ಮುಂಬಯಿ : ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಮತ್ತು ಬಿಎಸ್ಕೆಬಿ ಅಸೋಸಿಯೇಶನ್ ಮುಂಬಯಿ ಇವುಗಳ ಗೋಕುಲ ಶ್ರೀಕೃಷ್ಣ ಮಂದಿರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಕೃಷ್ಣಾವತಾರವಾಗಿ ರೂಪತಾಳಿದ ಶ್ರೀಕೃಷ್ಣ ಮಂದಿರ ಪುನಃರ್ ಪ್ರತಿಷ್ಠಾಪಿಸಲು, ಧಾರ್ಮಿಕ ಸೇವೆಗೆ ಸಿದ್ಧಗೊಂಡಿದೆ. ಆದರೆ ಇದೇ ೨೦೨೧ರ ಜೂನ್ ೧೨ ರಿಂದ ೨೦ರ ತನಕ ವಿಜೃಂಭನೆಯಿಂದ ನಡೆಸಲುದ್ದೇಶಿಸಿದ ಶ್ರೀ ಕೃಷ್ಣ ಮಂದಿರ, ಗೋಕುಲ ನೂತನ ಕಟ್ಟಡದ ಪುನಃರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಧಾರ್ಮಿಕ ಉತ್ಸವವನ್ನು ಕೊರೋನಾ ಮುನ್ನೆಚ್ಚರಿಕಾ ಕ್ರಮವಾಗಿಸಿ ಮುಂದೂಡುವುದು ಅನಿವಾರ್ಯವಾಗಿದೆ ಎಂದು ಎ.೦೯ ರಂದು ಶುಕ್ರವಾರ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್ಕೆಬಿಎ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.
ಡಾ| ಸುರೇಶ್ ರಾವ್, ಬಿಎಸ್ಕೆಬಿಎ ಉಪಾಧ್ಯಕ್ಷ ವಾಮನ ಹೊಳ್ಳ, ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೋತಿ, ಕೋಶಾಧಿಕಾರಿ ಹರಿದಾಸ್ ಭಟ್ ಉಪಸ್ಥಿತರಿದ್ದು ಮಂದಿರ ನಿರ್ಮಾಣದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತು ಗೋಕುಲ ಯೋಜನೆ ೨೦೨೦-ಯಂತೆ ಭರದ ಕಾಮಗಾರಿ ನಡೆಸಿ ೫೦ ಅಡಿ ಎತ್ತರದ ಭವ್ಯ ಗೋಪುರದೊಂದಿಗೆ ಮಂದಿರದ ಪೂರ್ಣ ಕಾಮಗಾರಿ ಕೊನೆಗೊಂಡಿದ್ದು ನಮ್ಮೆಲ್ಲರ ಆಶಯದಂತೆ ಇದೇ ಜೂನ್ನಲ್ಲಿ ಗೋಕುಲ ಸೇವೆಗೆ ಸಿದ್ಧಗೊಳಿಸುತ್ತಿದ್ದಂತೆಯೇ ಕೊರೋನಾ ಅಡ್ಡಿಯಾಗಿದ್ದು ಮತ್ತೆ ದಕ್ಷಿಣಾಯಾನ ಆರಂಭವಾಗುತ್ತಿರುವ ಕಾರಣ ಪುನಃರ್ ಪ್ರತಿಷ್ಠೆಯನ್ನು ೨೦೨೨ರ ಜನವರಿಯಲ್ಲಿ ನಡೆಸಲುದ್ದೇಶಿಸಿದ್ದೇವೆ ಎಂದು ಇಂದಿಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಂದಿರದ ಪೂರ್ಣಗೊಂಡ ಕಾಮಗಾರಿಯ ಮಾಹಿತಿಯನ್ನಿತ್ತರು.
