ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಇಲ್ಲಿನ ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ ಘಟನೆ ಭಾನುವಾರ ನಡೆದಿದೆ.
ಆರೋಪಿಯನ್ನು ವಿಟ್ಲ ನಿವಾಸಿ ಇಕ್ಬಾಲ್ ಮತ್ತು ರಿಯಾಝ್ ಎಂದು ಗುರುತಿಸಲಾಗಿದ್ದು, ಇವರು ಪಿಕಪ್ ವಾಹನವೊಂದರಲ್ಲಿ ಒಟ್ಟು ಏಳು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಬಾನುವಾರ ಕಸಾಯಿಖಾನೆಗೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಪೈಕಿ ಮೂರು ದನ, ಎರಡು ಕೋಣ ಮತ್ತು ಎರಡು ಎತ್ತುಗಳನ್ನು ವಾಹನ ಸಹಿತ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಸಮೀಪದ ದಿಡುಪೆ ಎಂಬಲ್ಲಿಂದ ಮಂಗಳೂರಿನ ಕಡೆಗೆ ಭಾನುವಾರ ಬೆಳಿಗ್ಗೆ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದ ಎಸೈ ಲತೇಶ್ ಕುಮಾರ್ ನೇತೃತ್ವದ ಪೊಲೀಸರು ಕಾದು ಕುಳಿತು ಪುಂಜಾಲಕಟ್ಟೆಯಲ್ಲಿ ಅಡ್ಡಗಟ್ಟಿ ವಶಕ್ಕೆ ತೆಗೆದುಕೊಂಡರು. ಈ ಹಿಂದೆಯೂ ಅಕ್ರಮ ಜಾನುವಾರು ಸಾಗಾಟ ವೇಳೆ ಈ ಆರೋಪಿಗಳು ಬಂಧನಕ್ಕೀಡಾಗಿದ್ದು, ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
