ಫರಂಗಿಪೇಟೆ : ನಾಗ ಸಂಪತ್ತಿನ ಅಧಿದೇವತೆ. ಹಿಂದಿನ ಕಾಲದಲ್ಲಿ ಪೂರ್ವಜರು ಮಾಡುತ್ತಿದ್ದ ನಾಗಾರಧನೆ ವೈಶಿಷ್ಯಪೂರ್ಣ ಹಾಗೂ ಅರ್ಥಪೂರ್ಣವಾಗಿತ್ತು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಪುದು ಗ್ರಾಮದ ನಾಣ್ಯ ಶ್ರೀನಾಗರಕ್ತೇಶ್ವರೀ ಕ್ಷೇತ್ರದಲ್ಲಿ ಜನವರಿ ತಿಂಗಳಿನಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವದ ಪೂರ್ವಭಾವಿಯಾಗಿ ಕ್ಷೇತ್ರದಲ್ಲಿ ನಡೆದ ಅನುಜ್ಞ ಕಲಶ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಪರಶುರಾಮ ಸೃಷ್ಟಿಯಾಗಿರುವ ತುಳುನಾಡಿನಲ್ಲಿ ಎಷ್ಟೆ ಮಳೆ ಬಂದರೂ ಈವರೆಗೂ ಕೆಟ್ಟ ಪರಿಣಾಮವಾಗಿಲ್ಲ. ಇದು ಇಲ್ಲಿ ಆರಾಧನೆ ಮಾಡಿಕೊಂಡು ಬಂದ ನಾಗಮಂಡಲ, ದೈವರಾಧನೆಯ ಪುಣ್ಯದ ಫಲವಾಗಿದೆ ಎಂದು ತಿಳಿಸಿದರು. ಅನ್ನದಾನ ಹಾಗೂ ಹಿಂಗಾರ ಸಮರ್ಪಣೆಯಿಂದ ನಾಗಮಂಡಲ ಶಕ್ತಿ ಬರುತ್ತದೆ. ಭಕ್ತಿ, ಭಾವುಕತೆಯಯಿಂದ ಅದು ಪರಿಪೂರ್ಣವಾಗುತ್ತದೆ. ಆದ್ದರಿಂದ ಆರು ಗ್ರಾಮದ ಎಲ್ಲಾ ಜನರು ಶ್ರದ್ದಾಭಕ್ತಿಯಿಂದ ನಾಗಮಂಡಲೋತ್ಸವದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ನಾಗಮಂಡಲ ಆಗುವವರೆಗೆ ಊರಿನ ಮಂದಿ ಮಾಂಸಹಾರ ಸೇವನೆ ತ್ಯಜಿಸುವಂತೆ ಮನವಿ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಸತ್ಸಂಗ ಸಮಿತಿಯ ವಾಸುದೇವ ಕೊಟ್ಟಾರಿ ಮಾತನಾಡಿ ಆತ್ಮೋನ್ನತಿಗಾಗಿ ನಾಗನ ಸೇವೆ ಮಾಡಬೇಕು. ಪ್ರಕೃತಿಯನ್ನು ಪೂಜಿಸುವ ಸಂಸ್ಕಾರ ಭಾರತದಲ್ಲಿ ಮಾತ್ರ ಇದೆ. ಆದ್ದರಿಂದ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಗೌರವಾಧ್ಯಕ್ಷ ಸುಜೀರು ಗುತ್ತು ಐತಪ್ಪ ಆಳ್ವ, ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ ಕಾರ್ಯಧ್ಯಕ್ಷ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಕೃಷ್ಣ ತಂತ್ರಿ, ತುಪ್ಪೆಕಲ್ಲು ಕ್ಷೇತ್ರ ಗಡಿಕಾರ ಕಂಪ ಸದಾನಂದ ಆಳ್ವ, ಉದ್ಯಮಿ ಜಗನ್ನಾಥ ಚೌಟ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ತಾ.ಪಂ.ಸದಸ್ಯ ಗಣೇಶ್ ಸುವರ್ಣ ತುಂಬೆ, ಪ್ರಕಾಶ್ ಬಿ. ಶೆಟ್ಟಿ ಶ್ರೀ ಶೈಲ, ಪೂವಪ್ಪ ನಾಣ್ಯ, ಭಗವತಿ ಕ್ಷೇತ್ರದ ರಾಮಚಂದ್ರ ಮಾರಿಪಳ್ಳ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ ಪ್ಲಾಸ್ಟಿಕ್ ಮುಕ್ತ ಹಾಗೂ ರಾಸಾಯನಿಕ ಮುಕ್ತ ನಾಗಮಂಡಲೋತ್ಸವ ನಡೆಸುವ ಬಗ್ಗೆ ಸಂಕಲ್ಪ ಮಾಡಲಾಗಿದೆ. ನಾಗಮಂಡಲೋತ್ಸವದ ಪ್ರಯುಕ್ತಮಾತೃನಮನ ಕಾರ್ಯಕ್ರಮ ನ. 24 ರಂದು ಸೇವಾಂಜಲಿ ಸಭಾಂಗಣದಲ್ಲಿ ಜರುಗಲಿದೆ.ಡಿ1 ರಿಂದ ವೃತಾರಂಭ ನಡೆಯಲಿದ್ದು ಬಳಿಕ ನಿರಂತರ ಶ್ರಮಸೇವೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ದೇವದಾಸ್ ಶೆಟ್ಟಿ ಕೊಡ್ಮಾಣ್ ಸ್ವಾಗತಿಸಿದರು. ಕಾರ್ಯಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನಕಾರ್ಯದರ್ಶಿ ಮನೋಜ್ ಆಚಾರ್ಯ ಸಹಕರಿಸಿದರು.ಪ್ರವೀಣ್ ಶೆಟ್ಟಿ ಸುಜೀರ್ ವಂದಿಸಿದರು ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ 25 ಸಾವಿರದ ಮೊದಲ ದೇಣಿಗೆಯನ್ನು ಮಾಣಿಲ ಕ್ಷೇತ್ರದ ವತಿಯಿಂದ ಸಲ್ಲಿಸಲಾಯಿತು.
ನಾಣ್ಯ ಶ್ರೀ ನಾಗರಕ್ತೇಶ್ವರೀ ಕ್ಷೇತ್ರದಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಬಿಡುಗಡೆಗೊಳಿಸಿದರು.
