ದೆಹಲಿ : 10ನೇ ತರಗತಿಯ ಗಣಿತ ಹಾಗೂ 12 ನೇ ತರಗತಿಯ ಎಕನಾಮಿಕ್ಸ್ ಪತ್ರಿಕೆಗಳ ಮರು ಪರೀಕ್ಷೆ ನಡೆಸಲು ಸಿಬಿಎಸ್ಸಿ ನಿರ್ಧರಿಸಿದೆ.
ಕೆಲವೆಡೆ ಪಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಇತರ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಸಿಬಿಎಸ್ಸಿ ಮಂಡಳಿ ಹೇಳಿದೆ. ಅಲ್ಲದೆ ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಮರು ಪರೀಕ್ಷೆ ನಡೆಸುವುದಾಗಿ ಹೇಳಿದ್ದು, ಸದ್ಯದಲ್ಲೇ ದಿನಾಂಕವನ್ನು ಪ್ರಕಟಿಸುವುದಾಗಿ ಹೇಳಲಾಗಿದೆ.
ಜೊತೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಸ್ವತಂತ್ರ್ಯ ತನಿಖೆಗೆ ಆಗ್ರಹಿಸಿ ಕೆಲ ಪೋಷಕರು ಹಾಗೂ ಶಿಕ್ಷಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಮರು ಪರೀಕ್ಷೆ ದೆಹಲಿ ವಲಯಕ್ಕೆ ಸೀಮಿತವಾಗಿದೆಯೇ ಅಥವಾ ದೇಶಕ್ಕೆ ಅನ್ವಯವಾಗಿದೆಯೇ ಎಂಬುದರ ಬಗ್ಗೆ ಇನ್ನೂ ಸಿಬಿಎಸ್ಸಿ ಸ್ಪಷ್ಟಪಡಿಸಿಲ್ಲ.

