ಬಂಟ್ವಾಳ: ಪಶ್ಚಿಮವಾಹಿನಿ ಯೋಜನೆಯಡಿಯಲ್ಲಿ ಪಲ್ಗುಣಿ ನದಿಗೆ ಅಡ್ದಲಾಗಿ ಬಂಟ್ವಾಳ -ಮಂಗಳೂರು ಸಂಪರ್ಕಿಸಲು ಅನುಕೂಲವಾಗುವಂತೆ ಬಂಟ್ವಾಳ ತಾಲೂಕಿನ ಕರ್ಪೆಗ್ರಾಮದ ದೋಟ ಎಂಬಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಸಹಿತ ಸೇತುವೆ ಕಾಮಗಾರಿಯನ್ನು ಮಳೆಗಾಲ ಆರಂಭಕ್ಕೆ ಮುನ್ನ ಪೂರ್ಣಗೊಳಿಸಲು ಪ್ರಯತ್ನಿಸುವಂತೆ ಸಣ್ಣ ನೀರಾವರಿ ಇಂಜಿನೀಯರ್ ಗಳು ಹಾಗೂ ಸಂಬಂಧಿಸಿದ ವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಉಳಿಪಾಡಿ ಸೂಚಿಸಿದ್ದಾರೆ.
ಗುರುವಾರ ಕೊರೊನಾ ಹತೋಟಿಯ ನಿಟ್ಟಿನಲ್ಲಿ ಸಂಗಬೆಟ್ಟು ಗ್ರಾಮಪಂಚಾಯತ್ ಭೇಟಿ ನೀಡಿ ಪಂಚಾಯತ್ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯು ಕೈಗೊಂಡ ಅಗತ್ಯಕ್ರಮಗಳ ಪರಿಶೀಲನೆ ಸಂದರ್ಭದಲ್ಲಿ ಗ್ರಾಮಸ್ಥರ ಮನವಿಯ ಮೇರೆಗೆ ಅಣೆಕಟ್ಟು ಕಾಮಗಾರಿಯ ವಿಳಂಬ ಹಾಗೂ ಕೂಲಿ ಕಾರ್ಮಿಕರ ಸ್ಥಿತಿಯನ್ನು ಅವಲೋಕಿಸಲು ಶಾಸಕರು ಹಠಾತ್ತ ಅಣೆಕಟ್ಟು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಗೆ ಸಲಹೆ ,ಸೂಚನೆ ನೀಡಿದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಅಣೆಕಟ್ಟು,ಸೇತುವೆ ಕಾಮಗಾರಿಯಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬವಾಗಿದ್ದು ,ಇಲ್ಲಿರುವ ಕಾರ್ಮಿಕರನ್ನು ಹೊರ ಹೊಗದಂತೆ ನೋಡಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮಳೆಗಾಲಕ್ಕೆ ಮುನ್ನವೇ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಾಜೇಶ್ ನಾಯ್ಕ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಘನವಾಹನ ಸಂಚಾರಕ್ಕು ಅವಕಾಶ :
