ಕವಿತೆ
*ರೈತನ ಕಣ್ಣೀರು*
ರೈತ ದೇಶದ ಬೆನ್ನೆಲುಬು
ಎಂದು ಭಾಷಣ ಬೀಗಿದರೆ ಸಾಕೆ|
ನೋವುಗಳೇ ಗುಡುಗಿ ರೈತನ ಕಣ್ಣೀರು
ಮಳೆಯಾಗಿ ಹರಿಯುವುದು ಯಾಕೆ||
ಮೂರು ಹೊತ್ತು ಅನ್ನವೇ ಬೇಕು
ಪ್ರತಿಯೊಬ್ಬರ ಬದುಕಿನ ನಾಳೆಗೆ|
ಧಾವಿಸಿ ಬನ್ನಿರಿ ಎಲ್ಲರೂ
ಒಗ್ಗಟ್ಟಾಗಿ ಭವಿಷ್ಯದ ಏಳ್ಗೆಗೆ||
ಮುಗಿಲು ಮುಟ್ಟುವವರೆಗೂ ಕಾವು
ಹೋರಾಡಿ ಶ್ರಮದ ಗೆಲುವಿಗೆ|
ಅನ್ಯಾಯ ದೌರ್ಜನ್ಯಗಳ ತಡೆಗೆ
ನಿಲ್ಲಿ ನೇಗಿಲ ಯೋಗಿಯ ನೆರವಿಗೆ…
ಒಪ್ಪತ್ತು ಗಂಜಿಗೆ ದಿನವಿಡೀ ದುಡಿದು
ಬೆವರಲ್ಲಿ ಮೈ ಬಸಿಯುತ್ತಿರುವನು|
ಕೇಳುವವರಿಲ್ಲದೆ ಇವನ ಪಾಡು
ಹಾಡುಹಗಲೇ ಕುಸಿದು ಕುಳಿತಾನು||
ಕೀಟನಾಶಕ ರಸಗೊಬ್ಬರ
ವಿದ್ಯುತ್ ನೀರು ದುಬಾರಿ ಪರಿಕರ|
ಭರವಸೆ ನೀಡಿದ ಸರಕಾರ
ಸಹಾಯಧನ ಕಡಿತಗೊಳಿಸಿ ಹರೋಹರ||
ಕಷ್ಟ ನಷ್ಟಗಳ ಆಗರ
ಜೀವನವೇ ಇಲ್ಲಿ ಅತಿ ಭಾರ|
ಪ್ರತಿಭಟಿಸಿ ಸಿಡಿದೆದ್ದು ನಿಂತರೆ ರೈತ
ನಾಡಿಗೆ ನಾಡೇ ಹಾಹಾಕಾರ…
ಅತಿವೃಷ್ಟಿ ಅನಾವೃಷ್ಟಿ|
ಬಡತನವೇ ಇಲ್ಲಿ ಪಿತ್ರಾರ್ಜಿತ ಆಸ್ತಿ ||
ಅಸ್ಥಿರ ಮಾರುಕಟ್ಟೆಯ ವಸತಿ
ವೈಜ್ಞಾನಿಕ ಸಂಸ್ಕರಣೆಯು ನಾಸ್ತಿ||
ಖರ್ಚು ವೆಚ್ಚವಾಗಿ ಅಗಣಿತ
ಬೆಂಬಲ ಬೆಲೆಯಿಲ್ಲದೆ ಅತ್ತಿತ್ತ|
ಮಧ್ಯವರ್ತಿಯ ಹಾವಳಿ ವಿಪರೀತ
ರಾಜಕೀಯ ಇಚ್ಛಾಶಕ್ತಿಗಿದೆ ಕೊರೆತ||
ಬರಗಾಲದ ಬರೆ
ತಾಳದ ಭಾದೆ ಸಾಲದ ಮೊರೆ|
ದೀರ್ಘಕಾಲ ಕಿರುಕುಳದ ಹೊರೆ
ಕೃಷಿ ಪ್ರಗತಿಗೆ ಓಗೊಡಲಿ ಈ ಕರೆ….