ಬಜ್ಪೆ : ಶಾಲೆ ಮನುಷ್ಯನ ಮೌಲ್ಯಾಧರಿತ ವ್ಯಕ್ತಿತ್ವ ರೂಪಿಸುವ ಸಂಸ್ಥೆ. ಗುಣವಿಲ್ಲದ ಶಿಕ್ಷಣದಿಂದ ಏನನ್ನೂ ಸಾಧಿಸಲಾಗದು. ಕನ್ನಡದ ಮೇಲಿನ ಪ್ರೀತಿ ಉಳಿಸಿಕೊಳ್ಳಿ. ಮಾತೃಭಾಷೆಗೆ ಈ ಶಾಲೆಯಲ್ಲಿ ಸಿಗುತ್ತಿರುವ ಗೌರವ ಅಭಿನಂದನೀಯ. ಹಂಬಲ, ಅವಿರತ ಶ್ರಮದ ಮೂಲಕ ಸಾಧನೆಯ ಗುರಿ ತಲುಪಲು ಸಾಧ್ಯವಿದೆ. ಅಂತಹ ನಿಮ್ಮ ಸಾಧನೆಗಳ ಹಾದಿಗೆ ಭಗವಂತ ದಾರಿದೀಪವಾಗಲಿ ಎಂದು ಪೋಪ್ ಜಾನ್ ಪಾಲ್(ದ್ವಿತೀಯ) ಬಜ್ಪೆ ಆಧ್ಯಾತ್ಮಿಕ ಕೇಂದ್ರದ ಧರ್ಮಗುರು ಸ್ಟ್ಯೇನಿ ಮೊಂತೆರೋ ವಿದ್ಯಾರ್ಥಿಗಳ ಹರಸಿದರು.
ಬಜ್ಪೆ ಅನುದಾನಿತ ಹೋಲಿ ಫ್ಯಾಮಿಲಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಹಳೆ ಬೇರಿಲ್ಲದೆ ಹೊಸ ಚಿಗುರಿಲ್ಲ. ಆದರೆ ನಾವೀಗ ನಮ್ಮ ಹಳೆ ಸಂಸ್ಕøತಿ ಮರೆಯುತ್ತಿದ್ದು, ಅನ್ಯ ಸಂಸ್ಕøತಿಗೆಮಾರು ಹೋಗಿದ್ದೇವೆ. ನಮ್ಮ ಸಂಸ್ಕೃತಿಯೊಂದಿಗೆ ಪಡೆಯುವ ಶಿಕ್ಷಣದಿಂದ ವ್ಯಕ್ತಿ ಉನ್ನತ ಸ್ಥಾನ ಕಂಡುಕೊಳ್ಳುತ್ತಾನೆ. ನಮಗೀಗ ನಮ್ಮ ಸಂಸ್ಕøತಿ ಮತ್ತು ಸಂಸ್ಕಾರ ಗೌಣವಾಗಿದೆ. ಶಾಲಾ ಶಿಕ್ಷಕರು ಮತ್ತು ಪೋಷಕರಿಂದ ಮಾತ್ರ ನಮ್ಮ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಲು ಸಾಧ್ಯವಿದೆ ಎಂದು ಹಳೆ ವಿದ್ಯಾರ್ಥಿನಿ, ವಕೀಲೆ ಪುತ್ತೂರು ಅಕ್ಷತಾ ಶೆಟ್ಟಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮೈಸೂರು ಪೇಟಾದೊಂದಿಗೆ ಸನ್ಮಾನಿತರಾದ ಬಜ್ಪೆಯ ಸಿಮ್ಸನ್ ಗನ್ ಹೌಸಿನ ಮಾಲಕ ರೋ. ರೋಯ್ ಪ್ರಕಾಶ್ ಸಿಮ್ಸನ್ ಮಾತನಾಡುತ್ತ, “ಈ ಸನ್ಮಾನ ಮತ್ತಷ್ಟು ಸಮಾಜಸೇವೆಗೆ ನನಗೆ ಉತ್ತೇಜನ ನೀಡಿದೆ. ಶಾಲೆಗಳಿಂದ ಸಿಗುವ ಗೌರವ ಮರೆಯಲು ಸಾಧ್ಯವಿಲ್ಲ. ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ನನ್ನಿಂದ ಸಾಧ್ಯವಿರುವ ನೆರವು ನೀಡುವೆ. ಈ ನಿಟ್ಟಿನಲ್ಲಿ ಜಾತಿ-ಮತ ಬೇಧವಿಲ್ಲದೆ ಸಹಾಯ ಮಾಡುವೆ” ಎಂದರು.
ಶಾಲೆಯ ಗಣಿತ ಶಿಕ್ಷಕ ವಾಸುದೇವ ರಾವ್ ಕುಡುಪು ಸಿಮ್ಸನ್ ಬಗ್ಗೆ ಅಭಿನಂದನಾ ಭಾಷಣ ಮಾಡಿದರೆ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೊಲಿಟಾ ಪಿರೇರ ಸನ್ಮಾನಪತ್ರ ವಾಚಿಸಿದರು. ಶಾಲಾ ಸಂಚಾಲಕಿ ಭಗಿನಿ ಮಾರಿಲಿಟಾ ಬಿಎಸ್ ಪ್ರಸ್ತಾವಿಕ ಮಾತನ್ನಾಡಿದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿದರು. ಮೂಲ್ಕಿ ಬೆಥನಿ ಶಾಲೆಯ ಮುಖ್ಯ ಶಿಕ್ಷಕಿ ಭಗಿನಿ ವಿದ್ಯಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉದ್ಯಮಿ ದೀಪಕ್ ಸುವರ್ಣ ವಾಮಂಜೂರು, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಪ್ರಿಯಾ ಮೊಂತೆರೋ, ರೋಜಿ ಡಿ’ಕುನ್ಹಾ, ದೈಹಿಕ ಶಿಕ್ಷಕ ಪ್ರಶಾಂತ್ ಹಾಗೂ ಅಂಗಸಂಸ್ಥೆಗಳ ಭಗಿನಿಯರು, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು ಇದ್ದರು. ಶಾಲಾ ಕನ್ನಡ ಶಿಕ್ಷಕಿ ಜ್ಯೋತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.