೪೪ ಕೇಶವಾದಿ ಕೃಷ್ಣಶಿಲಾ ದೇವತಾ ಮೂರ್ತಿಗಳನ್ನೊಳಗೊಂಡ ಗೋಪಾಲಕೃಷ್ಣ ಮಂದಿರದಲ್ಲಿ ಬೂದಿವರ್ಣ ಶಿಲಾಮಯ ಗರ್ಭಗುಡಿಯ ಸುತ್ತು ಪೌಳಿ, ಮುಖ ಮಂಟಪ, ಬೂದಿವರ್ಣ ಕಲ್ಲಿನಿಂದ ರಚಿತ ಅಲಂಕೃತ ತೀರ್ಥ ಮಂಟಪ, ಒಳ ಮೇಲ್ಛಾವಣಿಯಲ್ಲಿ ಶ್ರೀಕೃಷ್ಣನ ಲೀಲೆಗಳಾಧಾರಿತ ಮರದ ಕುಸುರಿ ಕೆತ್ತನೆಗಳ ವಿಶಿಷ್ಟತೆಗಳೊಂದಿಗೆ ಮಂದಿರ ಸಿದ್ಧಗೊಂಡಿದೆ.
ವಸುದೇವನ ಸುಪುತ್ರ ಕೃಷ್ಣನ ಜನ್ಮ, ಕೃಷ್ಣನನ್ನು ವಸುದೇವ ಯಮುನಾ ನದಿ ದಾಟಿ ಗೋಕುಲಕ್ಕೆ ಒಯ್ಯುವುದು, ಕೃಷ್ಣನ ಬಾಲಲೀಲೆ, ಕಾಳೀಯ ಮರ್ದನ, ಗೋವರ್ಧನ ಗಿರಿಧಾರಿ, ಜಾಂಬವತಿ ಕಲ್ಯಾಣ, ಶ್ರೀಕೃಷ್ಣ ತುಲಾಭಾರ, ದ್ರೌಪದಿ ವಸ್ತ್ರಾಪಹರಣ, ಗೀತೋಪದೇಶ, ಭಕ್ತ ಸುಧಾಮ, ಶ್ರೀನಿವಾಸ ಕಲ್ಯಾಣೋತ್ಸವ, ಗಜೇಂದ್ರ ಮೋಕ್ಷ ಹೀಗೆ ೧೨ ಘಟನೆಗಳು ಮತ್ತು ಮಧ್ಯದಲ್ಲಿ ವಿಶ್ವರೂಪ ದರ್ಶನವನ್ನು, ಮಹತ್ವದ ರೂಪಗಳನ್ನು ಮತ್ತು ಮಂದಿರದ ಮೇಲ್ಮೈಯಲ್ಲಿ ತೇಗದಮರದ ಕೆತ್ತನೆಯಲ್ಲಿ ರಚಿಸಲಾಗಿದೆ. ಅಂತೆಯೇ ತಾಮ್ರದ ತಗಡುಗಳ ಸ್ವರ್ಣಲೇಪಿತ ಮನಾಕರ್ಷಕ ವಿಷ್ಣುವಿನ ದಶಾವತಾರ ಮೂರ್ತಿಗಳ ಚಿತ್ರಣಗಳುಳ್ಳ ಕಲಾಕೃತಿ ರಚಿಸಲಾಗಿದೆ. ತೇಗದಮರದ ಕೆತ್ತನೆಯಲ್ಲಿ ಕೆತ್ತಿಸಿ ಮಂದಿರದ ಮೇಲ್ಮೈ ರಚಿಸಲಾಗಿದೆ. ಪ್ರವೇಶದ್ವಾರದ ಒಳ ಮೇಲ್ಮೈಯಲ್ಲಿ ಉಡುಪಿ ಕಡೆಗೋಲು ಕೃಷ್ಣ, ವೇದವ್ಯಾಸ ರಚಿತ ಮಹಾಭಾರತವನ್ನು ಗಣಪತಿ ಬರೆಯುತ್ತಿರುವುದು, ಮಹಾರ್ಷಿ ವಾಲ್ಮೀಕಿ ರಚಿತ ರಾಮಾಯಣ ಬಿಂಬಿಸುವ ಚಿತ್ರಣಗಳನ್ನು ನಿರ್ಮಿಸಲಾಗಿದೆ. ಹೀಗೆ ಮನೋಹರವಾದ ಒಟ್ಟು ಹದಿನಾರು ಚಿತ್ರಣಗಳು ಮಂದಿರಕ್ಕೆ ಭಕ್ತಿಯ ಸೆಲೆಯನ್ನೀಡುತ್ತಿವೆ.
