ಕಟೀಲು : ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಆಗಮಿಸುತ್ತಿರುವ ಸಾವಿರಾರು ಭಕ್ತಾದಿಗಳಿಗೆ ದೈವೇಚ್ಛೆಯಂತೆ `ನಳಪಾಕ’ ಸವಿಯುವ ಅವಕಾಶ ಸಿಕ್ಕಿದೆ. ಹೌದು, ಇಷ್ಟೊಂದು ಮಂದಿಗೆ ಸಮಯೋಚಿತವಾಗಿ ಫಲಾಹಾರ ಮತ್ತು ಊಟೋಪಚಾರಕ್ಕೆ ಸಿದ್ಧತೆ ನಡೆಸುತ್ತಿರುವ ಅನ್ನಛತ್ರದ ಪಾಕಶಾಲೆಯೊಳಗೆ ಹೊಕ್ಕು, ಕಣ್ಣಾಡಿಸಿದಾಗ ಅಚ್ಚರಿಯೊಂದು ಕಾದಿತ್ತು.
ಪಾಕಶಾಲೆಯ ಮೂಲೆಯಲ್ಲಿ ಅಡುಗೆ ಭಟ್ಟರಿಗೆ(ಬಾಣಸಿಗರಿಗೆ) ಮತ್ತು ಸ್ವಯಂಸೇವಕರಿಗೆ ಆಗಾಗ್ಗೆ ನಿರ್ದೇಶನ ನೀಡುತ್ತ, ಅಡುಗೆ ಕೆಲಸದಲ್ಲಿ ಸ್ವಯಂ ನಿರತರಾಗಿರುವ ದಢೂತಿ ವ್ಯಕ್ತಿಯೊಬ್ಬರು ಸಾಮಾನ್ಯರ ಗಮನಸೆಳೆಯದೆ ಇರಲಾರರು. ಅವರು ಮತ್ತಾರೂ ಅಲ್ಲ, ವೃತ್ತಿಪರ ಬಾಣಸಿಗ ವೆಂಕಟೇಶ್ ಭಟ್ ಪಾವಂಜೆ. ಬರೇ ದಢೂತಿ, ಬಾಣಸಿಗ ಎಂದು ಹೇಳಿದರೆ ಅದರಲ್ಲೇನೂ ಕುತೂಹಲ ಇರಲಾರದು. ಖಂಡಿತವಾಗಿಯೂ, ಈ ವ್ಯಕ್ತಿ ಮತ್ತೊಂದು ಹವ್ಯಾಸ ಬೆಳೆಸಿಕೊಂಡವರು.
ವೆಂಕಟೇಶ್ ಭಟ್ ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ ಬಿಕಾಂ ಓದಿದ್ದಾರೆ. ಕಾಲೇಜು ದಿನಗಳಲ್ಲೇ ಇವರೊಬ್ಬ ಅತ್ಯುತ್ತಮ ದೇಹದಾಢ್ರ್ಯ ಹಾಗೂ ಕುಸ್ತಿ ಪಟು. 1994ರಿಂದ 2000 ಇಸವಿಯವರೆಗೆ ಇವರು ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಅನೇಕ ದೇಹದಾಢ್ರ್ಯ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯದೊಂದಿಗೆ ಚಾಂಪಿಯನ್ ಆಗಿದ್ದರು. ಇದೇ ವೇಳೆ ಅಜ್ಜ, ಮುತ್ತಜ್ಜ, ತಂದೆ, ಸಂಬಂಧಿಕರು…ಹೀಗೆ ವಂಶ ಪರಂಪರೆಯಿಂದ ಪಾವಂಜೆ ಕುಟುಂಬಕ್ಕೆ ಶ್ರೀ ಕ್ಷೇತ್ರ ಕಟೀಲಿನಿಂದ ಬಳುವಳಿಯಾಗಿ ಬಂದಿರುವ `ಅಡುಗೆ ಸೇವೆ’ಯಲ್ಲಿ ಈಗ ಇವರು ಕೂಡಾ ಕೈಜೋಡಿಸಿದ್ದಾರೆ.
ಸದಾ ಹಸನ್ಮುಖಿಯಾಗಿರುವ ಇವರು ಮಾತನಾಡುತ್ತ, “ಇದು ದೇವರ ಸೇವೆ. ಇತರರೊಂದಿಗೆ ಕೂಡಿಕೊಂಡು ಈ ಸೇವೆ ಮಾಡುತ್ತಿದ್ದೇನೆ. ಕಾಲೇಜು ದಿನಗಳಲ್ಲಿ ನಾನು ದೇಹದಾಢ್ರ್ಯ ಪಟುವಾಗಿದ್ದರೂ, ಕಟೀಲಿನಲ್ಲಿ ನಡೆಯುವ ಹಬ್ಬಹರಿದಿನಗಳ ಸಂದರ್ಭದಲ್ಲಿ ಅಡುಗೆ ಮಾಡಲು ಇಲ್ಲಿಗೆ ಬರುತ್ತೇನೆ. ಅವಕಾಶ ಸಿಕ್ಕಾಗ ರಾಜ್ಯ ಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳಿಗೆ ತೀರ್ಪುಗಾರನಾಗಿ ಹೋಗುತ್ತೇನೆ. 1991-2000 ಇಸವಿಯವರೆಗೂ ನನಗೆ ಪ್ರಶಸ್ತಿಗಳು ಬಂದಿವೆ” ಎಂದು ಸೌಮ್ಯವಾಗಿ ನುಡಿಯುತ್ತಾರೆ.


