
ಮುಂಬೈ: ಪತ್ನಿ ಮಾನ್ಯತಾಳ ಆರೋಗ್ಯ ಸ್ಥಿತಿ ಹದಗೆಟ್ಟಿರುವ ಕಾರಣ ಪೆರೋಲ್ನಲ್ಲಿ ಬಿಡುಗಡೆಗೊಂಡಿರುವ ಸಂಜಯ್ ದತ್ತ್ ತಮ್ಮ ಪೆರೋಲ್ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸುವಂತೆ ಜೈಲ್ ಅಧಿಕಾರಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಮಾನ್ಯತಾಗೆ ಶ್ವಾಸಕೋಶ ಸಂಬಂಧಿ ಕಾಯಿಲೆಯಿದ್ದು ಅದಕ್ಕಾಗಿ ಔಷದೋಪಚಾರ ನಡೆಯುತ್ತಿದೆ. ಸದ್ಯ ಆಕೆಗೆ ಹೃದಯ ಸಂಬಂಧಿ ಕಾಯಿಲೆಗಳೂ ಕೂಡಾ ಇದ್ದು ಅದರ ಬಗ್ಗೆ ಇನ್ನಷ್ಟೇ ಸ್ಪಷ್ಟವಾದ ಕಾರಣ ಕಂಡುಕೊಳ್ಳಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಲವು ದಿನಗಳಿಂದ ಆಸ್ಪತ್ರೆಯಲ್ಲಿರುವ ಮಾನ್ಯತಾಳನ್ನು ಆರೈಕೆ ಮಾಡುವ ಸಲುವಾಗಿ ಯೆರವಡಾ ಜೈಲಿನಲ್ಲಿದ್ದ ದತ್ತ್ನನ್ನು ಡಿಸೆಂಬರ್ 21ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಮೂವತ್ತು ದಿನಗಳ ಈ ಪೆರೋಲ್ ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ದತ್ತ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಫೆಬ್ರವರಿ 14ರವರೆಗೆ ವಿಸ್ತರಿಸಲು ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದ್ದರು. ಇದೀಗ ಆ ಅವಧಿಯೂ ಮುಗಿಯುತ್ತಾ ಬಂದಿದ್ದು ಸಂಜಯ್ ದತ್ತ್ ಮತ್ತೊಮ್ಮೆ ತಮ್ಮ ಪೆರೋಲ್ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಅಧಿಕಾರಿಗಳು ಪುರಸ್ಕರಿಸಿದರೆ ಎರಡನೇ ಬಾರಿ ಸಂಜಯ್ಗೆ ಪೆರೋಲ್ ವಿಸ್ತರಣೆ ನೀಡಿದಂತಾಗುತ್ತದೆ. ಆದರೆ ಈ ಬಗ್ಗೆ ಇನ್ನೂ ಕೂಡಾ ಸ್ಪಷ್ಟ ನಿಲುವನ್ನು ಪೊಲೀಸ್ ಅಧಿಕಾರಿಗಳು ತೆಗೆದುಕೊಂಡಿಲ್ಲ.