ತೀರ್ಥ ಮಂಟಪದ ಮುಂಭಾಗ (ಮಧ್ಯದಲ್ಲಿ) ನೆಲದಲ್ಲಿ ೧೨ ಅಡಿ ವಿಸ್ತೀರ್ಣದ ಕಮಲಪುಷ್ಫ ಶಿಲಾಮಯವಾಗಿ ರಂಗೋಲಿ ಮಾದರಿಯಲ್ಲಿ ರೂಪಿಸಲಾಗಿದೆ. ತುಳುನಾಡ ಪ್ರಸಿದ್ಧ ವಾಸ್ತುತಜ್ಞರ ಸಲಹೆ, ನುರಿತ ಶಿಲ್ಪಿಗಳ ಮಾರ್ಗದರ್ಶನದಂತೆ ದೇವಸ್ಥಾನದ ಸ್ಥಪತಿ (ವಾಸ್ತುಶಿಲ್ಪಿ) ಉಡುಪಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಸಂರಚನೆಯಲ್ಲಿ ಶಿಲಾಮಯ ಕೆತ್ತನೆಯೊಂದಿಗೆ ಮಂದಿರದ ಗರ್ಭಗುಡಿಯನ್ನು ಶಿರಕಲ್ಲುಗಳಲ್ಲಿ ಸಿದ್ಧಗೊಳಿಸಿದ್ದು, ತೀರ್ಥ ಮಂಟಪದ ಕೆಳಭಾಗ (ಆದಿಸ್ಥಾನ) ಸಂಪೂರ್ಣವಾಗಿ ಬೂದು ಕಲ್ಲುಗಳಿಂದ ಶಿಲಾಮಯವಾಗಿಸಿ ಕೃಷ್ಣಾವತಾರಕ್ಕೆ ಸಂಬಂಧಿತ ಮೂರ್ತಿಗಳನ್ನು ರಚಿಸಿ ಅಲಂಕರಿಸಲಾಗಿದೆ.ಬೆಂಗಳೂರುನಿಂದ ವಿಶೇಷವಾಗಿ ಆಯ್ದ ಕಲ್ಲುಗಳಿಂದ ಪ್ರಾಚೀನ ಶಿಲ್ಪಗಳನ್ನಾಗಿಸಿ ವಿಷ್ಣುಮೂರ್ತಿ ಭಟ್ ಎಲ್ಲೂರು ಇವರು ಕೆತ್ತನೆಗೈದ ಹಾಗೂ ಹರೀಶ್ ಆಚಾರ್ಯ ಪುತ್ತಿಗೆ ಮರದ ಕೆತ್ತನೆಯಲ್ಲಿ ಮಂದಿರ ಸಜ್ಜುಗೊಳಿಸಿದ್ದಾರೆ.
