ವಿಶಾಖಪಟ್ಟಣ: ಪ್ರೋ.ಕಬ್ಬಡಿ ಆರನೇ ಆವೃತ್ತಿಯ ಅಂತರ್ ವಲಯ “ಚಾಲೆಂಜ್ ವೀಕ್”ನ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 24-37 ಅಂತರದಿಂದ ಜೈಪುರ ಪಿಂಕ್ ಪ್ಯಾಂಥರ್ ಗೆಲುವು ಸಾಧಿಸಿದೆ. ಸತತ ವೈಫಲ್ಯಗಳ ಬಳಿಕ ಮತ್ತೆ ಜೈಪುರ ಈ ಜಯ ಗಳಿಸಿದೆ.

ವಿಶಾಖಪಟ್ಟಣದ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಡೆದ ಪಂದ್ಯದಲ್ಲಿ ದೀಪಕ್ ಹೂಡಾ ಜೈಪುರದ ಗೆಲುವಿಗೆ ಕಾರಣರಾದರು. ದೀಪಕ್ ಒಟ್ಟು 9 ಅಂಕಗಳನ್ನು ರೈಡಿಂಗ್ನಿಂದ ತಂಡಕ್ಕೆ ತಂದುಕೊಟ್ಟರು. ಇವರಿಗೆ ಆನಂದ್ ಪಾಟೀಲ್ (5 ಅಂಕ) ಹಾಗೂ ಅಜಿಂಕ್ಯ ಪವಾರ್ (4 ಅಂಕ) ರೈಡಿಂಗ್ ಮೂಲಕ ಸಾಥ್ ನೀಡಿದರು. ಸುನಿಲ್ ಟ್ಯಾಕಲ್ ನಡೆಸಿದರು. ಒಟ್ಟು 6 ಅಂಕಗಳಿಂದ ತಂಡ ಗೆಲುವು ಕಂಡಿತು.
ತಲೈವಾಸ್ ಪರ ತಾರಾ ಆಟಗಾರರಾದ ಅಜಯ್ ಕುಮಾರ್ (2 ಅಂಕ), ಜಸ್ವೀರ್ ಸಿಂಗ್ (3ಅಂಕ) ಹಾಗೂ ಮಂಜಿತ್ ಚಿಲ್ಲರ್ (0) ಕಳಪೆ ಪ್ರದರ್ಶನ ನೀಡಿದ್ದು, ತಂಡಕ್ಕೆ ಕುತ್ತಾಗಿ ಪರಿಣಮಿಸಿತು. ಇದರಿಂದ ತಮಿಳ್ ಪಡೆ ಭಾರೀ ಹಿನ್ನಡೆ ಕಾಣುವಂತಾಯಿತು. ಕರ್ನಾಟಕದ ರೈಡರ್ ಸುಕೇಶ್ ಹೆಗ್ಡೆ (6 ಅಂಕ) ರೈಡಿಂಗ್ ಮೂಲಕ ಸ್ವಲ್ಪ ಮಿಂಚಿದರು. ಒಟ್ಟಾರೆ ಒಂದು ತಂಡವಾಗಿ ಆಡದೆ ತಲೈವಾಸ್ ಸೋಲು ಅನುಭವಿಸಿತು.
ದ್ವಿತೀಯ ಪಂದ್ಯದಲ್ಲಿ ಅತಿಥೇಯ ತೆಲುಗು ಟೈಟಾನ್ 35-31 ಅಂತರದಿಂದ ಹರ್ಯಾಣ ಸ್ಟೀಲರ್ ತಂಡವನ್ನು ಮಣಿಸಿ ತವರಿನಲ್ಲಿ ಸತತ 2ನೇ ಗೆಲುವು ಸಾಧಿಸಿತು.