ಈ ಅಣೆಕಟ್ಟು-ಸೇತುವೆಯಲ್ಲಿ ಘನವಾಹನ ಸಂಚಾರಕ್ಕು ಅವಕಾಶ ಕಲ್ಪಿಸಬೇಕೆಂಬ ಗ್ರಾಮಸ್ಥರ ಬೇಡಿಕೆಯ ಹಿನ್ನಲೆಯಲ್ಲಿ ಆರಂಭದಲ್ಲಿ ಮಂಜೂರಾದ16 ಕೋಟಿ ಅನುದಾನವನ್ನು 32 ಕೋಟಿ ರೂ.ಗೆ ಹೆಚ್ಚಿಸಿ ಸೇತುವೆಯನ್ನು ಅಗಲೀಕರಣಗೊಳಿಸುವುದರ ಜತೆಗೆ ಘನವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಪಲ್ಗುಣಿ ನದಿಗೆ ಅಣೆಕಟ್ಟು ಮತ್ತು ಸೇತುವೆಯ ಕಾಮಗಾರಿ ಪೂರ್ಣವಾದ ಬಳಿಕಬಂಟ್ವಾಳ ಮತ್ತು ಮಂಗಳೂರು ತಾಲೂಕಿನ ಅಣೆಕಟ್ಟಿನ ಇಕ್ಕೆಲಗಳಲ್ಲಿಯ ಸುಮಾರು 20 ಕೀ.ಮೀ ಉದ್ದಕ್ಕೆ ಕೃಷಿ ಭೂಮಿಗೆ ನೀರು ಹಾದು ಹೋಗಲು 12 ಕೋಟಿ ರೂ. ಅನುದಾನ ಮತ್ತೆ ಮಂಜೂರು ಗೊಳಿಸಲಾಗಿದ್ದು, ಒಟ್ಟು 42 ಕೋಟಿ ವೆಚ್ಚದ ಈ ಕಾಮಗಾರಿ ತುರ್ತು ಮುಗಿಸುವ ದೃಷ್ಟಿಯಿಂದ ಅಳಮಟ್ಟಿ ಅಣೆಕಟ್ಟು ನಿರ್ಮಾಣ ತಜ್ಞರನ್ನು ತರಿಸಲು ಸರ್ಕಾರದ ವತಿಯಿಂದ ಕ್ರಮ ಕೈ ಗೊಳ್ಳವುದಾಗಿ ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.
ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ನೀರಿನ ಸಮಸ್ಯೆಯು ಸುದಾರಿಸಲಿದೆ ಎಂದ ಶಾಸಕರು ಬೆಳ್ತಂಗಡಿ ತಾಲೂಕಿನ ವೇಣೂರು ಕಡೆಯಿಂದ ಬಂಟ್ವಾಳದ ವಾಮದಪದವು ಸಿದ್ದಕಟ್ಟೆ ಮೊದಲಾದ ಪ್ರದೇಶದ ಜನರಿಗೆ ಮಂಗಳೂರು ಸಂಪರ್ಕಕ್ಕೆ ಸುಗಮವಾಗಲಿದೆ ಎಂದರು.
ಮಂಗಳೂರು ತಾಲೂಕಿನ ಕುಪ್ಪೆಪದವು ಎಡಪದವು ಇರುವೈಲ್ ಸೇರಿದಂತೆ ಬಹುತೇಕ ಜನರಿಗೆ ಈ ರಸ್ತೆಯ ಮೂಲಕ ಬಂಟ್ವಾಳ ಹಾಗೂ ಧರ್ಮಸ್ಥಳ, ಉಜಿರೆ ಭಾಗಕ್ಕೆ ತೆರಳಲಿ ಹತ್ತಿರವಾಗಲಿದೆ.ಅದರಲ್ಲೂ ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಇನ್ನಷ್ಟು ಸಮೀಪವಾಗಲಿದೆ ಎಂದು ವಿವರಿಸಿದರು.
ಶಾಸಕರ ಜತೆ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಕೃಷ್ಣ ಕುಮಾರ್, ಸಹಾಯಕ ಇಂಜಿನೀಯರ್ ಪ್ರಸನ್ನ , ತಾ. ಪಂ. ಸದಸ್ಯ ಪ್ರಭಾಕರ ಪ್ರಭು, ಗುತ್ತಿಗೆದಾರರ ಇಂಜಿನಿಯರ್ ಪ್ರೀನ್ಸ್, ಸೈಟ್ ಮೆನೇಜರ್ ಮಂಜುನಾಥ್, ಶಾಸಕರ ಅಪ್ತ ಸಹಾಯಕರಾದ ದಿನೇಶ್, ಪವನ್ ಕುಮಾರ್, ಗ್ರಾಮದ ಪ್ರಮುಖರಾದ ತೇಜಾಸ್ ಮರ್ದೊಟ್ಟು, ನವೀನ ಪೂಜಾರಿ ಹೊಸಹೊಕ್ಲು, ಗಣೇಶ್ ರೈ ಮಾಣಿ ಮೊದಲಾದವರಿದ್ದರು.