ಲೋಕದಲ್ಲಿ ಅಧರ್ಮ ಹೆಚ್ಚಿದಾಗ ಧರ್ಮವನ್ನು ಪುನಃಸ್ಥಾಪಿಸಲು ಹಾಗೂ ಅರ್ಹರನ್ನು ಅಥವಾ ಭಕ್ತರನ್ನು ಹುಟ್ಟು ಮತ್ತು ಸಾವುಗಳ ಚಕ್ರದಿಂದ ಮುಕ್ತಗೊಳಿಸಲು ಸುಜನರನ್ನು ಎತ್ತಿಹಿಡಿದು ದುರ್ಜನರನ್ನು ದಮನ ಗೊಳಿಸುವುದರ ಮೂಲಕ ಧರ್ಮಸಂಸ್ಥಾಪನೆಗೆ ಪರಮಾತ್ಮ ಕಾಲಕಾಲಕ್ಕೆ ಯಾವುದೋ ಒಂದು ರೂಪದಲ್ಲಿ ಭೂಮಿಗೆ ಇಳಿದು ಬರುತ್ತೇನೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ಮಾತು ಅವತಾರ ಎನ್ನುವುದರ ಉದ್ದೇಶ ಸೂಚಿಸುತ್ತದೆ. ಇಲ್ಲಿ ಧರ್ಮ ಸಂರಕ್ಷಣೆಯ ಹಿಂದೂ ದೇವತೆಯಾದ ವಿಷ್ಣು ಜೀವಕೋಟಿಯ ಉದ್ಧಾರಕ್ಕೆ ಕೈಗೊಂಡ ದಶಾವತಾರ ಬಿಂಬಿಸಿದ ಭವ್ಯ ಮಂದಿರವಾಗಿ ಗೋಕುಲ ನಿರ್ಮಾಣ ಗೊಂಡಿದ್ದು ಇದು ವಿಶ್ವಮಾನ್ಯತೆ ಪಡೆಯಲಿದೆ. ವಿಷ್ಣುವಿನ ಹತ್ತು ಅವತಾರಗಳಲ್ಲಿನ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ (ಕಲಿಯುಗದ ಅಂತ್ಯದಲ್ಲಿ ಅವತರಿಸುವವ) ಇದರ ಸಾರವನ್ನು ಈ ಮಂದಿರದಲ್ಲಿ ಕೆತ್ತನೆಯ ಮೂಲಕ ತಿಳಿಹೇಳಲಾಗುತ್ತಿದೆ. ಇದೆಲ್ಲವೂ ಮುಂದಿನ ಪೀಳಿಗೆಗೆ ಧರ್ಮ ರಕ್ಷಣೆಯನ್ನು ಬೋಧಿಸುವಂತಿದೆ.
ಜಿಪಿಟಿ ಮತ್ತು ಬಿಎಸ್ಕೆಬಿಎ ಉಭಯ ಸಂಸ್ಥೆಗಳ ಪದಾಧಿಕಾರಿಗಳ, ಸದಸ್ಯ ಬಾಂಧವರ, ದೇಶವಿದೇಶಗಳಲ್ಲಿನ ಕೊಡುಗೈದಾನಿಗಳು ಮತ್ತು ಭಕ್ತಾದಿಗಳ ಸೇವೆಗಳಿಂದ ಆಧುನಿಕ ಸವಲತ್ತು ಸೌಲಭ್ಯಗಳಿಂದ ಸುಮಾರು ೩೫೦೦ ಚದರ ಅಡಿಗಳಷ್ಟು ವಿಶಾಲವಾದ ಸಭಾಗೃಹ, ಕಿರು ಸಭಾಗೃಹ ಇತ್ಯಾದಿಗಳಿಂದ ಸಜ್ಜಾದ ನೂತನ ಗೋಕುಲ ಭವನ, ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡ ಶ್ರೀಕೃಷ್ಣ ಮಂದಿರ ಲೋಕಾರ್ಪಣೆಗೆ ಸಜ್ಜಾಗಿದ್ದು ೨೦೨೨ರ ಜನವರಿಯಲ್ಲಿ ಲೋಕಾರ್ಪಣೆ ನಡೆಸಲಾಗುವುದು ಎಂದು ಡಾ| ಸುರೇಶ್ ರಾವ್ ತಿಳಿಸಿದರು.


