ಮಂಗಳೂರು: ನಗರದ ಗೋರಿಗುಡ್ಡ ಸ್ಮಶಾನದ ಬಳಿ ಚಿಟ್ಫಂಡ್ ಏಜೆಂಟ್ ಆಗಿರುವ ಯುವಕನೋರ್ವನನ್ನು ಬೈಕ್ನಲ್ಲಿ ಬಂದ ಮೂವರ ತಂಡವೊಂದು ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇಬ್ಬರನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಹೆಸರು ಇನ್ನು ಸ್ವಲ್ಪ ಹೊತ್ತಾದ ಬಳಿಕ ತಿಳಿದುಬರಲಿದೆ.
ಎರಡು ದಿನಗಳ ಹಿಂದೆ ಚಿಟ್ ಫಂಡ್ ಏಜೆಂಟ್ ದುರ್ಗಾಪ್ರಸಾದ್ ಶೆಟ್ಟಿ ಎಂಬವರು ತನ್ನ ಬೈಕ್ನಲ್ಲಿ ವೆಲೆನ್ಸಿಯಾ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಸಂದರ್ಭ ಒಂದೇ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಗೋರಿಗುಡ್ಡ ಸ್ಮಶಾನದ ಬಳಿ ಬೈಕ್ನ್ನು ತಡೆದು ನಿಲ್ಲಿಸಿ ಚೂರಿಯಿಂದ ಇರಿದು ಪರಾರಿಯಾಗಿತ್ತು. ಇದರಿಂದ ಅವರು ಗಂಭೀರ ಗಾಯಗೊಂಡು ಚರಂಡಿಗೆ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದು, ನಿನ್ನೆ ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.



