ಪುತ್ತೂರು: ಇಲ್ಲಿಗೆ ಸಮೀಪದ ನೆಲ್ಲಿಕಟ್ಟೆ ನಿವಾಸಿ ಬಟ್ಟೆ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿ ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯ ಮಾನಭಂಗಕ್ಕೆ ಯತ್ನಿಸಿ, ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಮಾರಣಾಂತಿಕ ಹಲ್ಲೆಗೀಡಾಗಿ ಬಳಿಕ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ಕುಖ್ಯಾತ ಖದೀಮ ಕೆದಂಬಾಡಿ ಗ್ರಾಮದ ಕಟ್ಟತ್ತಾರು ನಿಡ್ಯಾಣ ಕ್ವಾಟ್ರಸ್ ನಿವಾಸಿ ಮುಹಮ್ಮದ್ ಅಶ್ರಫ್(21)ನನ್ನು ಹಾಸನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


7ನೇ ತರಗತಿ ವಿದ್ಯಾರ್ಥಿನಿ ಒಂಟಿಯಾಗಿ ಮನೆಯಲ್ಲಿದ್ದ ಸಂದರ್ಭ ವಿಳಾಸ ಕೇಳುವ ನೆಪದಲ್ಲಿ ಟಿವಿ ನೋಡುವುದಾಗಿ ಮನೆಯೊಳಗಡೆ ಬಂದು ಅಶ್ರಫ್ ಆಕೆಯ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದ. ಈ ವೇಳೆ ಬಾಲಕಿ ಬೊಬ್ಬೆ ಹೊಡೆದಿದ್ದು ಅಶ್ರಫ್ ರಿಕ್ಷಾದಲ್ಲಿ ಪರಾರಿಯಾಗಲು ಯತ್ನಿಸಿದ್ದ. ಸ್ಥಳೀಯರು ಕಾರ್ಯಚರಣೆ ನಡೆಸಿ ಅಶ್ರಫ್ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿದ್ದರು. ಆದರೆ ಅಶ್ರಫ್ ಪೊಲೀಸ್ ಠಾಣೆಯಿಂದಲೇ ತಪ್ಪಿಸಿಕೊಂಡಿದ್ದ.
ಅಶ್ರಫ್ ಡ್ರಗ್ಸ್ ವ್ಯಸನಿಯಾಗಿದ್ದು, ಈ ಹಿಂದೆ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಗುಪ್ತಚರ ಇಲಾಖಾ ಸಿಬ್ಬಂದಿ ಕೃಷ್ಣಪ್ಪ ಎಂಬವರ ಹಲ್ಲೆ ನಡೆಸಿ ಪೊಲೀಸ್ ವಶವಾಗಿದ್ದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ. ಈತನ ಮೇಲೆ ಇನ್ನೂ ಅನೇಕ ಪ್ರಕರಣಗಳು ದಾಖಲಾಗಿವೆ. ಹಾಸನ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಅಶ್ರಫ್ ಸೆರೆಯಾಗಿದ್ದು ಆತನನ್ನು ಪುತ್ತೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
