ಬಂಟ್ವಾಳ : ತಾಲ್ಲೂಕಿನ ಬಿ.ಸಿ.ರೋಡು ಕೈಕುಂಜೆ ಕನ್ನಡಭವನಕ್ಕೆ ಮಂಗಳೂರು ಗಣೇಶ ಬೀಡಿ ಸಂಸ್ಥೆ ಆಡಳಿತ ನಿರ್ದೇಶಕ ಡಾ.ಜಗನ್ನಾಥ ಶೆಣೈ ಭಾನುವಾರ ಭೇಟಿ ನೀಡಿ ಮಾತುಕತೆ ನಡೆಸಿದರು. ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಮತ್ತಿತರರು ಇದ್ದಾರೆ. ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಈಗಾಗಲೇ ಬಿಡುಗಡೆಗೊಂಡಿರುವ ‘ಭಾರತ ಭಾರತಿ’ ಪುಸ್ತಕವು ಸಾಹಿತ್ಯ ಲೋಕಕ್ಕೆ ನೀಡಿದ ವಿಶೇಷ ಕೊಡುಗೆಯಾಗಿ ಮೂಡಿ ಬಂದಿದೆ ಎಂದು ಮಂಗಳೂರು ಗಣೇಶ ಬೀಡಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಜಗನ್ನಾಥ ಶೆಣೈ ಹೇಳಿದ್ದಾರೆ.ಇಲ್ಲಿನ ಬಿ.ಸಿ.ರೋಡು ಸಮೀಪದ ಕೈಕುಂಜೆ ಕನ್ನಡಭವನಕ್ಕೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು.
ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಮೋಹನ್ ರಾವ್ ಅವರು ಡಾ. ಜಗನ್ನಾಥ ಶೆಣೈ ಇವರನ್ನು ಸನ್ಮಾನಿಸಿದರು. ಕೊಂಕಣಿ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಪಾಣೆಮಂಗಳೂರು ಶಾರದಾ ಪ್ರೌಢಶಾಲೆ ಸಂಚಾಲಕ ಜನಾರ್ಧನ ಭಟ್ ಶುಭ ಹಾರೈಸಿದರು. ೨೧ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಸುರೇಶ ನೆಗಳಗುಳಿ ಮಾತನಾಡಿ ಕನ್ನಡ ಭವನದಲ್ಲಿ ಸುಸಜ್ಜಿತ ಗ್ರಂಥಾಲಯ ತೆರೆಯುವಂತೆ ಸಲಹೆ ನೀಡಿದರು. ಪ್ರಮುಖರಾದ ಎ.ಸಿ.ಭಂಡಾರಿ, ಜಗನ್ನಾಥ ಚೌಟ ಮಾಣಿ, ಐತಪ್ಪ ಆಳ್ವ ಬಿ.ಸಿ.ರೋಡು, ಕೊಳಕೆ ಗಂಗಾಧರ ಭಟ್, ಬಿ.ಎಂ. ಅಬ್ಬಾಸ್ ಅಲಿ, ಜಯಾನಂದ ಪೆರಾಜೆ, ರವೀಂದ್ರ ಕುಕ್ಕಾಜೆ, ಮಹಾಬಲೇಶ್ವರ ಹೆಬ್ಬಾರ್, ಪಲ್ಲವಿ ಕಾರಂತ್ ಮತ್ತಿತರರು ಇದ್ದರು.
ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಭಾನುವಾರ ನಡೆದ ವೈಭವದ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡರು. ಬ್ರಹ್ಮ ರಥೋತ್ಸವ ಸಂಭ್ರಮ, ನೇತ್ರಾವತಿ ನದಿಯಲ್ಲಿ ತೆಪ್ಪೋತ್ಸವ ನಡೆಯಿತು. ಬಂಟ್ವಾಳದ ‘ವಟಪುರ ಕ್ಷೇತ್ರ’ ಎಂಬ ಪ್ರತೀತಿ ಹೊಂದಿರುವ ಬಂಟ್ವಾಳ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಸಂಜೆ ವಾರ್ಷಿಕ ಬ್ರಹ್ಮರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ದೇವಳದ ಸಂಪ್ರದಾಯದಂತೆ ಮೃಗಬೇಟೆ ಪ್ರಯುಕ್ತ ನೇತ್ರಾವತಿ ನದಿಯಲ್ಲಿ ಶನಿವಾರ ರಾತ್ರಿ ದೇವರ ತೆಪ್ಪೋತ್ಸವ ಆಕರ್ಷಕವಾಗಿ ಮೂಡಿ ಬಂತು. ದೇವಳದ ಆಡಳಿತ ಮೊಕ್ತೇಸರ ಬಿ.ಪುರುಷೋತ್ತಮ ಶೆಣೈ, ಮೊಕ್ತೇಸರ ಎ.ಗೋವಿಂದ ಪ್ರಭು, ಪಣಂಬೂರು ಪ್ರವೀಣ್ ಕಿಣಿ ಮತ್ತಿತರರು ಇದ್ದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭೇಟಿ ನೀಡಿದರು.
