ಬಜಪೆ: ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಇಂದಿಗೂ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತೇವೆ. ಹೆಣ್ಣು ಮಕ್ಕಳ ಮೇಲಾಗುವ ದೌರ್ಜನ್ಯಗಳಿಗೆ ಅವಳು ಧರಿಸುವ ಉಡುಪೇ ಕಾರಣವೆಂದು ನಮ್ಮ ದೌರ್ಬಲ್ಯವನ್ನು ನೇರವಾಗಿ ಅವಳ ತಲೆಗೆ ಕಟ್ಟಿಬಿಡುತ್ತೇವೆ ಎಂದು ವಿಧಾತ್ರೀ ಕಲಾವಿದೆರ್ ಕೈಕಂಬದ ಸ್ಥಾಪಕರಾದ ಭರತ್ ಎಸ್.ಕರ್ಕೇರರವರು ಹೇಳಿದರು.
ಅವರು ಪ್ರಜ್ಙಾ ಸಲಹಾ ಕೇಂದ್ರ, ಕಂಕನಾಡಿ, ಇದರ ನೇತೃತ್ವದಲ್ಲಿ, ಬಜಪೆ ಸಮುದಾಯ ಭವನದಲ್ಲಿ ನಡೆದ ಲಿಂಗ ತಾರತಮ್ಯ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಅವರು ಮಾತನಾಡುತ್ತಾ, ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದರು.ಬಜಪೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರೋಝಿ ಮಥಾಯಸ್ ರವರು ಕಾರ್ಯವನ್ನು ಉಧ್ಘಾಟಿಸಿ ಮಾತನಾಡುತ್ತಾ, ಕುಟುಂಬ ಸಮತೋಲನದಲ್ಲಿ ಮಹಿಳೆಯರ ಪಾತ್ರ ಬಹಳ ಹಿರಿದು ಎಂದರುಗ್ರಾಮ ಪಂಚಾಯತಿ ಉಪಾಧ್ಯಕ್ಷ ಶರೀಫ್ ಮಾತನಾಡುತ್ತಾ, ಕುಟುಂಬದಲ್ಲಾಗಲೀ, ಸಮಾಜದಲ್ಲಾಗಲೀ ತಪ್ಪುಗಳಾದಾಗ, ಮಹಿಳೆಯರನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಮಾತನಾಡುತ್ತಾ, ಇತ್ತೀಚಿನ ವರದಿಯ ಪ್ರಕಾರ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ಪ್ರಮಾಣ ತುಸು ಇಳಿಮುಖವಾಗಿದೆ. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಹಿರಿದು ಎಂದರು. ಇನ್ನೋರ್ವ ಪಂಚಾಯತಿ ಸದಸ್ಯೆ ಆಯಿಷಾರವರು ಮಹಿಳೆಯರು ದೌರ್ಜನ್ಯವನ್ನು ಮೆಟ್ಟಿ ನಿಲ್ಲಬೇಕು ಎಂದು ಕರೆಯಿತ್ತರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷರಾದ ನಿಕೇಶ್ ಶೆಟ್ಟಿಯವರು ಮಕ್ಕಳ ರಕ್ಷಣಾ ಕಾಯ್ದೆಗಳು ಮತ್ತು ಪೋಕ್ಸೊ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.ಸಂಯೋಜಕ ಡೆನ್ನಿಸ್ ಡಿ’ಸೋಜಾರವರು ಕಾರ್ಯಕ್ರಮ ನಿರ್ವಹಿಸಿದರು.ಲಲಿತಾ ಪುಷ್ಪರಾಜ್ ಸ್ವಾಗತಿಸಿದರು. ದಿವ್ಯಾ ಗಟ್ಟಿ ಧನ್ಯವಾದಗಳನ್ನು ಅರ್ಪಿಸಿದರು.
