ಬೆಳ್ತಂಗಡಿ: ಬಾಲಕಿಯೊಬ್ಬಳು ಭಾನುವಾರ ಬೆಳ್ತಂಗಡಿ ಬಸ್ ನಿಲ್ದಾಣ ಸಮೀಪದ ಕಟ್ಟಡವೊಂದರ 2ನೇ ಮಹಡಿಯಿಂದ ಕೆಳಗೆ ಬಿದ್ದ ಬೆನ್ನಿಗೆ ಆಕೆಯ ತಂದೆಯೂ ಮಹಡಿಯಿಂದ ಹಾರಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಮಲವಂತಿಗೆ ಗ್ರಾಮದ ದಿಡುಪೆ ನಿವಾಸಿ ಹೇಮಚಂದ್ರ (58) ಹಾಗೂ ಮಗಳು ಸೇವಂತಿ (12) ಗಾಯಾಳುಗಳು. ಹೇಮಚಂದ್ರ ತನ್ನ ಮಕ್ಕಳಾದ ಸೇವಂತಿ ಹಾಗೂ ಪುತ್ರನನ್ನು ಭಾನುವಾರ ಬೆಳ್ತಂಗಡಿಯ ವೈದ್ಯರೊಬ್ಬರಲ್ಲಿಗೆ ಔಷಧಿಗಾಗಿ ಕರೆದುಕೊಂಡು ಬಂದಿದ್ದರು. ಅವರು ಬಸ್ಸ್ಟ್ಯಾಂಡ್ನಲ್ಲಿ ಕೆಲ ಹೊತ್ತು ಕುಳಿತ್ತಿದ್ದರು ಎಂದು ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ. ಮಧ್ಯಾಹ್ನದ ವೇಳೆಗೆ ಬಸ್ ನಿಲ್ದಾಣ ಬಳಿಯ ಮಹಡಿಯೊಂದರ 2ನೇ ಮಹಡಿಯಿಂದ ಯಾವುದೋ ವಸ್ತು ಬಿದ್ದ ಶಬ್ದ ಅಲ್ಲಿದ್ದ ವರಿಗೆ ಕೇಳಿಸಿದೆ. ನೋಡಿದಾಗ ಬಾಲಕಿ ಮಹಡಿಯಿಂದ ಕೆಳಗೆ ಬಿದ್ದಿರುವುದು ಗಮನಕ್ಕೆ ಬರುತ್ತಿದ್ದಂತೆ ತಂದೆಯೂ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ಬಳಿಕ ಮಂಗಳೂರಿಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಜತೆಯಲ್ಲಿ ಬಂದಿದ್ದ ಹೇಮಚಂದ್ರ ಅವರ ಮಗ ಘಟನೆಯನ್ನು ಕಂಡು ಮೂಕವಿಸ್ಮಿತನಾಗಿದ್ದಾನೆ.
ಆಸ್ಪತ್ರೆಗೆ ಬಂದಿದ್ದ ಹೇಮಚಂದ್ರ ಅವರ ಮಕ್ಕಳಿಬ್ಬರು ಅಸೌಖ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮಕ್ಕಳಿಗೆ ಕೆಲ ದಿನಗಳಿಂದ ಔಷಧಿಯನ್ನು ಮಾಡುತ್ತಿದ್ದರೂ ಗುಣಮುಖರಾಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದರೆಂದು ಹೇಳಲಾಗುತ್ತಿದೆ.
ವೈದ್ಯರಲ್ಲಿಗೆ ಬಂದವರು ಬಸ್ ನಿಲ್ದಾಣದ ಸಮೀಪದ ಮಹಡಿಗೆ ಏಕೆ ಹೋದರೆಂಬುದು ಪ್ರಶ್ನಾರ್ಹವಾಗಿದೆ. ಬಾಲಕಿ ಮಹಡಿಯಿಂದ ಆಕಸ್ಮಿಕ ಬಿದ್ದಳೋ ಅಥವಾ ಬೇರೇನಾದರೂ ಸಂಭವಿಸಿದೆಯೋ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಾಗಿದೆ.
