಿದರು.
ಪ್ರಾರಂಭದಲ್ಲಿ ಗುರುದೇವ ಸೇವಾ ಬಳಗ ಮುಂಬಯಿ ಸಮಿತಿಯ ಪೇಟೆಮನೆ ಪ್ರಕಾಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣಗೈದು ಗುರುಗಳ ವಿನಂತಿಯಂತೆ ನಾವು ಯಾವುದೇ ಗೌಜಿ ಗದ್ದಲವಿಲ್ಲದೆ ತಾಳಮದ್ದಳೆ, ಕವಿಗೋಷ್ಠಿ ಮೊದಲಾದ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇದೀಗ ೨೬ನೇ ಕಾರ್ಯಕ್ರಮ ಜರಗಿಸುತ್ತಿದ್ದೇವೆ.ಮುಂದಣ ಪೀಳಿಗೆಗೆ ನಮ್ಮ ಸಾಹಿತ್ಯ, ಸಂಸ್ಕೃತಿಯ ಪರಿಚಯ ಮಾಡುವುದೇ ನಮ್ಮ ಉದ್ದೇಶ. ಆ ಮೂಲಕ ಒಡಿಯೂರು ಸ್ವಾಮೀಜಿಯವರ ಷಷ್ಠ್ಯಬ್ದಿ ಆಚರಣೆ ಅರ್ಥಪೂರ್ಣ ಆಬೇಕು ಎಂದರು.
ಕವಿಗಳಾದ ತಾರಾ ಬಂಗೇರ, ಸೋಮನಾಥ್ ಕರ್ಕೇರ, ಶಾರದಾ ಅಂಚನ್, ಗಣೇಶ್ ಕುಮಾರ್ ಹಾಗೂ ಸಾ.ದಯಾ ಸ್ವರಚಿತ ಎರಡೆರಡು ಕವಿತೆಗಳನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಶನೀಶ್ವರ ಮಂದಿರ ನೆರೂಳ್ ಅಧ್ಯಕ್ಷ ರಮೇಶ್ ಎನ್ ಪೂಜಾರಿ, ಸಮಿತಿಯ ವಿಶ್ವಸ್ಥೆ ಹಾಗೂ ಮಹಿಳಾ ವಿಭಾಗಧ್ಯಕ್ಷೆ ಸ್ವರ್ಣಲತಾ ದಾಮೋದರ ಶೆಟ್ಟಿ, ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ದೇವಸ್ಥಾನ ಮಣಿಕಂಠ ಸೇವಾ ಸಂಘ ನೆರೂಳ್ ಇದರ ಅಧ್ಯಕ್ಷ ಸುರೇಶ್ ಜಿ.ಶೆಟ್ಟಿ, ಕಾರ್ಯದರ್ಶಿ ಮೋಹನ್ದಾಸ್, ಶ್ರೀಮತಿ ಜಯ ಶೆಟ್ಟಿ, ಜಿ.ಟಿ ಆಚಾರ್ಯ, ಕನ್ನಡ ಕಲಾ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ.ಆರ್., ನವಿಮುಂಬಯಿ ಕನ್ನಡ ಸಂಘದ ಗೌರವ ಕಾರ್ಯದರ್ಶಿ ಜಗದೀಶ್ ಡಿ.ರೈ, ಸಂಚಾಲಕ ಅದ್ಯಪಾಡಿ ಗುತ್ತು ಕರುಣಾಕರ ಆಳ್ವಾ, ವಿ.ಕೆ ಸುವರ್ಣ ಪಡುಬಿದ್ರಿ, ಅನಿಲ್ ಕೆ.ಹೆಗ್ಡೆ ಪೆರ್ಡೂರು, ಜಗದೀಶ್ ಶೆಟ್ಟಿ ಪನ್ವೆಲ್, ತಾರನಾಥ ಶೆಟ್ಟಿ ಪುತ್ತೂರು, ಗಿರೀಶ್ ಸಿ. ಶೆಟ್ಟಿ, ಸೇವಾ ಬಳಗದ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಸಚಿನ್ ಶೆಟ್ಟಿ ಪಾಲ್ಗೊಂಡಿದ್ದರು. ಸಾ.ದಯಾ ಕಾರ್ಯಕ್ರಮ ನಿರೂಪಿಸಿ, ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.
