ಬಜಪೆ:ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಬಜಪೆ ವರ್ತಕರು ಜು. 8 ಮಧ್ಯಾಹ್ನ 2.00 ರಿಂದ ಸ್ವಯಂ ಪ್ರೇರಿತ ಬಂದ್ ಮಾಡಲು ವರ್ತಕರ, ಉದ್ಯಮಿಗಳ ,ಸಂಘ ಸಂಸ್ಥೆ ಅಧ್ಯಕ್ಷರ ಮತ್ತು ಸಮಾಜದ ಗಣ್ಯ ವ್ಯಕ್ತಿಗಳ ಸಮಾಕ್ಷಮದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಜು.8ರಿಂದ ಜು. 22ರವರೆಗೆ ಬೆಳಿಗ್ಗೆ ಗಂಟೆ 7.00 ರಿಂದ ಮಧ್ಯಾಹ್ನ ಗಂಟೆ 2.00 ವರೆಗೆ ಅಂಗಡಿ ಮುಂಗಟ್ಟುಗಳನ್ನುತೆರೆಯುವುದೆಂದು ಹಾಗೂ ಮಧ್ಯಾಹ್ನ 2.00 ರಿಂದ ಸಂಪೂರ್ಣವಾಗಿ ಬಂದ್ ಮಾಡುವುದೆಂದು ತೀರ್ಮಾನ ತೆಗೆದುಕೊಳ್ಳಲಾಯಿತು.
ಸುಮಾರು 100 ಕ್ಕಿಂತ ಅಧಿಕ ವರ್ತಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.ಪಂಚಾಯತ್ ಅಧ್ಯಕ್ಷ ರೋಝಿ ಮಥಾಯಸ್ ಅಧ್ಯಕ್ಷತೆ ವಹಿಸಿದ್ದರು. ಬಜಪೆ ಚರ್ಚ್ ಧರ್ಮಗುರುಗಳಾದ ವಂದನೀಯ ಫಾ! ರೊನಾಲ್ಡ್ ಕುಟ್ಟಿನ್ಹೋ, ಬಜಪೆಯ ಹಿರಿಯ ವೈದ್ಯರಾದ ಡಾ.ಜಯರಾಮ ಶೆಟ್ಟಿ, ಬಜಪೆ ಮಸೀದಿಯ ಆಡಳಿತ ಮಂಡಳಿಯ ಸದಸ್ಯರಾದ ಸಾಹುಲ್ ಹಮೀದ್ ವೇದಿಕೆಯಲ್ಲಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು.
