ಬಂಟ್ವಾಳ:ತಾಲೂಕಿನ  ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಪಿಕಪ್ ಚಾಲಕ ಅಬ್ದುಲ್  ರಹೀಂ (34) ಅವರನ್ನು  ಕೊಲೆಗೈದ ಹಾಗೂ ಜೊತೆಗಿದ್ದ  ಖಲಂದ‌ರ್ ಶಾಫಿ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸರ ತಂಡ ಮೂವರನ್ನು ಬಂಧಿಸಿದ್ದು,ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಖಚಿತಪಡಿಸಿ ಪ್ರಕಟಣೆ ಹೊರಡಿಸಿದ್ದಾರೆ.


ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಕುರಿಯಾಳ ಗ್ರಾಮದ ಮುಂಡರಕೋಡಿ ನಿವಾಸಿ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರ ನಿವಾಸಿ  ಪ್ರಥ್ವಿರಾಜ್ (21) ಹಾಗೂ ಅಮ್ಮುಂಜೆ ಗ್ರಾಮದ. ಶಿವಾಜಿನಗರ ನಿವಾಸಿ  ಚಿಂತನ್ (19) ಎಂಬವರನ್ನು ಬಂಧಿಸಿದ್ದಾರೆ.ಉಳಿದಂತೆ ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳ ಶೋಧಕಾರ್ಯ ಮುಂದುವರಿದಿದೆ ಎಂದು ಅವರ ಪ್ರಕಟಣೆ ತಿಳಿಸಿದೆ.


ಕೃತ್ಯ ನಡೆದ ಬೆನ್ನಲ್ಲೇ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ಅವರನ್ನು ತನಿಖಾಧಿಕಾರಿಯಾಗಿಸಿ 5  ತಂಡಗಳನ್ನು ರಚಿಸಲಾಗಿತ್ತು.ಅಬ್ದುಲ್ ರಹೀಂ ಕೊಲೆ ಪ್ರಕರಣವನ್ನು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದು, ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ನಡೆದು ಕೆಲವೇ ದಿನಗಳಾದ ಕಾರಣ ಇದು ಪ್ರತೀಕಾರದ ಹತ್ಯೆ ಎಂಬ ಅನುಮಾನವೂ ಪೊಲೀಸರಿಗೆ ಎದುರಾಗಿತ್ತು. ಇದೇ ಸಮಯದಲ್ಲಿ ಇದು ಪೂರ್ವದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯವೇ ಎಂಬ  ಶಂಕೆಯು ಪೊಲೀಸರಲ್ಲಿ ವ್ಯಕ್ತವಾಗಿತ್ತು. ಹೀಗಾಗಿ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.


ಆರೋಪಿಗಳು ಕೃತ್ಯ ನಡೆಸುವುದಕ್ಕೆ   ಮೊದಲು ಬಾರೊಂದರಲ್ಲಿ ಮದ್ಯ ಸೇವಿಸಿ  ಎರಡು ಡಿಯೋ ದ್ವಿಚಕ್ರ ವಾಹನದಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದು  ಕೃತ್ಯ ಎಸಗಿದ್ದರೆಂಬ ಅಂಶವು ಪೊಲೀಸರ ತನಿಖೆಯಲ್ಲಿ ಬಯಲಿಗೆ ಬಂದಿದೆ.

ಈ ಕೃತ್ಯದಲ್ಲಿ ಆರು ಮಂದಿ ನೇರವಾಗಿ ಶಾಮೀಲಾಗಿರುವ ಬಗ್ಗೆ ಪೊಲೀಸರು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದು,ಉಳಿದವರ ಪಾತ್ರದ ಬಗ್ಗೆಯು ತನಿಖೆ ಮುಂದುವರಿದಿದೆ.
ಸದ್ಯ ರಹೀಂ ಕೊಲೆ ಹಾಗೂ ಶಾಪಿ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿ ಮೂವರು ಆರೋಪಿಗಳನ್ನು‌ ಬಂಧಿಸಿದ್ದು ಇನ್ನುಳಿದ ಆರೋಪಿಗಳ ಪತ್ತೆಕಾರ್ಯ ವಿಶೇಷ ಪೊಲೀಸ್ ತನಿಖಾ ತಂಡದಿಂದ ಮುಂದುವರಿದಿದೆ.


ಪೊಲೀಸರು ಘಟನೆಯಲ್ಲಿ ಗಾಯಗೊಂಡ ಕಲಂದರ್ ಶಾಫಿ ನೀಡಿದ ಮಾಹಿತಿಯಂತೆ ನಿಸಾರ್ ಎಂಬವರ ದೂರಿನ ಆಧಾರದಲ್ಲಿ 15 ಮಂದಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಆರ್.ಅವರು ಖುದ್ದು ಬಂಟ್ವಾಳಕ್ಕಾಗಮಿಸಿ ಬಂಟ್ವಾಳ ಸಹಿತ ಜಿಲ್ಲೆಯಲ್ಲಿ‌ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು‌ಕೃತ್ಯಕ್ಕೆ ಸಂಬಂಧಿಸಿ ಆರೋಪಿಗಳ ಬಂಧನ,ತನಿಖೆಗೂ‌ಮಾರ್ಗದರ್ಶನ ನೀಡಿದ್ದರು.

ಸಹಜ ಸ್ಥಿತಿಗೆ

ಈ ಘಟನೆಯ ಬಳಿಕ ಬಿ.ಸಿ.ರೋಡು,ಕೊಳತ್ತಮಜಲು, ಬಡಗಬೆಳ್ಳೂರು ಭಾಗದಲ್ಲಿ ಉಂಟಾಗಿದ್ದ ಅಶಾಂತಿಯ ವಾತಾವರಣ ಸಹಜ ಸ್ಥಿತಿಗೆ ಮರಳಿದೆ ಮೇ.30 ಸಂಜೆಯವರೆಗೆ ಸೆ.144 ನಿಷೇದಾಜ್ಞೆ ಜಾರಿಯಲ್ಲಿದ್ದು, ಮುಂಜಾಗೃತಾಕ್ರಮವಾಗಿ ಎಲ್ಲೆಡೆ ಪೊಲೀಸ್ ಬಂದೋಬಸ್ತು ನಿಯೋಜಿಸಲಾಗಿದೆ.ರಾತ್ರಿ ಗಸ್ತನ್ನು ಹೆಚ್ಚಿಸಲಾಗಿದೆ. ಕೊಳತ್ತಮಜಲು ಪರಿಸರ ನೀರವ ಮೌನವಾಗಿದೆ.

By suddi9

Leave a Reply

Your email address will not be published. Required fields are marked *