ಕೈಕಂಬ: ಗುರುಪುರದ ಕುಕ್ಕುದಕಟ್ಟೆಯ ನಿವಾಸಿ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ಶನಿವಾರ ಮಧ್ಯಾಹ್ನ ಕಾಣಿಸಿಕೊಂಡ ಭಾರೀ ಆಕಸ್ಮಿಕ ಬೆಂಕಿಗೆ ಲಕ್ಷಾಂತರ ರೂ ಮೌಲ್ಯದ ಬಟ್ಟೆ ಬರೆ, ನಗದು, ಕಪಾಟು, ಮೇಲ್ಛಾವಣಿ ಹಾಗೂ ಹೆಂಚು ಸುಟ್ಟು ಕರಕಲಾಗಿದೆ.
ಕೃಷ್ಣ ಪೂಜಾರಿ, ಅವರ ಪತ್ನಿ ಮತ್ತು ಮಗಳು ಎಂದಿನಂತೆ ಕೆಲಸಕ್ಕೆ ಹೊರಗಡೆ ಹೋಗಿದ್ದರು. ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ಮನೆಯಲ್ಲಿ ತಗುಲಿದ್ದು, ನೆರೆಮನೆಯ ಮಹಿಳೆಯೊಬ್ಬರು ಗಮನಿಸಿ ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿದರು. ಮನೆಯೊಳಗೆ ಬೆಂಕಿ ಹತ್ತಿಕೊಂಡು ಪಕ್ಕಾಸಿಗೆ ಹಿಡಿದಿದೆ. ಹೆಂಚು ಸುಟ್ಟ ಬಳಿಕ ಬೆಂಕಿ ಹೊರಗಡೆ ವ್ಯಾಪಿಸಿದ್ದು, ವೇಗವಾಗಿ ಗಾಳಿ ಬೀಸುತ್ತಿದ್ದುದರಿಂದ ನೆರೆಯ ನಾಲ್ಕು ಮನೆಗಳಿಗೂ ಬೆಂಕಿ ತಗುಲುವ ಸಾಧ್ಯತೆ ಇತ್ತು. ಹತ್ತಿರದ ಬಂಡಸಾಲೆಯಲ್ಲಿ ಭಾನುವಾರದ ಕಟೀಲು ಮೇಳದ ಯಕ್ಷಗಾನಕ್ಕೆ ಸಿದ್ಧತೆ ನಡೆಸುತ್ತಿದ್ದ ಯುವಕರ ತಂಡ ಸ್ಥಳಕ್ಕೆ ಧಾವಿಸಿ ಬಂದು, ನೆರೆಮನೆಯವರ ಸಹಾಯದಿಂದ ಸುಮಾರು ಎರಡು ಗಂಟೆಯವರೆಗೆ ಪ್ರಯತ್ನಿಸಿ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅವಘಡ ಸಂಭವಿಸಿರುವ ಸಾಧ್ಯತೆಗಳಿವೆ.
ಪೂಜಾರಿಯವರ ಪುತ್ರಿ ಕಪಾಟಿನಲ್ಲಿಟ್ಟಿದ್ದ ತಿಂಗಳ ವೇತನ ಸಹಿತ ೩೦,೦೦೦ ರೂ, ಟೀವಿ, ಸೀರೆ-ಚೂಡಿದಾರ, ವಿದ್ಯುತ್ ಉಪಕರಣ ಹಾಗೂ ಇತರ ಸೊತ್ತುಗಳು ಸುಟ್ಟು ಕರಕಲಾಗಿವೆ. ಇದರಿಂದ ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸ್ಥಳಕ್ಕೆ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ್ ಶೆಟ್ಟಿ, ಪಂಚಾಯತ್ ಸದಸ್ಯರು, ಪಿಡಿಒ ಅಬೂಬಕ್ಕರ್, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡದ ಬಗ್ಗೆ ಪೂಜಾರಿಯವರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


